ಸೋಲಿಗರ ಸಮುದಾಯಕ್ಕೆ ವಿಶೇಷ ಗಮನ ನೀಡಲಿದ್ದೇವೆ. ಕಾಡಿನಲ್ಲಿ ವಾಸಿಸುವವರಿಗೆ ಸೌಲಭ್ಯ ಕೊಡಲು ಅರಣ್ಯ ಕಾಯ್ದೆಗೆ ಕೆಲ ತಿದ್ದುಪಡಿ ತರಲಾಗುವುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಚಾಮರಾಜನಗರ(ಮಾ.02): ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲ ಕಾಡಿನಲ್ಲಿ ವಾಸಿಸುವ ಬೇಡಗಂಪಣರನ್ನು ಎಸ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ಬಿಜೆಪಿ ವಿಜಯಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಿದ ಬಳಿಕ ಬೇಡಗಂಪಣ ಮತ್ತು ಸೋಲಿಗರೊಂದಿಗೆ ನಡೆದ ಸಂವಾದದಲ್ಲಿ ಬುಧ​ವಾ​ರ ಮಾತನಾಡಿ, ಸೋಲಿಗರ ಸಮುದಾಯಕ್ಕೆ ವಿಶೇಷ ಗಮನ ನೀಡಲಿದ್ದೇವೆ. ಕಾಡಿನಲ್ಲಿ ವಾಸಿಸುವವರಿಗೆ ಸೌಲಭ್ಯ ಕೊಡಲು ಅರಣ್ಯ ಕಾಯ್ದೆಗೆ ಕೆಲ ತಿದ್ದುಪಡಿ ತರಲಾಗುವುದು ಎಂದು ಪ್ರಕಟಿಸಿದರು.

ಮಹದೇಶ್ವರ ಬೆಟ್ಟದ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಅನುದಾನವನ್ನು ಮಹಿಳಾ ಸಂಘಕ್ಕೂ ಕೊಡಲಾಗುವುದು. ಸಣ್ಣ, ಅತಿ ಸಣ್ಣ ಕೈಗಾರಿಕೆ ಸ್ಥಾಪ​ನೆಗೆ ಗರಿಷ್ಠ ಅನುದಾನ ನೀಡಲಾಗು​ವು​ದು. ಕಾಡಂಚಿನಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸಲಾಗು​ವುದು ಎಂದು ಭರ​ವಸೆ ನೀಡಿ​ದ​ರು.

ನಡ್ಡಾ ಕಾರ್ಯಕ್ರಮಕ್ಕೇ ಸಚಿವ ಸೋಮಣ್ಣ ಗೈರು..!

ವಿಜಯ ಸಂಕಲ್ಪ ರಥ ಯಾತ್ರೆಗೆ ಮಲೆ ಮಾದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಿದ್ದೇವೆ. ಬಿಜೆಪಿ ಗೆಲುವಿನ ಸಂಕಲ್ಪ ಸಿದ್ಧಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪಕ್ಷ ಮತ್ತೆ ಅಧಿ​ಕಾ​ರಕ್ಕೆ ಬರು​ವುದು ನಿಶ್ಚಿ​ತ ಎಂದ​ರು.

ಇದೇ ವೇಳೆ ಪ್ರಧಾನಿ ಮೋದಿ ವಿಶ್ವಮಾನ್ಯ ನಾಯಕರು ಎಂದ ಅವರು, ಪ್ರತಿ​ಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಗ್ಯಗಳ ಸರದಾರ. ರಾಜ್ಯದ ಜನರಿಗೆ ಅವರು ಲೂಟಿ ಭಾಗ್ಯ ನೀಡಿದ್ದಾರೆ. ಅವರ ಅನ್ನಭಾಗ್ಯ ಕಳ್ಳತನ ಮಾಡು​ವ​ವರ ಪಾಲಿನ ಭಾಗ್ಯವಾಗಿತ್ತು ಎಂದ​ರು.

ರಾಜ್ಯ ಸರ್ಕಾ​ರದ ವಿರುದ್ಧ ಭ್ರಷ್ಟಾ​ಚಾ​ರದ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಆರೋಪ ಮಾಡುತ್ತಿ​ದ್ದಾರೆ. ಆದ​ರೆ ತಿಹಾರ್‌ ಜೈಲಿ​ಗೆ ಹೋಗಿ ಬಂದ ಡಿ.ಕೆ.​ಶಿ​ವ​ಕು​ಮಾರ್‌ ಅವರೇ ನಿಜ​ವಾ​ದ ಭ್ರಷ್ಟರು ಎಂದು ವ್ಯಂಗ್ಯವಾಡಿದರು.