ಬೆಂಗಳೂರಿನಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಉತ್ಸವ; ದಿಟ್ಟ ಮಹಿಳೆಯ ಚರಿತ್ರೆ ನೆನೆದ ಸಚಿವ!
ಬೆಂಗಳೂರಿನಲ್ಲಿ ಆಯೋಜಿಸಿದ್ದ ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ಅವರ ಸಾಹಸ, ಹೋರಾಟವನ್ನು ನೆನಪಿಸಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ವಿಶೇಷತೆ ಇಲ್ಲಿದೆ.
ಬೆಂಗಳೂರು(ಮಾ.12) ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಹೊರಾಟ, ಧೈರ್ಯ, ಸಾಹಸ, ಇಡೀ ದೇಶದ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದ ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವದಲ್ಲಿ ಮಾತನಾಡಿದ ಗೋಪಾಲಯ್ಯ, 16ನೇ ಶತಮಾನದಲ್ಲೇ ರಾಣಿ ಅಬ್ಬಕ್ಕ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ್ದ ದಿಟ್ಟ ಮಹಿಳೆ ಎಂದು ರಾಣಿ ಅಬ್ಬಕ್ಕಚರಿತ್ರೆಯನ್ನು ನೆನಪು ಮಾಡಿಕೊಂಡರು. ಇದೇ ವೇಳೆ ತುಳುಭಾಷೆಗೆ ಸೂಕ್ತ ಸ್ಥಾನ ಮಾನ ಸಿಗಬೇಕು ಎಂದು ವಿಧಾನ ಸೌಧದಲ್ಲಿ ಮೊದಲು ಧ್ವನಿ ಎತ್ತಿದ್ದು ನಾನೇ ಎಂದು ಹೇಳಿದರು.
ರಾಣಿ ಅಬ್ಬಕ್ಕ ಪ್ರತಿಷ್ಠಾನದ ವತಿಯಿಂದ “ಉಳ್ಳಾಲದ ರಾಣಿ ಅಬ್ಬಕ್ಕ ಉತ್ಸವ” ವನ್ನ ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿಂದು ಅದ್ದೂರಿಯಾಗಿ ಆಚರಿಸಲಾಯಿತು. ವೀರ ರಾಣಿ ಅಬ್ಬಕ್ಕ ಕೀರ್ತಿ ಮರೆತುಹೋಗಬಾರದು ಎಂಬ ನೆನಪಿಗಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮಹಾಲಕ್ಷ್ಮಿ ಲೇಔಟ್ ವಿಧಾಸಭಾ ಕ್ಷೇತ್ರದ ನಾಗಾಪುರ ವಾರ್ಡ್ ನ ಕಮಲಮ್ಮನ ಗುಂಡಿ ಕ್ರೀಡಾಂಗಣಕ್ಕೆ ಉಳ್ಳಾಲ ರಾಣಿ ಅಬ್ಬಕ್ಕ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದ್ದು, ಇದೇ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.
India@75:ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ವೀರಗಾಥೆ
ಇನ್ನು, ರಾಣಿ ಅಬ್ಬಕ್ಕ ಪ್ರತಿಷ್ಠಾನದ ವತಿಯಿಂದ ಮೊದಲ ಬಾರಿಗೆ ಬೆಂಗಳೂರಿನಲ್ಲಿ “ರಾಣಿ ಅಬ್ಬಕ್ಕ ಪ್ರಶಸ್ತಿ”ಯನ್ನ ಬೆಂಗಳೂರು ಮಾಜಿ ಉಪಪೌರರಾದ ಹೇಮಲತಾ ಗೋಪಾಲಯ್ಯ ಅವರಿಗೆ ನೀಡಿ ಸನ್ಮಾನಿಸಲಾಯತು. ವೇದಿಕೆ ಕಾರ್ಯಕ್ರಮದಲ್ಲಿ ವಾಗ್ಮಿ ಶ್ರೀಕಾಂತ್ ಶೆಟ್ಟಿ ನೀಡಿದ ರಾಣಿ ಅಬ್ಬಕ್ಕನ ಚರಿತ್ರೆಯ ಭಾಷಣ ನೆರದಿದ್ದವರಿಗೆ ಸಂಚಲನ ಉಂಟುಮಾಡಿತು, ಇದಕ್ಕೂ ಮೊದಲ ರಾಣಿಯ ಇತಿಹಾಸ ಸಾರುವ ಯಕ್ಷಗಾನ ಆಯೋಜಿಸಲಾಯಿತು.
ವೇದಿಕೆ ಕಾರ್ಯಕ್ರಮದ ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ . ಮೂಡುಬಿದಿರೆಯ ೩೦೦ ವಿದ್ಯಾರ್ಥಿಗಳು ಆಳ್ವಾಸ್ ಸಾಂಸ್ಕೃತಿಕ ವೈಭವನ್ನ ತೆರೆದಿಟ್ಟರು. ಜೊತೆಗೆ ಜೊತೆ ವಿವಿಧ ರಾಜ್ಯಗಳ ನೃತ್ಯ ಪ್ರಕಾರಗಳನ್ನ ಪ್ರದರ್ಶಿಸಲಾಯಿತು. ಇನ್ನುಳಿದಂತೆ, ರಾಣಿ ಅಬ್ಬಕ್ಕ ಉತ್ಸವದಲ್ಲಿ ಕರ್ನಾಟಕದ ಸಾಂಸ್ಕೃತಿಕ ಕಲೆಗಳಾದ ಡೊಳ್ಳುಕುಣಿತ ಯಕ್ಷಗಾನ ಕಲೆಗಳು ಪ್ರೇಕ್ಷರನ್ನ ಮನಸೂರೆಗೊಳಿಸಿದವು. ಕ್ರೀಡಾಂಗಣದಲ್ಲಿ ವಿವಿಧ ಖಾಧ್ಯಗಳ ಆಹಾರ ಮೇಳ ಮತ್ತು ಹಲವು ಕ್ರೀಡಾಕೂಟಗಳನ್ನ ಆಯೋಜಿಸಲಾಗಿತ್ತು.
India@75: ಮಂಗಳೂರು ಕರಾವಳಿಯನ್ನು ಪರಕೀಯರ ಕೈಯಿಂದ ರಕ್ಷಿಸಿದ್ದ ರಾಣಿ ಅಬ್ಬಕ್ಕ
ಎಂ ಆರ್ ಜಿ ಗ್ರೂಪ್ ಛೇರ್ಮನ್ ಪ್ರಕಾಶ್ ಶೆಟ್ಟಿ, ಯುನಿವರ್ಸಲ್ ಸಮೂಸ ಸಂಸ್ಥೆಯ ಉಪೇಂದ್ರ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಭಾರತೀ ಶೆಟ್ಟಿ, ರಾಣಿ ಅಬ್ಬಕ್ಕ ಪ್ರತಿಷ್ಠಾನದ ಅಧ್ಯಕ್ಷರಾದ ಕೆವಿ ರಾಜೇಂದ್ರ ಕುಮಾರ್, ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಪುರುಷೋತ್ತಮ ಷೇಂಡ್ಲಾ, ಗೌರವ ಕಾರ್ಯದರ್ಶಿ ಅಜಿತ್ ಹೆಗ್ಡೆಕೆ, ಪ್ರಧಾನ ಸಂಚಾಲಕರಾದ ದೀಪಕ್ ಶೆಟ್ಟಿ ಸೇರಿದಂತೆ ಹಲವರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.