ಪೋಕ್ಸೋ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾ ಶ್ರೀಯವರು ತಮ್ಮ ಮಠದ ಅಧಿಕಾರವನ್ನು ಮರಳಿ ಪಡೆದಿದ್ದಾರೆ.

ಚಿತ್ರದುರ್ಗ/ಬೆಂಗಳೂರು (ಡಿ.8) ಪೋಕ್ಸೋ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾ ಶ್ರೀಯವರು ತಮ್ಮ ಮಠದ ಅಧಿಕಾರವನ್ನು ಮರಳಿ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿಯವರು ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ್ದು, 5ನೇ ತಾರೀಕಿಗೆ ಮಾನ್ಯ ನ್ಯಾಯಾಧೀಶರಾದ ಕೆ.ಬಿ.ಗೀತಾರಿಂದ ಆದೇಶ ಬಂದಿದೆ. ನಮಗೆ ಸ್ವೀಕೃತಿ ಪ್ರತಿ ಬಂದಿದೆ. ಹೀಗಾಗಿ, ಮುಂದಿನ ಆಡಳಿತವನ್ನು ಮುರುಘಾ ಶ್ರೀಗಳೇ ನಡೆಸಿಕೊಂಡು ಹೋಗಲಿದ್ದಾರೆ. ಭಕ್ತರು ಮತ್ತು ಸಿಬ್ಬಂದಿ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.

ಮುರುಘಾ ಸ್ವಾಮೀಜಿಗೆ ಬಿಗ್‌ ರಿಲೀಫ್‌: 2ನೇ ಕೇಸ್‌ನಲ್ಲಿಯೂ ಜಾಮೀನು ಮಂಜೂರು

ಪೋಕ್ಸೋ ಪ್ರಕರಣದಲ್ಲಿ 2022ರ ಸೆಪ್ಟೆಂಬರ್‌ 1ರಂದು ಮುರುಘಾ ಶ್ರೀಯವರ ಬಂಧನವಾಗಿತ್ತು. ಸತತ 14 ತಿಂಗಳ ಕಾಲ ಸೆರೆಮನೆವಾಸ ಅನುಭವಿಸಿದ್ದರು. ಈ ವೇಳೆ, ರಾಜ್ಯ ಸರ್ಕಾರ ಮುರುಘಾ ಮಠದ ಆಡಳಿತ ನಿರ್ವಹಿಸಲು ನಿವೃತ್ತ ಐಎಎಸ್‌ ಅಧಿಕಾರಿ ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಈ ನೇಮಕ ಪ್ರಶ್ನಿಸಿ ಮಠದ ಪರ ವಕೀಲರು ಹೈಕೋರ್ಟ್‌ ಮೊರೆ ಹೋಗಿದ್ದರಿಂದ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಆಗ ಮಠದ ಪೀಠಾಧಿಪತಿಯಾಗಿದ್ದ ಮುರುಘಾ ಶ್ರೀ ಜೈಲಲ್ಲಿ ಇದ್ದ ಕಾರಣ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ ಮಠದ ಅಧಿಕಾರ ನೀಡಿತ್ತು. ಹೀಗಾಗಿ, ಈವರೆಗೆ ಚಿತ್ರದುರ್ಗದ ಪಿಡಿಜೆ ಅವರು ಮಠದ ಆಡಳಿತಾಧಿಕಾರಿಯಾಗಿದ್ದರು.

ನವಂಬರ್ 16ರಂದು ಮುರುಘಾ ಶ್ರೀ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮಠದ ಅಧಿಕಾರಕ್ಕಾಗಿ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್‌, ಮುರುಘಾ ಶ್ರೀಗೆ ಅಧಿಕಾರ ಹಸ್ತಾಂತರಿಸುವಂತೆ ಚಿತ್ರದುರ್ಗದ ಪ್ರಿನ್ಸಿಪಲ್‌ ಡಿಸ್ಟ್ರಿಕ್ಟ್‌ ಮತ್ತು ಸೆಷನ್ಸ್‌ ಜಡ್ಜ್‌ಗೆ ಸೂಚಿಸಿದೆ.

ಮುರುಘಾಶ್ರೀ ವಿರುದ್ಧ ಬಂಧನ ವಾರಂಟ್; ಕಳೆದ ವಾರ ಬಿಡುಗಡೆಯಾಗಿರುವ ಶ್ರೀಗಳಿಗೆ ಮತ್ತೆ ಬಂಧನ ಭೀತಿ!

ಈ ಮಧ್ಯೆ, ಷರತ್ತಿನನ್ವಯ ಅವರು ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ. ಹೀಗಾಗಿ, ಅವರು ಜಿಲ್ಲೆಯಿಂದ ಹೊರಗಿದ್ದುಕೊಂಡೇ ಮಠದ ಆಡಳಿತ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.