ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದ ಖ್ಯಾತ ಜ್ಯೋತಿಷಿ ಎಸ್ಕೆ ಜೈನ್ ನಿಧನ!
ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದ ಖ್ಯಾತ ಜ್ಯೋತಿಷಿ ಎಸ್ಕೆ ಜೈನ್ ನಿಧನರಾಗಿದ್ದಾರೆ. ಕಳೆದ 11 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೈನ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
![Renowned astrologer SK Jain passes away at 67 in Bengaluru ckm Renowned astrologer SK Jain passes away at 67 in Bengaluru ckm](https://static-ai.asianetnews.com/images/01hv9cr60ej3ywcmbxk61wqprb/whatsapp-image-2024-04-12-at-8-12-17-pm--1-_363x203xt.jpg)
ಬೆಂಗಳೂರು(ಏ.12) ಜ್ಯೋತಿಷ್ಯದ ಮೂಲಕ ಜನಪ್ರಿಯತೆಗಳಿಸಿರುವ ಎಸ್ಕೆ ಜೈನ್ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಜ್ಯೋತಿಷಿ ಎಸ್ಕೆ ಜೈನ್ ಇಂದು ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 67 ವರ್ಷದ ಎಸ್ಕೆ ಜೈನ್ ಕಳೆದ 11 ದಿನಗಳಿಂದ ಮಹಾವೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾದೆ ನಿಧನರಾಗಿದ್ದಾರೆ.
ಜ್ಯೋತಿಷಿ ಪರಂಪರೆಯನ್ನು ಜಗದಗಲಕ್ಕೆ ತಲುಪಿಸಿದ ಕೀರ್ತಿ ಎಸ್ಕೆ ಜೈನ್ಗೆ ಸಲ್ಲಲಿದೆ. ಮಾಧ್ಯಮದ ಮೂಲಕ ಜ್ಯೋತಿಷಿ ಕಾರ್ಯಕ್ರಮ ನಡೆಸಿ ಕರ್ನಾಟಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಎಸ್ಕೆ ಜೈನ್ ರಾಶಿ ಭವಿಷ್ಯ, ಶುಭ-ಅಶುಭ, ಫಲಾಫಲ ಸೇರಿದಂತೆ ಜ್ಯೋತಿಷ್ಯದ ಪರಿಕರಗಳಲ್ಲಿ ನಿಖರತೆಯನ್ನು ತಂದುಕೊಟ್ಟಿದ್ದರು. ವಿದ್ಯುನ್ಮಾನ ಮಾಧ್ಯಮದಲ್ಲಿ ಜ್ಯೋತಿಷಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಕರ್ನಾಟಕದಲ್ಲಿ ಹೊಸ ಪರಂಪರೆ ಹಾಗೂ ಜ್ಯೋತಿಷಿಯನ್ನು ಮನೆ ಮನೆಗೆ ತಲುಪಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತದ ಬಗ್ಗೆ ಈ ಯುಗದ ನಾಸ್ಟ್ರಮಸ್ ಭವಿಷ್ಯ ಹೇಳಿದ್ದೇನು? ಹುಲಿಯಂತೆ ಚಿತ್ರಿಸಿದ ಅರ್ಥವೇನು?
ದಕ್ಷಿಣ ಕನ್ನಡ ಮೂಲದವರಾಗಿರುವ ಎಸ್ಕೆ ಜೈನ್, ತಮ್ಮ ಬಾಲ್ಯ ಶಿಕ್ಷಣ ಎಲ್ಲವನ್ನೂ ಬೆಂಗಳೂರಿನಲ್ಲೇ ಪೂರೈಸಿದ್ದರು. ಬೆಂಗಳೂರಿನಲ್ಲೇ ನಲೆಸಿದ್ದ ಎಸ್ಕೆ ಜೈನ್ ತಂಜೆ ಬಿಜಿ ಶಶಿಕಾಂತ್ ಜೈನ್ ಕೂಡ ಜ್ಯೋತಿಷಿ ಶಾಸ್ತ್ರದಲ್ಲಿ ಪ್ರಸಿದ್ಧಿ ಪಡೆದಿದ್ದರು. ತಂದೆಯಿಂದಲೇ ಜ್ಯೋತಿಷಿ ಶಾಸ್ತ್ರ ಪಾಂಡಿತ್ಯ ಅರಗಿಸಿಕೊಂಡಿದ್ದ ಎಸ್ಕೆ ಜೈನ್ ಕರ್ನಾಟಕ ಮಾತ್ರವಲ್ಲ ದೇಶ ವಿದೇಶದಲ್ಲೂ ಜನಪ್ರಿಯತೆಗಳಿಸಿದ್ದಾರೆ.
ವಿಧಿವಶರಾದ ಎಸ್ಕೆ ಜೈನ್ ಅವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಎಸ್ಕೆ ಜೈನ್ ಜ್ಯೋತಿಷಿ ಕೇಳಿ ದಿನ ಆರಂಭಿಸುತ್ತಿದ್ದ ಹಲವು ಬೆಂಬಲಿಗರು ಆಘಾತ ವ್ಯಕ್ತಪಡಿಸಿದ್ದಾರೆ.