ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯದಲ್ಲಿ ಎನ್‌ಇಪಿ ಬದಲಾಗಿ ಎಸ್‌ಇಪಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ (ಆ.27) :  ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯದಲ್ಲಿ ಎನ್‌ಇಪಿ ಬದಲಾಗಿ ಎಸ್‌ಇಪಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಎಲ್ಲ ಕಡೆ ಎನ್‌ಇಪಿ ಜಾರಿಯಾಗಿಲ್ಲ. ಎಲ್ಲೆಲ್ಲಿ ಜಾರಿಯಾಗಿದೆ ಅಲ್ಲಿ ಹಂತ-ಹಂತವಾಗಿ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ಎನ್‌ಇಪಿ ತೆಗೆಯುತ್ತೇವೆ. ಭಾರತ ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ದೇಶ. ಎನ್‌ಇಪಿಯಿಂದ ಬೇರೆ ಸಂಸ್ಕೃತಿಗಳನ್ನು ಕೆಲಸ ಆಗುತ್ತದೆ. ಎನ್‌ಇಪಿಯಿಂದ ಕೆಲ ಅನಗತ್ಯ ವಿಚಾರಗಳು ಸೇರಿಸಲಾಗಿದೆ. ಅವುಗಳನ್ನು ಬದಲಿಸಲೇ ಬೇಕಾದ ಅನಿವಾರ್ಯತೆ ಇದೆ. ಪ್ರಣಾಳಿಕೆಯಲ್ಲಿ ಎನ್‌ಇಪಿ ರದ್ದು ಮಾಡುತ್ತೇವೆ ಎಂದಿದ್ದೇವೆ. ಅದನ್ನ ಒಪ್ಪಿ ಜನ ನಮಗೆ ಮತ ಕೊಟ್ಟಿದ್ದಾರೆ. ಎನ್‌ಇಪಿಗಿಂತ ಎಸ್‌ಇಪಿ ಚೆನ್ನಾಗಿದೆ. ಜನರ ಅಪೇಕ್ಷೆಯಂತೆ ಎಸ್‌ಇಪಿ ಜಾರಿಗೆ ತರುತ್ತೇವೆ ಎಂದರು.

ಹೊಸ ಪಾಲಿಸಿಯಿಂದ ರಾಜ್ಯ ಸರ್ಕಾರ ಅನುದಾನದ ಕೊರತೆ ಆಗುತ್ತದೆ. ಇದರಿಂದ ಬೇರೆ ಇಲಾಖೆಗೆ ಅನುದಾನ ಕೊರತೆಯಾಗಿದೆ. ರಾಜ್ಯದಿಂದ ಕೇಂದ್ರ ಸರ್ಕಾರ ಹೆಚ್ಚಿನ ಟ್ಯಾಕ್ಸ್‌ ತೆಗೆದುಕೊಳ್ಳುತ್ತಿದೆ. ಪ್ರತಿ ವಿದ್ಯಾರ್ಥಿಗೆ ಕೇಂದ್ರ ಸರ್ಕಾರ 6 ಸಾವಿರ ಖರ್ಚು ಮಾಡಬೇಕು. ತೆಲಂಗಾಣ, ತಮಿಳುನಾಡು, ಗುಜರಾತ್‌, ರಾಜಸ್ತಾನದಲ್ಲಿ ಕೇಂದ್ರ ಸರ್ಕಾರ ಪ್ರತಿ ವಿದ್ಯಾರ್ಥಿಗೆ 6 ಸಾವಿರ ಕೊಡುತ್ತಿದೆ. ಕರ್ನಾಟಕ ರಾಜ್ಯಕ್ಕೆ 2 ಸಾವಿರ ಮಾತ್ರ ಕೊಡುತ್ತಿದೆ. ಇಲ್ಲಿನ ಮಕ್ಕಳ ಭವಿಷ್ಯವನ್ನು ಯಾಕೆ ಹಾಳುಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಗ್ಯಾರಂಟಿ ಬಳಿಕ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಗೆ ಇಂದು ಚಾಲನೆ!

ರಾಜ್ಯ ಸರ್ಕಾರ ಗ್ಯಾರಂಟಿ ಜೊತೆಗೆ ಪುಸ್ತಕ, ವಾರಕ್ಕೆ ಎರಡು ದಿನ ಮೊಟ್ಟೆ. ಊಟ ಎಲ್ಲವೂ ಕೊಡುತ್ತಿದೇವೆ. ಕಳೆದ ಸರ್ಕಾರÜ ಕೇಂದ್ರದಿಂದ ಹೆಚ್ಚಿನ ಅನುದಾನ ಕೇಳಲಿಲ್ಲ. ನಮ್ಮ ತೆರಿಗೆ ಹಣವನ್ನು ಕೇಳುವುದು ನಮ್ಮ ಹಕ್ಕು. ಈಗ ನಾವು ಅನುದಾನ ತರುವ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದರು.

ಸರ್ಕಾರಿ ಶಾಲೆ ಗುಣಮಟ್ಟಹೆಚ್ಚಳಕ್ಕೆ ಗಮನ ಹರಿಸಿದ್ದೇವೆ. ರಾಜ್ಯದಲ್ಲಿ ಕೆಪಿಎಸ್‌ಸಿ ಮಾದರಿ ಶಾಲೆ ತೆರಯಬೇಕು ಎಂಬ ಯೋಜನೆ ರೂಪಿಸಲಾಗಿದೆ. ಪೋಷಕರ ಒತ್ತಾಸೆಯಂತೆ ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆ ತೆರೆಯುತ್ತೇವೆ. ಈ ವಿಚಾರವಾಗಿ ಸಿಎಂ, ಡಿಸಿಂ ಕೂತು ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ 15ಕ್ಕಿಂತ ಕಡಿಮೆ ಮಕ್ಕಳು ಇರುವ ಸುಮಾರು 22 ಸಾವಿರ ಶಾಲೆಗಳಿವೆ. ಉತ್ತಮ ಶಾಲೆಗಳಿಗೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಉತ್ತಮ ಶಾಲೆಗಳಿಗೆ ಸೇರಿಸಲಾಗುವುದು. ಕೆಪಿಎಸ್‌ಸಿ ಮಾದರಿ ಶಾಲೆಗಳಿಗೆ 8ರಿಂದ 10 ಸಾವಿರ ಕೋಟಿ ಬೇಕಾಗುತ್ತದೆ. ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಮುಂದಿನ ದಿನದಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಚಿಂತನೆ ಇದೆ ಎಂದರು.

ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಎಲ್ಲಿರಗೂ ಸ್ವಾಗತ ಇದೆ. ಕೆಲವರಿಗೆ ಪಕ್ಷದಲ್ಲಿ ವಿರೋಧ ಆಗಿರಬಹುದು, ಅದನ್ನು ನಾಯಕರು ಎಲ್ಲವನ್ನು ನೋಡಿಕೊಳ್ಳುತ್ತಾರೆ. ಆಯನೂರು ವಿರೋಧ ಆಗಿದೆ. ಎಚ್‌.ಸಿ. ಯೋಗೀಶ್‌ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಅದನ್ನು ಸಾರ್ವಜನಿಕವಾಗಿ ಹೇಳಿಕೆ ಕೊಡದೇ ನಾಯಕ ಗಮನಕ್ಕೆ ತರಬಹುದಾಗಿತ್ತು ಎಂದು ಸಚಿವ ಮಧು ಬಂಗಾರಪ್ಪ (Madhu bangarappa)ಹೇಳಿದರು.

ಶಿವಮೊಗ್ಗ ಜಿಲ್ಲೆ ಯಲ್ಲಿ ಹಲವು ಮುಖಂಡರು ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಆಯನೂರು ಮಂಜುನಾಥ್‌, ಶಿಕಾರಿಪುರದ ನಾಗರಾಜ್‌ ಗೌಡ ಸೇರ್ಪಡೆಯಿಂದ ಪಕ್ಷ ಬಲವರ್ಧನೆ ಗೊಂಡಿದೆ. ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಪ್ರಸ್ತಾಪ ಇಲ್ಲ. ಇದಕ್ಕೆ ಹೆಚ್ಚು ಒತ್ತು ಕೊಡಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಈ ಬಾರಿ ಮಳೆ ಕೈ ಕೊಟ್ಟಿದೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲೂ ಬರಗಾಲ ಛಾಯೆ ಇದೆ. ಆದರೆ, ಸಾಗರ ತಾಲೂಕನ್ನು ಮಾತ್ರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಜಿಲ್ಲೆಯ ಪರಿಸ್ಥಿತಿಯನ್ನು ಸಿಎಂ ಗಮನಕ್ಕೆ ತಂದು ಇಡೀ ಜಿಲ್ಲೆಯನ್ನೇ ಬರಪೀಡತ ಎಂದು ಘೋಷಣೆ ಮಾಡುವ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಲೋಕಸಭಾ ಚುನಾವಣೆ(Loksabha election 2024) ಗೆಲ್ಲಲು ಹೈಕಮಾಂಡ್‌ ಸೂಚನೆ ನೀಡಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೆಂದು ಇನ್ನೂ ತೀರ್ಮಾನವಾಗಿಲ್ಲ. ಪಕ್ಷ ಅಭ್ಯರ್ಥಿಯನ್ನು ತೀರ್ಮಾನ ಮಾಡುತ್ತದೆ. ಕುಮಾರ ಬಂಗಾರಪ್ಪ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಆದರೆ, ಲೋಕಸಭಾ ಚುನಾವಣೆಗೆ ಸಿದ್ಧತೆ ಭರದಿಂದ ಸಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಯತ್ನಾಳ್‌ ಬಸ್‌ಸ್ಟ್ಯಾಂಡ್‌ನಲ್ಲಿ ಗಿಣಿಶಾಸ್ತ್ರ ಹೇಳಲಿ: ಸಚಿವ ಮಧು ತಿರುಗೇಟು

ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಸ್ರೋಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಮೊದಲಾದವರು ಇಸ್ರೊ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರಿಗೆ ಬ್ಯಾರಿಕೆಟ್‌ ಬಳಿ ನಿಲ್ಲಲು ಅವಕಾಶ ಸಿಕ್ಕಿದ್ದೆ ಪುಣ್ಯ ಎಂದು ಲೇವಡಿ ಮಾಡಿದರು.