ಹೊಸ ವರ್ಷದ ಪಾರ್ಟಿ ನಂತರ 'ಸಕ್ಕರೆ ನಾಡು ಕೆಂಪಣ್ಣ' ಮತ್ತು 'ಕಬ್ಜಾ ಶರಣ್' ಎಂಬ ರೀಲ್ಸ್ ಸ್ಟಾರ್‌ಗಳು ಮಾಗಡಿಯಲ್ಲಿ ಸಾರ್ವಜನಿಕರಿಂದ ಹಲ್ಲೆಗೊಳಗಾಗಿದ್ದಾರೆ. ಆದರೆ, ಜನರು ಯಾಕೆ ಹಲ್ಲೆ ಮಾಡಿದ್ದಕ್ಕೆ ಕಾರಣ ರಿವೀಲ್ ಆಗಿದೆ. ಜೊತೆಗೆ,   ಘಟನೆಯಿಂದ ಕಬ್ಜಾ ಶರಣ್ ಸೋಶಿಯಲ್ ಮೀಡಿಯಾಗೆ ವಿದಾಯ ಹೇಳಿದ್ದಾರೆ.

ಬೆಂಗಳೂರು/ರಾಮನಗರ (ಜ.03): ಹೊಸ ವರ್ಷದ ಬೆಳಗ್ಗೆ ಎಲ್ಲರೂ ಈ ವರ್ಷವಿಡೀ ಒಳಿತಾಗಲಿ ಎಂದು ಸೂರ್ಯೋದಯ ನೋಡಿದ ಸಕ್ಕರೆನಾಡು ಕೆಂಪಣ್ಣ ಹಾಗೂ ಕಬ್ಜಾ ಶರಣು ಅವರಿಗೆ ಮಾಗಡಿ ಜನತೆ ಬೆಳ್ಳಂಬೆಳಗ್ಗೆ ಧರ್ಮದೇಟು ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಇಬ್ಬರೂ ಸೋಶಿಯಲ್ ಮಿಡಿಯಾ ಸ್ಟಾರ್ಸ್‌ಗಳನ್ನು ಜನರು ಹೊಡೆಯುವುದಕ್ಕೆ ಕಾರಣವೇನೆಂದು ಇದೀಗ ರಿವೀಲ್ ಆಗಿದೆ. ಜೊತೆಗೆ, ವೈರಲ್ ವಿಡಿಯೋಗಳ ಹಿಂದಿನ ಕಹಾನಿಗಳು ಕೂಡ ರಿವೀಲ್ ಆಗಿವೆ.

ಅವರೆಲ್ಲಾ ನಿಮಗೆ ಪರಿಚೀತರೇ. ಸೋಷಿಯಲ್​ ಮೀಡಿಯಾ ಓಪನ್​ ಮಾಡಿದ್ರೆ ಇವರೇ ನಿಮ್ಮ ಕಣ್ಣ ಮುಂದೆ ಬರ್ತಾರೆ.. ಆದ್ರೆ ಇವತ್ತು ಇದೇ ಸೋಷಿಯಲ್​ ಮೀಡಿಯಾ ಸ್ಟಾರ್ಸ್​​. ನಾವು ತಪ್ಪು ಮಾಡಿಲ್ಲ ಅಂತ ರೀಲ್​ಗಳನ್ನ ಮಾಡಿ ಅಪ್​ಲೋಡ್​ ಮಾಡುತ್ತಿದ್ದಾರೆ. ಹೌದು.. ನಾವು ಮಾತನ್ನಾಡ್ತಿರೋದು ಮಾಗಡಿಯಲ್ಲಿ ನಡೆದ ನ್ಯೂ ಇಯರ್​ ಪಾರ್ಟಿಯ ಆಫ್ಟರ್​​ ಎಫೆಕ್ಟ್ ಬಗ್ಗೆ.. ಪಾರ್ಟಿಗೆ ಹೋಗಿದ್ದ ಕೆಲ ರೀಲ್​ ಸ್ಟಾರ್​ಗಳು ನ್ಯೂ ಇಯರ್​​ ದಿನವೇ ಒದೆ ತಿನ್ನುವಂತಾಗಿದೆ. ಅಷ್ಟಕ್ಕೂ ಅವರ ಮೇಲೆ ಹಲ್ಲೆ ಮಾಡಿದ್ಯಾರು..? ಅಂಥಹ ತಪ್ಪು ಇವರುಗಳು ಮಾಡಿದ್ದಾದ್ರೂ ಏನು..? ಎಂಬ ಕೇಸ್​​ ಹಿಂದಿನ ರೀಲ್​ ಕಹಾನಿಯೇ ಇವತ್ತಿನ ಎಫ್​​.ಐ.ಆರ್​​. ಪಾಪ ಸಕ್ಕರೆನಾಡು ಕೆಂಪ ಮತ್ತು ಕಬ್ಜಾ ಶರಣ್ ಸ್ನೇಹಿತ ಅಂತ ಹೋಗಿ ಒದೆ ತಿಂದಿದ್ದಾರೆ. ಆದ್ರೆ ಇವರಿಗೆ ಆ ಕಿರಾತಕ ಫ್ರೆಂಡ್​​ ಆಗಿದ್ದಾನಲ್ಲ ಅದಕ್ಕೇನು ಹೆಳಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ವೈರಲ್​ ಸ್ಟಾರ್ಸ್​​ ಮತ್ತೊಂದು ವಿಷಯಕ್ಕೆ ವೈರಲ್​ ಆಗಿದ್ದಾರೆ ಅಷ್ಟೇ.

ರೀಲ್ಸ್ ಸ್ಟಾರ್‌ಗಳ ಕಿರಿಕ್; ಕಿಡ್ನ್ಯಾಪ್ ಆರೋಪ:

ಮಾಗಡಿಯಲ್ಲಿ ನ್ಯೂ ಇಯರ್ ಪಾರ್ಟಿ ಮಾಡಲು ಹೋಗಿದ್ದ ಖ್ಯಾತ ರೀಲ್ಸ್ ಸ್ಟಾರ್‌ಗಳಾದ 'ಸಕ್ಕರೆ ನಾಡು ಕೆಂಪಣ್ಣ' ಮತ್ತು 'ಕಬ್ಜಾ ಶರಣ್' ಮೇಲೆ ಹಲ್ಲೆ ನಡೆದಿದೆ ಎನ್ನಲಾದ ವಿಡಿಯೋಗಳು ವೈರಲ್ ಆಗಿವೆ. ಇವರೆಲ್ಲರೂ ಹೊಸ ವರ್ಷದ ಪಾರ್ಟಿ ಮುಗಿಸಿ ವಾಪಸ್ ಬರುವಾಗ ಅವರ ಸ್ನೇಹಿತನೊಬ್ಬ ಅಪ್ರಾಪ್ತ ಬಾಲಕಿಯನ್ನ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಈ ವೇಳೆ ಆ ಸ್ನೇಹಿತನನ್ನು ಕಾಪಾಡಲು ಹೋದ ಸ್ಟಾರ್‌ಗಳಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಮಾಗಡಿ ಪೊಲೀಸ್ ಠಾಣೆಗೆ ಹೋಗಿ ತಮ್ಮ ಸ್ನೇಹಿತನನ್ನು ಕಾಪಾಡಲು ಮುಂದಾದ ರೀಲ್ಸ್ ಸ್ಟಾರ್‌ಗಳಿಗೆ ಅಲ್ಲಿನ ಜನರೇ ಹಿಡಿದುಕೊಂಡು ತದುಕಿದ್ದಾರೆ. ಈ ವೇಳೆ 'ನಾವು ತಪ್ಪು ಮಾಡಿಲ್ಲ' ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಸಮರ್ಥಿಸಿಕೊಳ್ಳುತ್ತಿದ್ದರೂ, ಜನರು ಮಾತ್ರ ನಾಲ್ಕು ಪೆಟ್ಟು ಕೊಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಅಲ್ಲಿ ಸೇರಿದ್ದ ಜನರೆಲ್ಲರೂ ಒಂದೊಂದು ಏಟು ಕೊಟ್ಟಿರುವ ವೀಡಿಯೋಗಳು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಡ್ನ್ಯಾಪ್ ಕಹಾನಿ ಹಾಗೂ ಪಾರ್ಟಿಯ ಆಫ್ಟರ್ ಎಫೆಕ್ಟ್ ಈಗ ಪೊಲೀಸ್ ಮೆಟ್ಟಿಲೇರಿದೆ.

ಸೋಶಿಯಲ್ ಮೀಡಿಯಾಗೆ ಗುಡ್‌ ಬೈ ಹೇಳಿದ ಕಬ್ಜಾ ಶರಣ್:

ಮತ್ತೊಂದೆಡೆ ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ 200ಕೆ ಫಾಲೋವರ್ಸ್ ಅನ್ನು ಹೊಂದಿದ್ದ ಕಬ್ಜಾ ಶರಣ್ (ಶರಣಬಸಪ್ಪ) ತಾನು ತಪ್ಪೇ ಮಾಡಿಲ್ಲ ಎಂದು ಹೇಳಿಕೊಂಡಿದ್ದಾನೆ. ಜೊತೆಗೆ, ನನ್ನನ್ನು ಇಷ್ಟು ದಿನ ಬೆಂಬಲಿಸಿದ ಎಲ್ಲ ಫಾಲೋವರ್ಸ್‌ಗಳಿಗೆ ಹಾಗೂ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಕ್ಷಮೆ ಕೇಳುತ್ತಾ ಧನ್ಯವಾದ ಅರ್ಪಿಸಿದ್ದಾನೆ. ನಂತರ, ಇದೇ ನನ್ನ ಕೊನೆಯ ವೀಡಿಯೋ, ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಸ್ಥಗಿತ ಮಾಡುತ್ತೇನೆ ಎಂದು ಸೋಶಿಯಲ್ ಮೀಡಿಯಾಗೆ ಗುಡ್‌ಬೈ ಹೇಳಿ ವಿಡಿಯೋ ಹಂಚಿಕೊಂಡಿದ್ದಾನೆ.

ಮತ್ತೊಂದೆಡೆ ಸಕ್ಕರೆ ನಾಡು ಕೆಂಪಣ್ಣ ಎನ್ನುವವರು ಕೂಡ ನಾವು ಅಲ್ಲಿ ತಪ್ಪು ಮಾಡಿಲ್ಲ. ಯಾರದೋ ವಿಚಾರವನ್ನು ಮಾತನಾಡುವುದಕ್ಕೆ ಹೋಗಿ ಜನರ ಕೈಯಿಂದ ಒದೆ ತಿಂದಿದ್ದೇವೆ. ನಾವು ಕೇವಲ ಪೊಲೀಸರ ಜೊತೆ ಮಾತನಾಡುವುದಕ್ಕೆ ಹೋಗಿದ್ದು ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಈ ವಿಡಿಯೋವನ್ನು ವೈರಲ್ ಮಾಡುವ ಮುನ್ನ ಸತ್ಯವನ್ನು ತಿಳಿದುಕೊಳ್ಳಿ ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.