ಆನೆ ಮರಿಗೆ ಮರುಗಿದ ರಾಹುಲ್ ಗಾಂಧಿ, ಸಿಎಂ ಬೊಮ್ಮಾಯಿಗೆ ಪತ್ರ
ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇತ್ತೀಚೆಗೆ ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗಾಯಗೊಂಡಿರುವ ಆನೆ ಮರಿಯನ್ನು ಕಂಡಿರುವ ರಾಹುಲ್ ಗಾಂಧಿ ಈ ಕುರಿತಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು (ಅ.5): ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಸ್ತುತ ಕರ್ನಾಟಕದಲ್ಲಿದೆ. ಕಾಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪಾದಯಾತ್ರೆ ಜೋರಾಗಿ ನಡೆಯುತ್ತಿದೆ. ಇತ್ತೀಚೆಗೆ ವಿಶ್ರಾಂತಿಯ ದಿನ ರಾಹುಲ್ ಗಾಂಧಿ ನಾಗರಹೊಳೆಯ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಅವರು ಭೇಟಿ ನೀಡಿದ್ದರು. ಈ ವೇಳೆ ಆನೆಮರಿಯೊಂದರ ಕಷ್ಟಕ್ಕೆ ಮರುಗಿರುವ ಕಾಂಗ್ರೆಸ್ ನಾಯಕ, ಅದಕ್ಕೆ ಚಿಕಿತ್ಸೆ ಕೊಡಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರೆ ಬರೆದಿದ್ದಾರೆ. ಹುಲಿ ಸಂರಕ್ಷಣಾ ಪ್ರದೇಶದಲ್ಲಿರುವ ಆನೆಯ ಮರಿಯೊಂದಕ್ಕೆ ಚಿಕಿತ್ಸೆಯ ಅಗತ್ಯವಿದೆ. ಗಾಯಗೊಂಡಿರುವ ಆನೆ ಮರಿ ಹಾಗೂ ತಾಯಿ ಆನೆಗೆ ಆದಷ್ಟು ಬೇಗ ಚಿಕಿತ್ಸೆ ಕೊಡಿಸಿ ಎಂದು ಪತ್ರ ಬರೆದಿದ್ದಾರೆ. ಆನೆ ಮರಿಯು ಬಾಲ ಹಾಗೂ ದಂತದ ಗಾಯದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಮಂಗಳವಾರ ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಸಫಾರಿಗೆ ತೆರಳಿದ್ದರು. ಈ ವೇಳೆ ಆನೆ ಮರಿಗೆ ಆಗಿರುವ ಗಾಯದ ಬಗ್ಗೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಇಬ್ಬರೂ ಖುದ್ದು ನೋಡಿದ್ದರು. ನನ್ನ ಈ ಪತ್ರದಲ್ಲಿ ಯಾವುದೇ ರಾಜಕೀಯ ವಿಚಾರಗಳಿಲ್ಲ. ರಾಜಕೀಯದ ಗಡಿಗಳನ್ನು ಬಿಟ್ಟು ಈ ಪತ್ರ ಬರೆದಿದ್ದೇನೆ. ಸೂಕ್ತ ಚಿಕಿತ್ಸೆ ದೊರೆತರೆ ಸಂಕಷ್ಟದಲ್ಲಿರುವ ತಾಯಿ ಆನೆ ಹಾಗೂ ಮರಿ ಆನೆ ಬದುಕುತ್ತದೆ. ದಯವಿಟ್ಟು ಸೂಕ್ತ ಚಿಕಿತ್ಸೆ ಒದಗಿಸುವಂತೆ ರಾಹುಲ್ ಪತ್ರದಲ್ಲಿ ಮನವಿ ಮಾಡಿದ್ದಾರೆ.