ಪೊಲೀಸ್ ಇಲಾಖೆಯ 545 ಪಿಎಸೈ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಾಗಿರುವ ಅಕ್ರಮದಲ್ಲಿ ಭಾಗಿಯಾಗಿ ಕಾರಾಗೃಹ ಸೇರಿರುವ 40ಕ್ಕೂ ಹೆಚ್ಚು ಆರೋಪಿಗಳ ಪೈಕಿ ಇದೀಗ ಇದೇ ಮೊದಲ ಬಾರಿಗೆ ಆರೋಪಿ, ಉದ್ಯಮಿ ಸುರೇಶ ಕಾಟೆಗಾಂವ್ ಅವರಿಗೆ ಜಾಮೀನು ಮಂಜೂರಾಗಿದೆ.
ಕಲಬುರಗಿ (ಜೂ.24): ಪೊಲೀಸ್ ಇಲಾಖೆಯ 545 ಪಿಎಸೈ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಾಗಿರುವ ಅಕ್ರಮದಲ್ಲಿ ಭಾಗಿಯಾಗಿ ಕಾರಾಗೃಹ ಸೇರಿರುವ 40ಕ್ಕೂ ಹೆಚ್ಚು ಆರೋಪಿಗಳ ಪೈಕಿ ಇದೀಗ ಇದೇ ಮೊದಲ ಬಾರಿಗೆ ಆರೋಪಿ, ಉದ್ಯಮಿ ಸುರೇಶ ಕಾಟೆಗಾಂವ್ ಅವರಿಗೆ ಜಾಮೀನು ಮಂಜೂರಾಗಿದೆ. ಹಗರಣದಲ್ಲಿ ಪಾಲ್ಗೊಂಡಿದ್ದ ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಹಾಗೂ ಆಕೆಯ ತಂಡದ ಸದಸ್ಯರಿಗೆ ಆಸರೆ ನೀಡಿದ್ದ ಆರೋಪದ ಮೇಲೆ ಸುರೇಶ ಕಾಟೆಗಾಂವ್ ಇವರನ್ನು ಸಿಐಡಿ ಬಂಧಿಸಿತ್ತು. ಸುರೇಶ ಕಾಟೆಗಾಂವ್ ಜಾಮೀನು ಕೋರಿ 2 ಬಾರಿ ಜಿಲ್ಲಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ ಇಲ್ಲಿ ಜಾಮೀನು ನಿರಾಕರಿಸಲಾಗಿತ್ತು.
ನಂತರ ಹೈಕೋರ್ಟ್ನಲ್ಲಿ ಜಾಮೀನು ಕೋರಿ ಸುರೇಶ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದ. ವಿಚಾರಣೆ ಕೈಗೆತ್ತಿಕೊಂಡ ಕಲಬುರಗಿ ಹೈಕೋರ್ಚ್ ಪೀಠ ಜಾಮೀನು ಮಂಜೂರು ಮಾಡಿದೆ. ಇದೇ ಹಗರಣದಲ್ಲಿ ಜೈಲು ಸೇರಿರುವ ದಿವ್ಯಾ ಹಾಗರಗಿ ಹಾಗೂ ಪತಿ ರಾಜೇಶ್ ಹಾಗರಗಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಚ್ನಲ್ಲಿ ವಜಾ ಆಗಿದೆ. ಹಗರಣದಲ್ಲಿ ಬಂಧಿತರಾಗಿ ಜೈಲಲ್ಲಿರುವ ಆರೋಪಿಗಳಲ್ಲಿ ಎಲ್ಲರೂ 2 ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ಯಾರಿಗೂ ಜಾಮೀನು ಸಿಕ್ಕಿಲ್ಲ. ಇದೀಗ ಇಡೀ ಪ್ರಕರಣದಲ್ಲಿ ಜೈಲು ಸೇರಿದ 2 ತಿಂಗಳ ನಂತರ ಸುರೇಶ ಕಾಟೆಗಾಂವ್ಗೆ ಜಾಮೀನು ದೊರಕಿದೆ.
PSI Recruitment Scam ತನಿಖೆಯಲ್ಲಿ ಸರ್ಕಾರ ಮೂಗು ತೂರಿಸಲ್ಲ: Minister Araga Jnanendra
ಮಾಜಿ ಸೈನಿಕನ ಬಂಧಿಸಿದ ಸಿಐಡಿ ಅಧಿಕಾರಿಗಳು: ಪೊಲೀಸ್ ಇಲಾಖೆಯ 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನೋರ್ವನನ್ನು ಸಿಐಡಿ ಅಧಿಕಾರಿಗಳು ಕಲಬುರಗಿಯಲ್ಲಿ ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದ ನಿವಾಸಿ ವಿಶ್ವನಾಥ್ ಮಾನೆ (38) ಬಂಧಿತ ಆರೋಪಿ. ಕಲಬುರಗಿ ನಗರದಲ್ಲಿರುವ ನೋಬಲ್ ಖಾಸಗಿ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಈತ ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆದು, ಎಕ್ಸ್ ಸರ್ವಿಸ್ ಮ್ಯಾನ್ ಕೋಟಾದಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್ ಪಡೆದಿದ್ದ ಎಂದು ತಿಳಿದು ಬಂದಿದೆ.
ಪಿಎಸ್ಐ ಅಕ್ರಮ ನೇಮಕಾತಿ: ಸಿಸಿ ಕ್ಯಾಮೆರಾ ಆಫ್ ಮಾಡಿ ಒಎಂಆರ್ ಶೀಟ್ ತಿದ್ದುಪಡಿ!
ಈತ ಸದ್ಯಕ್ಕೆ ಕಲಬುರಗಿಯಲ್ಲಿರುವ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಪಡೆಯಲ್ಲಿ ಸಿಬ್ಬಂದಿಯಾಗಿ ಕೆಲಸದಲ್ಲಿದ್ದ. ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಪ್ರಕಾಶ ರಾಠೋಡ ಮತ್ತವರ ತಂಡದವರು ಸೋಮವಾರ ಈತನನ್ನು ಎಸ್ಡಿಆರ್ಎಫ್ ಕಚೇರಿಯ ಮುಂದೆಯೇ ಬಂಧಿಸಿ ವಶಕ್ಕೆ ಪಡಂದಿದ್ದಾರೆ. ಅಕ್ರಮದ ಕಿಂಗ್ಪಿನ್ ಅಫಜಲ್ಪುರದ ಸೊನ್ನ ಊರಿನ ಆರ್ಡಿ ಪಾಟೀಲ್ ಈತನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಮಾನೆ ಈತ ಬ್ಲೂಟೂತ್ ಡಿವೈಸ್ ಬಳಸಿಯೇ ಪರೀಕ್ಷೆ ಬರೆದಿದ್ದ ಎಂಬಂಶ ತನಿಖೆಯಲ್ಲಿ ಗೊತ್ತಾಗಿದೆ. ಅಫಜಲ್ಪುರ ತಾಲೂಕಿನ ಗೌರ್ (ಬಿ) ನಿವೃತ್ತ ಸೈನಿಕ ಮಾನೆ ಈತನ ಪತ್ನಿಯ ತವರೂರು. ಹೀಗಾಗಿ ಈತ ಮುದ್ದೆಬಿಹಾಳದವನಾದರೂ ಕಿಂಗ್ಪಿನ್ ಆರ್ಡಿ ಪಾಟೀಲನ ಸಾಮಿಪ್ಯ ಬಂದು ಅಕ್ರಮದಿಂದ ಪರೀಕ್ಷೆ ಬರೆದ ಬಗ್ಗೆ ತನಿಖೆಯಲ್ಲಿ ಮಾನೆ ಬಾಯಿ ಬಿಟ್ಟಿದ್ದಾನೆಂದು ಗೊತ್ತಾಗಿದೆ.
