Asianet Suvarna News Asianet Suvarna News

‘ಮರಳು ಕಳ್ಳ’ರಿಗೆ ಕಲಬುರಗಿಯಲ್ಲಿ ಯಾರ ಭಯವೂ ಇಲ್ರಿ!

ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಮತ್ತೆ ಶುರುವಾಗಿದೆ. ಮುಂಗಾರು ಮಳೆ ವಿಳಂಬವಾಗಿರುವಂತೆಯೇ ದಂಧೆಕೋರರು ಜೆಸಿಬಿ, ಟ್ರ್ಯಾಕ್ಟರ್‌, ಟಿಪ್ಪರ್‌ ಸಮೇತ ನೇರವಾಗಿ ನದಿಗಳಿಗೆ ಧುಮುಕಿದ್ದಾರೆ.

Sand thieves have no fear in Kalaburagi at kalaburagi rav
Author
First Published Jun 17, 2023, 4:41 AM IST

ಶೇಷಮೂರ್ತಿ ಅವಧಾನಿ

ಲಬುರಗಿ (ಜೂ.17) : ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಮತ್ತೆ ಶುರುವಾಗಿದೆ. ಮುಂಗಾರು ಮಳೆ ವಿಳಂಬವಾಗಿರುವಂತೆಯೇ ದಂಧೆಕೋರರು ಜೆಸಿಬಿ, ಟ್ರ್ಯಾಕ್ಟರ್‌, ಟಿಪ್ಪರ್‌ ಸಮೇತ ನೇರವಾಗಿ ನದಿಗಳಿಗೆ ಧುಮುಕಿದ್ದಾರೆ.

ಜಿಲ್ಲೆಯ ಅಫಜಲ್ಪುರ, ಜೇವರ್ಗಿಯಲ್ಲಿರುವ ಭೀಮಾ, ಚಿತ್ತಾಪುರ, ಶಹಾಬಾದ್‌, ವಾಡಿ, ಸೇಡಂ ಭಾಗದಲ್ಲಿರುವ ಕಾಗಿಣಾ, ಅಲ್ಪಸ್ವಲ್ಪ ಅಮರ್ಜಾ ನದಿಗಳ ಒಡಲಲ್ಲಿ ಜೆಸಿಬಿಗಳ ಅಬ್ಬರ ಶುರುವಾಗಿದೆ. ನದಿ ತೀರದ ಖಾಲಿ ಹೊಲಗದ್ದೆಗಳಲ್ಲಿ ದಾಸ್ತಾನು ಇರುವ ಸಾವಿರಾರು ಟನ್‌ ಅಕ್ರಮ ಮರಳಿಗೂ ಕಳ್ಳರು ಲಗ್ಗೆ ಇಟ್ಟಿದ್ದಾರೆ. ಭೀಮಾ, ಕಾಗಿಣಾ ತೀರದಿಂದಲೇ ನಿತ್ಯ ಸಾವಿರ ಟ್ರಿಪ್‌ಗೂ ಹೆಚ್ಚು ಮರಳು ವಿಜಯಪುರ, ಸೊಲ್ಲಾಪುರ, ಅಕ್ಕಲಕೋಟೆ, ದೂರದ ತೆಲಂಗಾಣ, ಆಂಧ್ರ ಪಟ್ಟಣಗಳನ್ನು ಸೇರುತ್ತಿದೆ.

ಅಕ್ರಮ ಮರಳು ಗಣಿಗಾರಿಕೆ ತಡೆಗೆ ಕಠಿಣ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಕನ್ನಡಪ್ರಭಕ್ಕೆ ಲಭ್ಯ ಮಾಹಿತಿ ಪ್ರಕಾರ ಅಫಜಲ್ಪುರ ತಾಲೂಕಿನ ಶೇಷಗಿರಿವಾಡಿ, ಮಣ್ಣೂರ, ಉಡಚಣದಿಂದ ಶುರುವಾಗುವ ಮರಳು ಲೂಟಿ ಮುಂದೆ ಹಾಗೆಯೇ ದುದಣಗಿ, ಗೋಳನೂರ್‌, ಘತ್ತರಗಾ, ಮಂಗಳೂರು, ಗಾಣಗಾಪುರ, ಬನ್ನಟ್ಟಿಸೇರಿದಂತೆ 25ಕ್ಕೂ ಹೆಚ್ಚು ಊರುಗಳಲ್ಲಿ ಹಾಸುಹೊಕ್ಕಾಗಿದೆ. 1 ಟ್ರ್ಯಾಕ್ಟರ್‌ ಮರಳಿಗೆ 6ರಿಂದ 8 ಸಾವಿರ, 1 ಟಿಪ್ಪರ್‌ಗೆ 40 ಸಾವಿರದಂತೆ ಬೆಲೆ ನಿಗದಿಪಡಿಸಿದ್ದು ಏನಿಲ್ಲವೆಂದರು ಸಾವಿರ ಟ್ರಿಪ್‌ ಮರಳು ಕಳವಾಗುತ್ತಿದ್ದರೂ ಕೇಳೋರಿಲ್ಲದಂತಗಿದೆ.

ಆಡಳಿತವೇ ದಂಧೆಕೋರರ ಮುಂದೆ ಮಂಡಿಯೂರಿತೆ?:

ಹೀಗೆ ಮರಳು ಸಾಗಿಸುವವರಲ್ಲಿ ಯಾರೂ ಪರವಾನಿಗೆ ಪಡೆದವರಿಲ್ಲ, ಇವರಿಗೆ ಯಾವುದೇ ನದಿಯಲ್ಲಿ ಎಲ್ಲಿಯೂ ಇಂಚು ಜಾಗ ಕೂಡಾ ಗುರುತಿಸಿ ಇಲ್ಲಿ ಮರಳುಗಾರಿಕೆ ಮಾಡಿರೆಂಬ ಆದೇಶಗಳೂ ಇಲ್ಲ.

ಆದಾಗ್ಯೂ ರಾಜಾರೋಶವಾಗಿ ಇವರೆಲ್ಲರೂ ರಾತ್ರಿಯಾದೊಡನೆ ಎಚ್ಚೆತ್ತು ಮರಳು ಕಳವಿಗೆ ಮುಂದಾಗುತ್ತಾರೆ. ತಮ್ಮ ಅಕ್ರಮ ಕೆಲಸ ಸುಗಮವಾಗಲು ಎಲ್ಲರ ಕೈ ಬೆಚ್ಚದೆ ಮಾಡುತ್ತಾರೆ, ಜೇಬು ತುಂಬಾ ಮಾಮೂಲು ಕೊಡುತ್ತಾರೆ. ಇದಕ್ಕೂ ಮೀರಿ ದಾರಿಗೆ ಅಡ್ಡ ಬಂದರೆ ನೆಲೋಗಿಯಲ್ಲಾದಂತೆ ಮರಳುಗಾರಿಕೆ ತಡೆಯೋದಕ್ಕೆ ಮುಂದಾಗುವವರನ್ನೇ ಬಲಿ ಪಡೆಯುವ ಹಂತ ತಲುಪಿದ್ದಾರೆ. ಮರಳು ದಂಧೆಕೋರರು ಈ ಪರಿ ಬೆಳೆದದ್ದು ನೋಡಿದರೆ ಜಿಲ್ಲಾಡಳಿತ, ಪæäಲೀಸ್‌ ವ್ಯವಸ್ಥೆಯೇ ಅಕ್ರಮ ಮರಳುಗಾರರ ಮುಂದೆ ಮುಂಡಿಯೂರಿತೆ? ಎಂಬ ಶಂಕೆ ಕಾಡದಿರದು.

ಭೀಮಾ ತೀರದಲ್ಲೆಲ್ಲಾ ಸಾವಿರಾರು ಟನ್‌ ಮರಳುಗುಡ್ಡೆ!

ಅಫಜಲ್ಪುರ, ಜೇವರ್ಗಿ ತಾಲೂಕಿನ ಭೀಮಾ ತೀರದಗುಂಟ ಎಲ್ಲಿ ನೋಡಿದರೂ ಸಾವಿರಾರು ಟನ್‌ ಮರಳು ಗುಡ್ಡೆ ಹಾಕಲಾಗಿದೆ. ನದಿಯ ಒಡಲು ಬಗೆದು ಹಾಕಿರುವ ಮರಳು ಗುಡ್ಡೆಯಿಂದಲೇ ಇದೀಗ ಲೂಟಿಕೋರರು ಮರಳನ್ನು ಆಗಿಸುತ್ತ ಕಮಾಯಿಸುತ್ತಿದ್ದಾರೆ. ಇಂತಹ ಮರಳು ಸಾಗಾಟದಿಂದ ಸರ್ಕಾರಕ್ಕಂತೂ ನಯಾಪೈಸೆ ಲಾಭವಿಲ್ಲ. ರಾಜಧನವೂ ಇಲ್ಲ, ಜಿಲ್ಲಾಡಳಿತದ ಬಳಿಗೆ ಖಜಾನೆ ಧನವೆಂದು ಹಣವೂ ಸಂಗ್ರಹವಾಗೋದಿಲ್ಲ. ಅದೇನಿದ್ದರೂ ಲಾಭಾಂಶವೆಲ್ಲವೂ ದಂಧೆಕೋರರ ಜೇಬು ತುಂಬುತ್ತಿದೆ. ಕಾಗಿಣಾ ತೀರದ ಚಿತ್ತಾಪುರ, ಸೇಡಂಗಳಲ್ಲಿಯೂ ಮರಳು ಲೂಟಿ ಇತ್ತಾದರೂ ಈಚೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಈ ವಿಚಾರದಲ್ಲಿ ಡಕ್‌ ಸಂದೇಶ ರವಾನಿಸಿದ್ದರಿಂದ ಅಲ್ಲೀಗ ಮರಳುಗಾರಿಕೆ ಅಕ್ರಮಗಳಿಗೆ ತುಸು ಕಡಿವಾಣ ಬಿದ್ದಿದೆ ಎಂಬ ಸುದ್ದಿಗಳಿವೆಯಾದರೂ ವಾಸ್ತವದಲ್ಲಿ ದಂಧೆಕೋರರು ಇಲ್ಲೂ ಅಲ್ಲಲ್ಲಿ ಕದ್ದುಮುಚ್ಚಿ ತಮ್ಮ ಕೆಲಸ ಸಾಧಿಸುತ್ತಿರೋದಂತೂ ಇನ್ನೂ ನಿಂತಿಲ್ಲ.

ಕಲಬುರಗಿಯಲ್ಲಿ ಇದೊಂದೇ ‘ಪಕ್ಷಾತೀತ’ ದಂಧೆ!

ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಸಾಗಿರುವ ಏಕೈಕ ದಂಧೆ ಎಂದರೆ ಮರಳುಗಳ್ಳತನ ಒಂದೇ ಎನ್ನಬಹುದು. ಏಕೆಂದರೆ ಇಲ್ಲಿನ ಪ್ರಕರಣಗಳಲ್ಲಿ ಒಳಹೊಕ್ಕು ನೋಡಿದಾಗ ಬಹುತೇಕ ಶೇ.80ರಷ್ಟುಪ್ರಕರಣಗಳಲ್ಲಿ ಎಲ್ಲಾ ಪ್ರಮುಖ ಪಕ್ಷದವರದ್ದೂ ಪಾಲು ಇರೋದು ಸ್ಪಷ್ಟ. ಗೆದ್ದು ಬರುವ ಶಾಸಕರೂ ದಂಧೆಕೋರರಿಗೆ ಬೆಂಗಾವಲಾಗಿರುವ ಅನಿವಾರ್ಯತೆಯೂ ಇಲ್ಲಿದೆ. ಪೊಲೀಸರು ಇಂತಹ ಪ್ರಕರಣಗಳಲ್ಲಿ ಮುಂದೇನು ಮಾಡಬೇಕೆಂದು ಗೊತ್ತಾಗದೆ ಶಾಂತಿಸಭೆ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ.

ನಾಲ್ಕು ದಿನದ ಹಿಂದಷ್ಟೇ ಅಫಜಲ್ಪುರ ತಾಲೂಕಿನ ಮಣ್ಣೂರಲ್ಲಿ ಅಕ್ರಮ ಮರಳು ಸಾಗಾಟದ ವಿಚಾರದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ತಂಟೆ ತಕರಾರು ದೊಡ್ಡದಾಗಿತ್ತಲ್ಲದೆ ಇಂದಿಗೂ ಊರಲ್ಲಿ ಪೊಲೀಸ್‌ ವಾಹನ ಕಾವಲಿಗಿದೆ. ಈ ಘಟನೆ ಊರಿನ ಶಾಂತಿ- ನೆಮ್ಮದಿ ಕದಡಿದೆ, ಮರಳುಗರಿಕೆ ಇಲ್ಲಿ ಪಕ್ಷಾತೀತ ಎನ್ನಲು ಇನ್ನೇನು ಬೇಕು ಹೇಳಿ?

ಅಕ್ರಮ ಮರಳಿನ ಅನೇಕ ದಂಧೆಕೋರರು ವಿಷಯ ತಿರುಚುತ್ತ ತಾವು ಆಪ್ತರಾಗಿರುವ ಶಾಸಕರು ಹಾಗೂ ಮಂತ್ರಿಗಳಿಂದ ಪæäಲೀಸರಿಗೆ, ಕಂದಾಯದವರಿಗೆ ಮಾತನಾಡಿಸುತ್ತಲೂ ತಮ್ಮ ಕೆಲಸ ಸಲೀಸಾಗಿ ಮಾಡಿಕೊಳ್ಳುತ್ತಿದ್ದಾರೆ, ಈ ಬೆಳವಣಿಗೆ ಈಚೆಗಿನ ದಿನಗಳಲ್ಲಿ ವಿಪರೀತವಾಗಿರೋದು ಜಿಲ್ಲೆಯಲ್ಲಿ ಮರಳುಗಳ್ಳತನ ರಾಜಾರೋಷವಾಗಿ ಸಾಗಲು ಕಾರಣವಾಗಿದೆ.

ಜೇವರ್ಗಿ, ಅಫಜಲ್ಪುರ ಭೀಮಾ ತೀರದಿಂದ ಮರಳು ತುಂಬಿಕೊಂಡು ನಾಗಾಲೋಟದಲ್ಲಿ ಕಲಬುರಗಿ ನಗರ ಪ್ರವೇಶಿಸುವ ವಹನಗಳು ನಗರದಲ್ಲಿ ಅಪಘಾತಗಳಿಗೂ ಕಾರಣವಾಗುತ್ತಿವೆ. ರಾಮ ಮಂದಿರ ವೃತ್ತವಂತೂ ಇಂತಹ ಅಪಘಾತಗಳಿಗೆ ಸಾಕ್ಷಿಯಾಗುತ್ತಲೇ ಇದ್ದರೂ ಯಾರೊಬ್ಬರೂ ಗಮನಿಸುತ್ತಿಲ್ಲ.

 

ಕಲಬುರಗಿ: ಅಕ್ರಮ ಮರಳು ಸಾಗಾಟಕ್ಕೆ ಕಾನ್‌ಸ್ಟೇಬಲ್‌ ಬಲಿ, ಕೊಲೆಯೋ, ಆಕಸ್ಮಿಕವೋ?

ಅಕ್ರಮ ಮರಳು ದಂಧೆಕೋರರು ಜಿಲ್ಲೆಯಲ್ಲಿ ದಿನಗಳೆದಂತೆ ಪ್ರಭಾವಿಗಳಾಗುತ್ತ ಬೆಳೆಯುತ್ತಿರೋದರಿಂದ ನದಿ ತೀರದಲ್ಲಿ ಈ ದಂಧೆ ಹೆಡೆ ಬಿಚ್ಚುತ್ತಿದೆ. ನೆಲೋಗಿ ಘನೆಯಲ್ಲಿ ಪೇದೆಯ ಆವಗೆ ಮರಳು ಕಳ್ಳರೆ ಕಾರಣರಾಗಿರೋದಂತೂ ಜಿಲ್ಲೆಯಲ್ಲಿ ದಂಧೆ ಅದ್ಹೇಗೆ ಬೆಳೆದು ನಿಂತಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ಇನ್ನಾದರೂ ಇಲ್ಲಿನ ಶಾಸಕರು, ಸಚಿವರು ಮರಳುಗಳ್ಳರಿಗೆ ಬೆಂಬಲವಾಗಿ ನಿಲ್ಲೋದನ್ನ ಬಿಡುವರೆ? ಜಿಲ್ಲಾಡಳಿತ, ಪೊಲೀಸ್‌ ಜಾಣ ಕುರುಡುತನದಿಂದ ಹೊರಬಂದು ಕಳ್ಳರನ್ನು ಕಂಬಿ ಎಣಿಸುವಂತೆ ಮಾಡುವರೆ? ಕಾದುನೋಡಬೇಕಷ್ಟೆ.

Follow Us:
Download App:
  • android
  • ios