ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಂಸ್ಕೃತಿಯ ಉಳಿವಿಗಾಗಿ ಏಕತೆ, ಸಮನ್ವತೆ ಮುಖ್ಯ ಎಂದು ಪ್ರತಿಪಾದಿಸಿದರು. ಶ್ರೀರಾಮಚಂದ್ರಾಪುರ ಮಠದ ಶಿಕ್ಷಣ ಕ್ರಮವನ್ನು ಶ್ಲಾಘಿಸಿದರು.

ಹರಿಹರಪುರದ ಶ್ರೀಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾ ಮಠಕ್ಕೆ ಚಿತ್ತೈಸಿ ಆಶೀರ್ವಚನವನ್ನ ಅನುಗ್ರಹಿಸಿದರು. ಕಳೆದ ವರ್ಷ ಇದೇ ದಿನಾಂಕದಂದು ಅಯ್ಯೋಧ್ಯೆಯ ರಾಮಮಂದಿರದಲ್ಲಿ ಉಭಯ ಮಠಗಳ ಶ್ರೀಗಳ ಸಮಾಗಮವಾಗಿತ್ತು. ಈ ವರ್ಷ ಬೆಂಗಳೂರಿನ ಶ್ರೀರಾಮಚಂದ್ರಾಪುರ ಮಠದಲ್ಲಿ ಉಭಯ ಶ್ರೀಗಳ ಸಾನ್ನಿಧ್ಯ, ಅಮೃತವಚನದ ಭಾಗ್ಯ ಭಕ್ತರಿಗೊದಗಿಬಂದಿತ್ತು. 

ವೈವಿಧ್ಯತೆ ಅಡಕವಾಗಿರುವ ಸಂಸ್ಕೃತಿಯ ಪ್ರಾಣವಿರುವುದೇ ಏಕತೆಯಲ್ಲಿ. ಒಗ್ಗಟ್ಟಾಗಿರುವ ಮೂಲಕ ಸಂಸ್ಕೃತಿಯ ಉಳಿವಿಗಾಗಿ, ಸಂಸ್ಕೃತಿಯ ಸಂರಕ್ಷಣೆಗಾಗಿ ಪ್ರಯತ್ನಿಸಬೇಕಾಗಿದೆ. ಮುಂದಿನ ತಲೆಮಾರಿಗಾಗಿ ಸಂಸ್ಕೃತಿಯನ್ನು, ಪರಂಪರೆಯನ್ನು ಕಾಪಿಟ್ಟುಕೊಳ್ಳುವ ಕೆಲಸವಾಗಬೇಕಾಗಿದೆ. ಸರ್ವರಿಗೂ ಮುಕ್ತಚಿಂತನೆಗೆ ಅವಕಾಶ ನೀಡುವ ಏಕೈಕ ಧರ್ಮ ಸನಾತನ ಹಿಂದೂ ಧರ್ಮ. ಸಧರ್ಮ ಪಾಲನೆಯ ಮೂಲಕ ಅಸ್ತಿತ್ವ ಉಳಿಸಿಕೊಂಡು ಸಮನ್ವತೆಯ ದೃಷ್ಟಿಕೋನವನ್ನಿಟ್ಟುಕೊಂಡು, ಸಮಷ್ಟಿಯ ಹಿತಚಿಂತನೆಯೊಂದಿಗೆ ಸಮಾಜದ ಏಳಿಗೆಗಾಗಿ ಶ್ರಮಿಸಬೇಕಾಗಿದೆ. ಎರಡು ಅದ್ವೈತ ಪೀಠಗಳು, ಎರಡು ಪೀಠಗಳು ಶ್ರೀಶಂಕರಭಗವತ್ಪಾದರಿಂದ ಸಂಸ್ಥಾಪಿಸಲ್ಪಟ್ಟಿದ್ದು, ಉಭಯ ಪೀಠಗಳಿಂದ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ತಲುಪಿಸುವ, ಸಂಸ್ಕೃತಿಯನ್ನು ಸಮೃದ್ಧಗೊಳಿಸುವ, ಸಧರ್ಮ ಪರಿಪಾಲನೆ ಮಾಡುವಂತೆ ಪ್ರೇರೆಪಿಸುವ ಸತ್ಕಾರ್ಯಗಳನ್ನು ಆಗಿದೆ, ಆಗುತ್ತಲಿವೆ ಎಂಬುದಾಗಿ ಆಶೀರ್ವಚನವನ್ನಿತ್ತರು. ಭಾರತೀಯ ಸಂಸ್ಕೃತಿಯನ್ನು, ಭಾರತೀಯತೆಯನ್ನು ಮೂಲವಾಗಿರಿಸಿಕೊಂಡು ಶಿಕ್ಷಣ ನೀಡುತ್ತಿರುವ ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶಿಕ್ಷಣಕ್ರಮವನ್ನು ಶ್ಲಾಘಿಸಿದರು.

ಇದನ್ನೂ ಓದಿಬ್ರಾಹ್ಮಣ ಮಹಾ ಸಮ್ಮೇಳನ ಸುವರ್ಣ ಸಂಭ್ರಮ: ಬ್ರಾಹ್ಮಣರಲ್ಲಿ ವಿವಾಹ ವಿಚ್ಛೇದನ ಹೆಚ್ಚಳ: ಸ್ವರ್ಣವಲ್ಲೀ ಶ್ರೀಗಳು ಕಳವಳ!

ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹರಿಹರಪುರ ಮಠದ ಶಿಕ್ಷಣ ಮಾದರಿಯ ಬಗ್ಗೆ, ಪರಂಪರೆಯ ಉಳಿಸುವ ಶಿಕ್ಷಣ ನೀಡುವ ಸಾಹಸ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀರಾಮಚಂದ್ರಾಪುರ ಮಠದ ಸಮ್ಮುಖ ಸರ್ವಧಿಕಾರಿಗಳಾದ ಟಿ. ಮಡಿಯಾಲ್, ಪ್ರಶಾಸನಾಧಿಕಾರಿಗಳಾದ ಸಂತೋಷ ಹೆಗಡೆ, ವಿತ್ತಾಧ್ಯಕ್ಷರಾದ ಗಣೇಶ್ ಜೆ. ಎಲ್., ಹವ್ಯಕ ಮಹಾಮoಡಲದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ, ಶ್ರೀಪರಿವಾರದ ಮಧು ಜಿ.ಕೆ., ಶ್ರೀರಾಮಾಶ್ರಮದ ಅಧ್ಯಕ್ಷರಾದ ರಮೇಶ ಹೆಗಡೆ ಕೋರಮಂಗಲ, ಶ್ರೀ ಅಖಿಲ ಹವ್ಯಕ ಮಹಾಸಭಾ ಪ್ರಧಾನ ಕಾರ್ಯದರ್ಶಿಗಳಾದ ಸಿಎ ವೇಣು ವಿಘ್ನೇಶ್, ಹಿರಿಯ ವಕೀಲರಾದ ಡಾ| ಅರುಣ ಶ್ಯಾಮ, ಶ್ರೀಮಠದ ಪ್ರಮುಖರಾದ ವಿದ್ವಾನ್ ಜಗದೀಶ ಶರ್ಮಾ ಸಂಪ, ಆರ್. ಎಸ್. ಹೆಗಡೆ ಹರಗಿ, ಧರ್ಮಕರ್ಮ ವಿಭಾಗದ ರಾಮಕೃಷ್ಣ ಭಟ್ ಕೂಟೇಲು, ಶ್ರೀಮಠ ಅಂಗಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಉಭಯ ಪೀಠಗಳು ಸಮಾಜಮುಖಿ ಲೋಕಕಲ್ಯಾಣದ ಸತ್ಕಾರ್ಯಗಳನ್ನು ಮುಂದುವರೆಸಲಿವೆ, ಉಭಯ ಪೀಠಗಳ ಭಾoದವ್ಯ ನಿತ್ಯನೂತನವಾಗಿ, ಶಾಶ್ವತವಾಗಿರಲಿವೆ.

ಶ್ರೀಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಹರಿಹರಪುರ