ಸಿದ್ದು- ಬಿಎಸ್ವೈ ಮುಖಾಮುಖಿ : ಆತ್ಮೀಯ ಮಾತುಕತೆ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕಾರ್ಯಕ್ರಮ ಒಂದರಲ್ಲಿ ಭೇಟಿಯಾಗಿ ಪರಸ್ಪರ ಕುಶಲೋಪರಿ ವಿಚಾರಿಸಿದರು. ಆತ್ಮೀಯಯತೆಯಿಂದ ಮಾತುಕತೆ ನಡೆಸಿದರು.
ಬೆಂಗಳೂರು (ಮಾ.09): ಬೆಳಗ್ಗೆಯಿಂದ ಪರಸ್ಪರ ಗುಡುಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಂಜೆ ಅನಿರೀಕ್ಷಿತವಾಗಿ ಎದುರಾದಾಗ ಆತ್ಮೀಯಯತೆಯಿಂದ ಮಾತುಕತೆ ನಡೆಸಿದ ಪ್ರಸಂಗ ಸೋಮವಾರ ನಡೆದಿದೆ.
ನಗರದ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಡೆದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಪುತ್ರಿಯ ವಿವಾಹ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಅವರು ಆಗಮಿಸುವ ವೇಳೆ ಸಿದ್ದರಾಮಯ್ಯ ಪ್ರವೇಶಿಸಿದರು.
ಹೀಗೆ ಮಾಡದಿದ್ರೆ ನನ್ನ ಯಡಿಯೂರಪ್ಪ ಅಂತಾ ಕರೆಯಬೇಡಿ: ಸಿದ್ದುಗೆ ಸಿಎಂ ಓಪನ್ ಚಾಲೆಂಜ್ .
ದೂರದಿಂದಲೇ ನಗುನಗುತ್ತಲೇ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಕುಶಲೋಪರಿ ವಿಚಾರಿಸಿದ ಯಡಿಯೂರಪ್ಪ, ‘ಇದೇನು ನೀವು ನಮಗಿಂತ ಮೊದಲೇ ಬಂದಿದ್ದೀರಲ್ಲ’ ಎಂದು ಪ್ರಶ್ನಿಸಿ ಪರಸ್ಪರ ಕೈಕುಲುಕಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಿದ್ದರಾಮಯ್ಯ, ‘ನಾವು ವಿರೋಧ ಪಕ್ಷದವರು ಮೊದಲೇ ಬರುತ್ತೇವೆ’ ಎಂದರು. ಆ ಮಾತಿಗೆ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಭುಜಕ್ಕೆ ಪ್ರೀತಿಯಿಂದ ತಟ್ಟಿನಿರ್ಗಮಿಸಿದರು.