ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಇದೀಗ ಮತ್ತೆ ಪೊಲೀಸರ ಮೊರೆ ಹೋಗಿದ್ದಾಲೆ. ಈಗ ರಮೇಶ್ ಜಾರಕಿಹೊಳಿ ಪುತ್ರನ ಸ್ನೇಹಿತರ ವಿರುದ್ಧ ಪತ್ರದಲ್ಲಿ ಪ್ರಸ್ತಾಪಿಸಿದ್ದಾಳೆ. 

 ಬೆಂಗಳೂರು (ಮೇ.06):  ‘ನನ್ನ ವಕೀಲರಿಗೆ ಆಮಿಷವೊಡ್ಡಿ ಅತ್ಯಾಚಾರ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹಾಕುತ್ತಿರುವ ಮಾಜಿ ಸಚಿವರ ಪುತ್ರನ ಗೆಳೆಯನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಬೆಂಗಳೂರು ಪೊಲೀಸ್‌ ಆಯುಕ್ತರು ಹಾಗೂ ತನಿಖಾಧಿಕಾರಿಗೆ ಲೈಂಗಿಕ ಹಗರಣದ ಯುವತಿ ಪ್ರತ್ಯೇಕವಾಗಿ ಪತ್ರ ಬರೆದಿದ್ದಾಳೆ.

Add Asianetnews Kannada as a Preferred SourcegooglePreferred

ಇದರೊಂದಿಗೆ ಇತ್ತೀಚಿಗೆ ಮಹಾಮಾರಿ ಕೊರೋನಾ ಎರಡನೇ ಹಾವಳಿ ಪರಿಣಾಮ ಸಣ್ಣಗಾಗಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣವು ಮತ್ತೆ ಚರ್ಚೆಗೆ ಬಂದಿದೆ. ಪ್ರಕರಣ ಹಿಂಪಡೆಯಲು ಜಾರಕಿಹೊಳಿ ಪುತ್ರನ ಗೆಳೆಯ ಪ್ರಭು ಪಾಟೀಲ ಎಂಬಾತ ಪ್ರಭಾವ ಬೀರುತ್ತಿದ್ದಾನೆ ಎಂದು ಯುವತಿ ಗಂಭೀರವಾಗಿ ಆರೋಪಿಸಿದ್ದಾಳೆ.

ರಾಸಲೀಲೆ ಸಿಡಿ ಪ್ರಕರಣ: ರಮೇಶ್‌ ಜಾರಕಿಹೊಳಿಗೆ ಮತ್ತೊಂದು ನೋಟಿಸ್‌ ...

ಪತ್ರ ಪೂರ್ಣ ವಿವರ ಹೀಗಿದೆ: ನಾನು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಸಂಬಂಧ ಪ್ರಕರಣ ದಾಖಲಿಸಿದ್ದೇನೆ. ಆದರೆ ಈ ಪ್ರಕರಣದ ಆರೋಪಿ ಜಾರಕಿಹೊಳಿ ಅವರು ಈವರೆಗೆ ತನಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿರುವುದಿಲ್ಲ. ತನಿಖೆಗೆ ಸಹ ಸಹಕಾರವನ್ನು ನೀಡುತ್ತಿಲ್ಲ. ಕೊರೋನಾ ಸೋಂಕು ಪೀಡಿತರಾಗಿರುವುದಾಗಿ ಸುಳ್ಳು ನೆಪವೊಡ್ಡಿ ಎರಡು ಬಾರಿ ಎಸ್‌ಐಟಿ ವಿಚಾರಣೆಗೆ ಆರೋಪಿ ಗೈರಾಗಿದ್ದಾರೆ. 

ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಸಾಕ್ಷ್ಯ ನಾಶಕ್ಕೆ ಹಾಗೂ ಪ್ರಕರಣ ಹಿಂಪಡೆಯುವಂತೆ ಒತ್ತ ಹೇರಲು ತೊಡಗಿದ್ದಾರೆ. ನನ್ನ ವಕೀಲರಾದ ಕೆ.ಎನ್‌.ಜಗದೀಶ್‌ ಅವರಿಗೆ 15 ದಿನಗಳಿಂದ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಕೋಟ್ಯಾಂತರ ಹಣದ ಆಮಿಷವೊಡ್ಡಿರುವುದು ನನ್ನ ಗಮನಕ್ಕೆ ಬಂದಿದೆ. ಇನ್ನೊಬ್ಬ ವಕೀಲರಾದ ಸೂರ್ಯ ಮುಕುಂದರಾಜ್‌ ಅವರಿಗೆ ಮೇ 3ರಂದು ಮಧ್ಯಾಹ್ನ 4.37ಕ್ಕೆ ವಾಟ್ಸ್‌ ಆ್ಯಪ್‌ ಕರೆ ಮಾಡಿ ಪ್ರಕರಣ ಹಿಂಪಡೆಯಲು ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದ್ದಾಳೆ.