ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯದ ಒದಗಿಸಿದ ಬಳಿಕ ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದರಿಂದ, ಕ್ಷೇತ್ರದ ಹುಂಡಿಯಲ್ಲಿನ ಕಾಣಿಕೆ ಕೂಡ ಏರಿಕೆಯಾಗಿದೆ. 

ಬೆಳಗಾವಿ (ಜು.14): ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯದ ಒದಗಿಸಿದ ಬಳಿಕ ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದರಿಂದ, ಕ್ಷೇತ್ರದ ಹುಂಡಿಯಲ್ಲಿನ ಕಾಣಿಕೆ ಕೂಡ ಏರಿಕೆಯಾಗಿದೆ. ಹೀಗಾಗಿ ಶಕ್ತಿ ಯೋಜನೆ ಯಲ್ಲಮ್ಮ ದೇವಿ ಗುಡ್ಡಕ್ಕೆ ಆರ್ಥಿಕ ಚೈತನ್ಯವನ್ನೂ ನೀಡಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಮೇ 17 ರಿಂದ ಜೂನ್‌ 30ರ ನಡುವಿನ 45 ದಿನಗಳ ಅವಧಿಯಲ್ಲಿ ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಸೇರಿದಂತೆ ಬರೋಬ್ಬರಿ .1.37 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.

Add Asianetnews Kannada as a Preferred SourcegooglePreferred

2023ರ ಜನವರಿಯಲ್ಲಿ 1.10 ಕೋಟಿ ಸಂಗ್ರಹವಾಗಿತ್ತು. ಇದಾದ ಬಳಿಕೆ ಭಕ್ತರು ನೀಡುವ ಕಾಣಿಕೆಯಲ್ಲಿ ಈಗ .27 ಲಕ್ಷ ಹೆಚ್ಚಳ ಕಂಡಿದೆ. ಯಲ್ಲಮ್ಮ ದೇವಸ್ಥಾನ ಸಿಬ್ಬಂದಿ, ಜಿಲ್ಲಾಧಿಕಾರಿ ಕಚೇರಿ, ಧಾರ್ಮಿಕ ದತ್ತಿ ಇಲಾಖೆ, ಸವದತ್ತಿ ತಹಸೀಲ್ದಾರ ಕಚೇರಿ ಸಿಬ್ಬಂದಿ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ಸಿಬ್ಬಂದಿ ಮೂರು ದಿನಗಳ ಕಾಲ ದೇವಿಯ ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಭಕ್ತರು ಕಾಣಿಕೆ ರೂಪದಲ್ಲಿ ಒಂದು ರುಪಾಯಿ ನಾಣ್ಯದಿಂದ ಹಿಡಿದು ಐದುನೂರು ರುಪಾಯಿಗಳವರೆಗೆ ಹಾಕಿದ್ದ ನೋಟುಗಳನ್ನು ವಿಂಗಡಣೆ ಮಾಡಲಾಯಿತು.

ಡಿಕೆಶಿ ವಿರುದ್ಧದ ತನಿಖೆ ತಡ ಆಗಿಲ್ಲ: ಹೈಕೋರ್ಟ್‌ನಲ್ಲಿ ಸಿಬಿಐ ವಾದ

ಕರ್ನಾಟಕದ ನಾನಾ ಭಾಗಗಳಿಂದ ಮಾತ್ರವಲ್ಲ, ನೆರೆಯ ಮಹಾರಾಷ್ಟ್ರ, ಗೋವಾ ಸೇರಿದಂತೆ ಇನ್ನಿತರೆ ರಾಜ್ಯಗಳಿಂದಲೂ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಯಲ್ಲಮ್ಮ ದೇವಿಗೆ ಕಾಣಿಕೆ ರೂಪದಲ್ಲಿ ನಗದು, ಚಿನ್ನ, ಬೆಳ್ಳಿ ಆಭರಣ ನೀಡುತ್ತಾರೆ. ಅದರಂತೆ ಕಳೆದ ಜೂನ್‌ 11ರಿಂದ ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಯಾದ ಮೇಲೆ ಭಕ್ತರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಏರಿಕೆ ಕಂಡಿತು. ಪರಿಣಾಮ ಮಹಿಳೆಯರ ಸಂಖ್ಯೆಯೂ ಕೂಡ ಹೆಚ್ಚಳವಾಯಿತು. ಹೀಗಾಗಿ 45 ದಿನಗಳ ಅವಧಿಯಲ್ಲಿ ಯಲ್ಲಮ್ಮ ದೇವಸ್ಥಾನಕ್ಕೆ ಬಂದ ಭಕ್ತರು .1.37 ಕೋಟಿ ಮೌಲ್ಯದ ಕಾಣಿಕೆ ಅರ್ಪಿಸಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ತಿಳಿಸಿದ್ದಾರೆ.

ವಿದ್ಯುತ್‌ ಶುಲ್ಕ ಹೆಚ್ಚು ಬಂದಿದ್ದಕ್ಕೆ ಬಿಲ್‌ ಕಲೆಕ್ಟರ್‌ಗೆ ಚೂರಿ ಇರಿತ

ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಪ್ರಯಾಣದ ಸೌಲಭ್ಯ ಕಲ್ಪಿಸಿದ ಬಳಿಕ ದೇವಸ್ಥಾನಕ್ಕೆ ಬರುವ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಳಗೊಂಡಿದೆ. ಹಾಗಾಗಿ, ಕಾಣಿಕೆ ಪ್ರಮಾಣ ವೃದ್ಧಿಗೊಂಡಿದೆ. ಈ ಮೊತ್ತವನ್ನು ರಿಂಗ್‌ ರಸ್ತೆ, ತಂಗುದಾಣ ನಿರ್ಮಾಣ ಸೇರಿದಂತೆ ಭಕ್ತರಿಗೆ ಮೂಲಭೂತ ಸೌಕರ್ಯಒದಗಿಸಲು ಬಳಸಲಾಗುವುದು ಎಂದು ಹೇಳಿದರು. ಈ ವೇಳೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವೈ.ವೈ.ಕಾಳಪ್ಪನವರ, ಎಂಜಿನಿಯರ್‌ ಎ.ವಿ.ಮುಳ್ಳೂರ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಬಸವರಾಜ ಜಿರಗ್ಯಾಳ, ಅಧೀಕ್ಷಕ ಸಂತೋಷ ಶಿರಸಂಗಿ, ಪರಿವೀಕ್ಷಕ ಶೀತಲ ಕಡಟ್ಟಿ, ಎಂ.ಎಸ್‌.ಯಲಿಗಾರ, ಎಂ.ಪಿ.ದ್ಯಾಮನಗೌಡ್ರ, ಅಲ್ಲಮಪ್ರಭು ಪ್ರಭುನವರ ಮೊದಲಾದವರು ಪಾಲ್ಗೊಂಡಿದ್ದರು.