ಧಾರಾವಾಹಿ ನಟಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಆಕೆಯ ಸ್ನೇಹಿತನನ್ನು ಅನ್ನಪೂಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು: ಧಾರಾವಾಹಿ ನಟಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಆಕೆಯ ಸ್ನೇಹಿತನನ್ನು ಅನ್ನಪೂಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ನಟಿ ಜೀವಿತಾ (26) ಕೊಟ್ಟ ದೂರಿನ ಮೇರೆಗೆ ಆರೋಪಿ ಚೇತನ್ ಟೆಮ್ಕರ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ಜೀವಿತಾ ಧಾರಾವಾಹಿ ನಟಿಯಾಗಿದ್ದು, ಹಲವು ವರ್ಷಗಳಿಂದ ಚೇತನ್ ಹಾಗೂ ಜೀವಿತಾ ಸ್ನೇಹಿತನಾಗಿದ್ದರು. ಚೇತನ್, ಅನ್ನಪೂಣೇಶ್ವರಿ ನಗರದ ಶ್ರೀಗಂಧ ಕಾವಲ್ ಬಸ್‌ನಿಲ್ದಾಣ ಸಮೀಪವಿರುವ ಜೀವಿತಾ ಅವರ ಮನೆಗೆ ಸೆ.27 ರಂದು ರಾತ್ರಿ 10.30ರ ಸುಮಾರಿಗೆ ಕಂಠಪೂರ್ತಿ ಮದ್ಯ ಸೇವಿಸಿ ತೆರಳಿದ್ದ. ಈ ವೇಳೆ ಜೀವಿತಾ ಅವರು ವೀಪರಿತ ಮದ್ಯ ಸೇವಿಸಿ ದ್ದೀಯಾ ಬೆಳಗ್ಗೆ ಮಾತನಾಡೋಣ ಇಲ್ಲಿಂದ ಹೊರಡು ಎಂದು ಚೇತನ್‌ಗೆ ಹೇಳಿದ್ದರು. ಈ ವೇಳೆ ಆರೋಪಿ ಕುಡಿಯಲು ಒಂದು ಗ್ಲಾಸ್ ನೀರು ಕೇಳಿದ್ದಾನೆ. 

ಬಳಿಕ ಏಕಾಏಕಿ ಬಾಗಿಲು ಮುಚ್ಚಿ ನಟಿಯ ಕೈಯನ್ನು ಹಿಡಿದು ಗೋಡೆಗೆ ತಳ್ಳಿ ಕತ್ತು ಹಿಸುಕಿ ಹತ್ಯೆ ಮಾಡಲು ಯತ್ನಿಸಿದ್ದಾನೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ನಿನ್ನನ್ನು ಜೀವಂತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ನಟಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು. ಆರೋಪಿ ವಿರುದ್ಧ ಹಲ್ಲೆ, ಜೀವಬೆದರಿಕೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.