ಇರಾನ್-ಇಸ್ರೇಲ್ ಯುದ್ಧದಿಂದಾಗಿ ಔಷಧ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಪೂರೈಕೆ ತಡವಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಔಷಧಗಳ ಕೊರತೆ ಬೆಲೆ ಏರಿಕೆ ಸಾಧ್ಯತೆಯಿದ್ದು, ಇದರ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ‘ಇರಾನ್-ಇಸ್ರೇಲ್ ಯುದ್ಧದಿಂದಾಗಿ ಔಷಧೀಯ ಡ್ರಗ್ಸ್ (ಫಾರ್ಮಾಸ್ಯುಟಿಕಲ್ ಡ್ರಗ್ಸ್) ಬರುವುದು ತಡವಾಗುತ್ತಿದೆ. ಈ ಕೊರತೆಯನ್ನು ಕೇಂದ್ರ ಸರ್ಕಾರ ಹೇಗೆ ನಿಭಾಯಿಸುತ್ತದೆ? ಯಾವ ರೀತಿ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತದೆ ನೋಡಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಡಿಕೆಗೆ ತಕ್ಕಂತೆ ನಾವು ಔಷಧ ಖರೀದಿಸುವುದು ವಾಡಿಕೆ. ಆದರೆ, ಔಷಧ ತಯಾರಿಕೆಗೆ ಅಗತ್ಯವಾದ ಫಾರ್ಮಾಸ್ಯುಟಿಕಲ್ ಡ್ರಗ್ಸ್ (ಔಷಧಗಳ ತಯಾರಿಕೆಗೆ ಬಳಸುವ ರಸಾಯನಿಕ ವಸ್ತುಗಳು) ಬರುವುದು ತುಂಬಾ ತಡವಾಗುತ್ತಿದೆ. ಜತೆಗೆ ಬೆಲೆ ಏರಿಕೆಯಾಗುತ್ತಲೇ ಇದೆ. ಇವು ಕ್ಲಿಷ್ಟಕರ ಸಮಸ್ಯೆಗಳಾಗಿದ್ದು, ಕೇಂದ್ರ ಸರ್ಕಾರ ಸ್ಪಂದಿಸಬೇಕು. ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ವಹಿಸಿ ಸರಬರಾಜು ಹೇಗೆ ಮಾಡಬೇಕು ಎಂಬುದನ್ನು ಯೋಚಿಸಿರುತ್ತದೆ. ಈ ಬಗ್ಗೆ ಕೇಂದ್ರವೇ ಸ್ಪಷ್ಟತೆ ನೀಡಬೇಕು ಎಂದರು.
ಔಷಧ ತಯಾರಿಕೆ ಕಂಪೆನಿಗಳು ಪರಿಸ್ಥಿತಿ ಹೀಗೆ ಮುಂದುವರೆದರೆ ಔಷಧಿ ತಯಾರಿಕೆ ಕಷ್ಟವಾಗಲಿದೆ ಎಂದು ಪತ್ರ ಬರೆದಿವೆ. ಯುದ್ಧದಿಂದಾಗಿ ವಿದೇಶದಿಂದ ಬರಬೇಕಿದ್ದ ಔಷಧೀಯ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಪತ್ರ ಬರೆದಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬಿಜೆಪಿ ಕಚೇರಿಯಲ್ಲೇ ಸಮಸ್ಯೆ ಇದೆ. ಅಡುಗೆ ಅನಿಲ ಇಲ್ಲದೆ ಅವರು ಸೌದೆಯಲ್ಲಿ ಅಡುಗೆ ಮಾಡಿದ್ದಾರೆ. ಅವರ ಪರಿಸ್ಥಿತಿಯೇ ಆ ರೀತಿ ಇದೆ ಎಂದರೆ ಮತ್ತೇನು ಹೇಳಬೇಕು? ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಹೊಣೆ ಕೇಂದ್ರ ಸರ್ಕಾರದ ಮೇಲೆ ಇದೆ ಎಂದರು.


