ಬೆಂಗಳೂರಿನ ಜಾಲಹಳ್ಳಿ ಸರ್ಕಲ್ ಬಳಿ ಇರುವ ಸಿಗ್ನಲ್ ದಾಟುತ್ತಿದ್ದ ಮಹಿಳೆ ಮೇಲೆ ಲಾರಿದ ಹರಿದ ಘಟನೆ ನಡೆದಿದೆ. ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರು (ಆ.20) ನಿರ್ಲಕ್ಷ, ಅಜಾಗರೂಕತೆ ವಾಹನ ಚಾಲನೆ ಗಂಭೀರ ಅಪಾಯಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿನಲ್ಲಿ ಇದೀಗ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿಯಾದ ಘಟನೆ ನಡೆದಿದೆ. ಜಾಲಹಳ್ಳಿ ಸರ್ಕಲ್ ಬಳಿ ಇರುವ ಸಿಗ್ನಲ್ ದಾಟುತ್ತಿದ್ದ ಮಹಿಳೆ ಮೇಲೆ ಲಾರಿದ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಇಂದು (ಆ.20) ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದ್ದು, ಭಾರಿ ಟ್ರಾಫಿಕ್ ಜಾಮ್ ಸಂಭವಿಸಿದೆ.
ಜಾಲಹಳ್ಳಿ ಸರ್ಕಲ್ ಸಿಗ್ನಲ್ ದಾಟುವ ಪ್ರಯತ್ನದಲ್ಲಿದ್ದ ಮಹಿಳೆ ಮೇಲೆ ಚಾಲಕ ಲಾರಿ ಹತ್ತಿಸಿದ್ದಾನೆ. 20 ಅಡಿ ಉದ್ದದ ಲಾರಿ ಯೂಟರ್ನ್ ಮಾಡುವಾಗ ಘಟನೆ ನಡೆದಿದೆ. ಮಹಿಳೆಯನ್ನು ಗಮನಿಸದೇ ಲಾರಿ ಚಾಲಕನ ಯೂಟರ್ನ್ ಮಾಡಿದ್ದಾರೆ. ಇದರ ಪರಿಣಾಮ ಮಹಿಳೆ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಪೀಣ್ಯ ಸಂಚಾರಿ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಿಂದ ಜಾಲಹಳ್ಳಿ ಸರ್ಕಲ್ ಸೇರಿದಂತೆ ಇಡೀ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು.
ಮೇಖ್ರಿ ಸರ್ಕಲ್ ಬಳಿ ಅಪಘಾತದಲ್ಲಿ ಬೈಕ್ ಸವಾರ ಸಾವು
ಇಂದು ಮೇಖ್ರಿ ಸರ್ಕಲ್ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. 23 ವರ್ಷದ ಲೂಯಿಸ್ ಫರ್ನಾಂಡಿಸ್ ಬಸ್ ಓರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಬಸ್ ಟಚ್ ಆಗಿ ಕೆಳಕ್ಕೆ ಬಿದ್ದ ಸವಾರನ ಮೇಲೆ ಬಸ್ ಹರಿದಿದೆ. ಸದಾಶಿವ ನಗರ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಜಯನಗರ ಅಪಘಾತದಲ್ಲಿ ಬೈಕ್ ಸವಾರ ಸಾವು
ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟ ಘಟನೆ ಸಂಜಯನಗರದಲ್ಲಿ ವರದಿಯಾಗಿತ್ತು. ಬಸ್ ಓವರ್ ಟೇಕ್ ಮಾಡಲು ಹೋದ ಬೈಕ್ ಸವಾರ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೃತನನ್ನು ಸಂಜಯನಗರ ನಿವಾಸಿ ರೋಷನ್ ಎಂದು ಗುರುತಿಸಲಾಗಿದೆ. ಹೆಬ್ಬಾಳದಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆಗೆ ಸಂಚರಿಸುತ್ತಿದ್ದ ಬಸ್ ಚಕ್ರಕ್ಕೆ ಸಿಲುಕಿ ರೋಷನ್ ಮೃತಪಟ್ಟಿದ್ದ.
