Asianet Suvarna News Asianet Suvarna News

ಚೆಕಪ್‌ಗೆ ಬಂದವನು ಕೊರೋನಾಗೆ ಬಲಿ

ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಮಾಸಿಕ ಪರೀಕ್ಷೆಗೆ ವಿಕ್ಟೋರಿಯಾಗೆ ಭೇಟಿ| ಈ ವೇಳೆ ಕೊರೋನಾ ದೃಢ, ದಾಖಲು| 4 ದಿನದ ಬಳಿಕ ಐಸಿಯುಗೆ ಶಿಫ್ಟ್‌ ಚಿಕಿತ್ಸೆ ಫಲಿಸದೆ ರೋಗಿ ಸಾವು| ನಿರ್ಲಕ್ಷ್ಯವೇ ಸಾವಿಗೆ ಕಾರಣ: ಆರೋಪ| 

Relatives of the deceased alleged of Hospital Negligency in Bengaluru
Author
Bengaluru, First Published Sep 13, 2020, 8:50 AM IST

ಬೆಂಗಳೂರು(ಸೆ.13): ಮೂತ್ರಪಿಂಡ ಕಸಿ ಮಾಡಿಸಿಕೊಂಡ ನಂತರ ಮಾಸಿಕ ಪರೀಕ್ಷೆಗಾಗಿ ಬಂದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿ ಚಿಕಿತ್ಸೆಗಾಗಿ ದಾಖಲಿಸಿಕೊಂಡಿದ್ದ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು, ಸೂಕ್ತ ಚಿಕಿತ್ಸೆ ನೀಡದ ಕಾರಣ ಆತ ಮೃತಪಟ್ಟಿದ್ದಾನೆ ಮೃತರ ಸಂಬಂಧಿಕರು ಆಪಾದಿಸಿದ್ದಾರೆ.

ಮಾರತ್ತಹಳ್ಳಿ ನಿವಾಸಿಯಾದ ನನ್ನ ಸಹೋದರ (28 ವರ್ಷ) 2019ರ ಆಗಸ್ಟ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ನೆಫ್ರೊ ಯುರಾಲಜಿ ಸಂಸ್ಥೆಯಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ವೈದ್ಯರ ಸಲಹೆಯಂತೆ ತಪಾಸಣೆಗಾಗಿ ಇದೇ ಆ.31ರಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಕೊರೋನಾ ಪರೀಕ್ಷೆಗೊಳಪಡಿಸಿದಾಗ, ಪಾಸಿಟಿವ್‌ ಬಂದಿದೆ ಎಂದು ತಿಳಿಸಿ ಅಪಘಾತ ಮತ್ತು ತುರ್ತು ನಿಗಾ ಕೇಂದ್ರದಲ್ಲಿ ದಾಖಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಮೂತ್ರಪಿಂಡ ವಿಭಾಗದ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದ್ದರು ಎಂದು ಮೃತನ ಸೋದರ ಕಾರ್ತಿಕ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. 

ಕೊರೋನಾ ಸೋಂಕು: ಅಕ್ಟೋಬರ್‌ ಮೊದಲ ವಾರ ಭಾರತ ವಿಶ್ವ ನಂ.1 ಸಾಧ್ಯತೆ!

ಸುಮಾರು ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ್ದ ವೈದ್ಯರು ರೋಗಿಯನ್ನು ತುರ್ತು ನಿಗಾ ಘಟಕ್ಕೆ (ಐಸಿಯು) ದಾಖಲಿಸಿದ್ದರು. ಗುಣಮುಖರಾಗುತ್ತಿದ್ದು, ಶೀಘ್ರದಲ್ಲಿ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸುವುದಾಗಿ ತಿಳಿಸಿದ್ದರು. ಸೆ.8ರಂದು ವೈದ್ಯರಿಗೆ ಕರೆ ಮಾಡಿದಾಗಲೂ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದರು. ಆದರೆ ಸೆ.9ರಂದು ಬೆಳಗ್ಗೆ ಮೃತ ಪಟ್ಟಿರುವುದಾಗಿ ತಿಳಿಸಿದರು ಎಂದು ವಿವರಿಸಿದ್ದಾರೆ. ವೈದ್ಯರು ವಿನಾಕಾರಣ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ್ದರೆ ಖಾಸಗಿ ಆಸ್ಪತ್ರೆಗೆ ದಾಖಲಿಸುತ್ತಿದ್ದೆವು. ಮೃತರಾದ ಬಳಿಕ ಮಾಹಿತಿ ನೀಡಿದ್ದಾರೆ ಎಂದು ಅವರು ಅರೋಪಿಸಿದ್ದಾರೆ.

ಪೊಲೀಸರಿಗೆ ದೂರಿತ್ತ ಬಳಿಕ ಮರಣೋತ್ತರ ಪರೀಕ್ಷೆ:

ಮರಣೋತ್ತರ ಪರೀಕ್ಷೆ ಮಾಡುವುದಕ್ಕೂ ಮುನ್ನ ಮೃತದೇಹವನ್ನು ತೆಗೆದುಕೊಂಡು ಹೋಗಲು ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಇದರಿಂದ ಅನುಮಾನಗೊಂಡು ವಿ.ವಿ.ಪುರ ಪೊಲೀಸ್‌ ಠಾಣೆಗೆ ದೂರು ನೀಡಿದ ನಂತರ ಪೊಲೀಸರು ಸೂಚನೆ ಮೇರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಕಾರ್ತಿಕ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios