ರಮೇಶ್ ಆಯ್ತು ಈಗ ಸತೀಶ್ ಜಾರಕಿಹೊಳಿ ಸ್ಫೋಟ?
ಇಷ್ಟು ದಿನಗಳ ಕಾಲ ರಮೇಶ್ ಜಾರಕಿಹೊಳಿ ಸರ್ಕಾರದ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುತ್ತಿದ್ದರು. ಇದೀಗ ಸತೀಶ್ ಜಾರಕಿಹೊಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು : ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ದೊರೆಯುತ್ತಿದ್ದಷ್ಟು ಅನುದಾನ ಈ ಸರಕಾರದಲ್ಲಿ ಸಿಗುತ್ತಿಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅಲ್ಲದೆ, ಸಮ್ಮಿಶ್ರ ಸರಕಾರ ಇನ್ನೂ ಟೇಕಾಫ್ ಆಗಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮಿಶ್ರ ಸರಕಾರ ಇನ್ನೂ ಟೇಕಾಫ್ ಆಗಿಲ್ಲ ಎಂಬುದು ಖಚಿತ. ಆದರೆ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಮುಂದೆ ಟೇಕಾಫ್ ಆಗುತ್ತದೆ ಎಂಬ ವಿಶ್ವಾಸವಿದೆ. 2 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಆಗಿರುವುದರಿಂದ ವಿವಿಧ ಇಲಾಖೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿದುಕೊಳ್ಳಲು ಕೆಲ ಕಾಲಾವಕಾಶ ಬೇಕಾಗುತ್ತದೆ. ಕುಮಾರಸ್ವಾಮಿ ಅವರು ಸಮರ್ಥರಿದ್ದು, ತಿಳಿದುಕೊಂಡು ಮುಂದೆ ಹೋಗುತ್ತಾರೆ’ ಎಂದು ಹೇಳಿದರು.
‘ಶಾಸಕರಿಗೆ ಈ ಸರಕಾರದಲ್ಲಿ ಅನುದಾನ ಕಡಿಮೆ ಆಗಿದೆ ಎಂಬುದು ನಿಜ. ಹಿಂದಿನ ಸಿದ್ದರಾಮಯ್ಯ ಅವಧಿಯಲ್ಲಿ ಹೆಚ್ಚು ಅನುದಾನ ಸಿಗುತ್ತಿತ್ತು. ಈ ಹಿಂದೆ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಇಲಾಖೆ ಕಾಮಗಾರಿಗಳಿಗೆ ಪ್ರತಿ ಕ್ಷೇತ್ರಕ್ಕೆ 40 ಕೋಟಿ ರು. ನೀಡಿದ್ದರು. ಆದರೆ, ಈ ಅವಧಿಯಲ್ಲಿ 20 ಕೋಟಿ ರು. ಮಾತ್ರ ನೀಡಲಾಗಿದೆ’ ಎಂದರು.
‘ಸಮ್ಮಿಶ್ರ ಸರಕಾರವು ರೈತರ ಸಾಲ ಮನ್ನಾಗೆ ಹಣ ಖರ್ಚು ಮಾಡಿದೆ. ಈ ಹಣವೆಲ್ಲಾ ಅಭಿವೃದ್ಧಿ ಕಾರ್ಯಗಳ ಹಣವೇ ಆಗಿರುವುದರಿಂದ ಅಭಿವೃದ್ಧಿಗೆ ಹಣ ಸಾಲುತ್ತಿಲ್ಲ. ಆದರೆ, ದೊಡ್ಡ ಪ್ರಮಾಣದಲ್ಲಿ ಯಾವ ಯೋಜನೆಯೂ ನಿಂತಿಲ್ಲ ಬದಲಿಗೆ ಪ್ರಮಾಣ ಕಡಿಮೆ ಆಗಿದೆ. ಎಲ್ಲಾ ಇಲಾಖೆಗಳ ಕೆಲಸಗಳೂ ನಡೆಯುತ್ತಿವೆ. ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಮುಂದುವರೆಸುವ ಜತೆಗೆ ಜೆಡಿಎಸ್ ನೂತನ ಕಾರ್ಯಕ್ರಮಗಳನ್ನು ನೀಡಿದೆ. ಹೀಗಾಗಿ ಅನುದಾನ ಕಡಿಮೆಯಾಗಿದ್ದು, ಮುಂದಿನ ಅವಧಿಗೆ ಸೂಕ್ತ ಅನುದಾನ ದೊರೆಯುವ ನಿರೀಕ್ಷೆ ಇದೆ’ ಎಂದರು.