ಮಳೆಗಾಲದ ವೇಳೆಗೆ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ₹2,671 ಕೋಟಿ ವೆಚ್ಚದ ಕಾಮಗಾರಿಗಳನ್ನು ಘೋಷಿಸಿದ್ದಾರೆ. ವಿಶ್ವಬ್ಯಾಂಕ್ ಸಾಲದೊಂದಿಗೆ ರಾಜಕಾಲುವೆ ನಿರ್ಮಾಣ, ಇ-ಖಾತಾ ವಿತರಣೆ, ಮತ್ತು ಬೆಂಗಳೂರು ಬಿಸಿನೆಸ್ ಕಾರಿಡಾರ್ನಂತಹ ಪ್ರಮುಖ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಬೆಂಗಳೂರು: ಮಳೆಗಾಲದ ವೇಳೆಗೆ ನಗರದ ರಸ್ತೆಗಳು ಸುಸ್ಥಿತಿಯಲ್ಲಿರುವಂತೆ ಮಾಡಲು ₹2,671 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆಗಳ ಕಾಮಗಾರಿ ಕೈಗೊಳ್ಳಲಾಗಿದ್ದು, ಏಪ್ರಿಲ್ ಅಂತ್ಯದ ವೇಳೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿವಿಧ ಕಾಮಗಾರಿಗಳಿಗಾಗಿ ₹2,671 ಕೋಟಿ
ಶನಿವಾರ ಜಿಬಿಎಯ 5 ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಕಳೆದ 3 ತಿಂಗಳ ಅವಧಿಯಲ್ಲೇ ರಿಂಗ್ ರಸ್ತೆ, ವಾರ್ಡ್ ರಸ್ತೆ, ವೈಟ್ ಟಾಪಿಂಗ್ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ₹2,671 ಕೋಟಿಯನ್ನು ರಸ್ತೆಗಳಿಗಾಗಿ ನೀಡಲಾಗಿದ್ದು, ಕಳೆದ ವರ್ಷ ₹2,394 ಕೋಟಿ ಸೇರಿ ಒಟ್ಟು ₹5065 ಕೋಟಿಯನ್ನು ರಸ್ತೆಗಳಿಗಾಗಿ ಖರ್ಚು ಮಾಡಲಾಗುತ್ತಿದೆ. ಶೇ.80ರಷ್ಟು ಕಾಮಗಾರಿಗಳ ಟೆಂಡರ್ ಮುಗಿದಿದ್ದು, ಕೆಲಸಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
₹1,600 ಕೋಟಿ ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣ
ವಿಶ್ವಬ್ಯಾಂಕ್ನಿಂದ ಸಾಲ ಪಡೆದು ₹1,600 ಕೋಟಿ ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಈವರೆಗೆ 10 ಲಕ್ಷಕ್ಕೂ ಹೆಚ್ಚು ಜನರ ಆಸ್ತಿಗಳಿಗೆ ಇ ಖಾತಾ ನೀಡಿದ್ದೇವೆ. ಏಪ್ರಿಲ್ ತಿಂಗಳಲ್ಲಿ 10 ಲಕ್ಷ ಇ-ಖಾತಾ ವಿತರಣೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ವಿತರಣೆ ಕಾರ್ಯಕ್ರಮ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ ವಿವಿಧ ಕಾರ್ಯಕ್ರಮಗಳಿದ್ದು, 30 ಸಾವಿರ ಜನ ಅರ್ಜಿ ಹಾಕಿದ್ದಾರೆ. ತಳ್ಳು ಗಾಡಿ, ವಾಹನ ಸೇರಿದಂತೆ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ಆದಷ್ಟು ಅವರನ್ನು ಪಾದಚಾರಿ ಮಾರ್ಗದಿಂದ ಖಾಲಿ ಮಾಡಿಸಿ, ವಾಹನದಲ್ಲಿ ಮಾತ್ರ ಮಾರಾಟ ಮಾಡಬೇಕು ಎಂದು ಸೂಚಿಸುತ್ತೇವೆ.
ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ಕೆಲಸ ಆರಂಭವಾಗಿದೆ. ಏಳು ಸಾವಿರ ಜನರು ಕೂಡ ಅರ್ಜಿ ಕೊಡುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ಖಾತಾ ನೀಡಲಾಗುತ್ತದೆ. ಇನ್ನು ಕಂದಾಯ ಜಮೀನುಗಳಲ್ಲಿ ನಿರ್ಮಾಣವಾಗಿರುವ ಲೇಔಟ್ಗಳನ್ನು ಜಿಬಿಎ ವಶಕ್ಕೆ ಪಡೆಯುವ ಕೆಲಸ ಆರಂಭಿಸಿದೆ. ಇನ್ನು ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಜಿಬಿಎ ಮೂಲಕ ಒದಗಿಸಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬಿಸಿನೆಸ್ ಕಾರಿಡಾರ್ಗೆ ಶೀಘ್ರ ಟೆಂಡರ್
20 ವರ್ಷಗಳಿಂದ ಬಾಕಿ ಇರುವ ಬೆಂಗಳೂರು ಬಿಸಿನೆಸ್ ಕಾರಿಡಾರ್ 1ನೇ ಫೇಸ್ ಟೆಂಡರ್ ಕರೆಯಲು ಸೂಚಿಸಲಾಗಿದೆ. ಟಿಡಿಆರ್ ನೀಡುವ ಪ್ರಕ್ರಿಯೆ ಆರಂಭಿಸುತ್ತೇವೆ. ಟಿಡಿಆರ್ ಎಕ್ಸ್ಚೇಂಜ್ ವಿಚಾರ ಮುಂದಿನ 2 ವಾರಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲಾ ಪಾಲಿಕೆಗಳು ಸ್ಥಳೀಯವಾಗಿ ಸಣ್ಣ ಗಾತ್ರದ ಕಸ ಬಳಿಯುವ ಯಂತ್ರಗಳನ್ನು ಖರೀದಿಸಿಲು ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು.


