ಕರ್ಫ್ಯೂ ಇದ್ದರೂ ಕೋವಿಡ್ ಟೆಸ್ಟ್, ಲಸಿಕೆಗೆ ಜನಸಂದಣಿ
ರಾಜ್ಯಾದ್ಯಂತ ಕರ್ಫ್ಯೂ ಇದ್ದರು ಸಹ ಕೋವಿಡ್ ಲಸಿಕೆ ಪಡೆಯಲು ಜನರು ಹೆಚ್ಚು ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಕರ್ಫ್ಯೂ ನಡುವೆಯೂ ಲಸಿಕೆ ಪಡೆಯಲು ಜನಸಂದಣಿಯಾಗುತ್ತಿದೆ.
ಬೆಂಗಳೂರು (ಏ.25): ವಾರಾಂತ್ಯದ ಕಫä್ರ್ಯ ವೇಳೆ ವೈದ್ಯಕೀಯ ಸೇವೆಗಳಿಗೆ ಅವಕಾಶ ಮುಕ್ತವಾಗಿದ್ದ ಹಿನ್ನೆಲೆಯಲ್ಲಿ ಶನಿವಾರ ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ಕೆಲವೆಡೆಗಳಲ್ಲಿ ನಾಗರಿಕರು ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಪರೀಕ್ಷೆ ಹಾಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನಸಂದಣಿ ಏರ್ಪಟ್ಟದೃಶ್ಯ ಕಂಡುಬಂತು.
ಮೈಸೂರಿನ ದೇವರಾಜ ಮಾರುಕಟ್ಟೆಯ ಚಿಕ್ಕ ಗಡಿಯಾರ ಬಳಿಯ ಕೊರೋನಾ ತಪಾಸಣಾ ಕೇಂದ್ರ ಸೇರಿ ವಿವಿಧ ಕಡೆಗಳಲ್ಲಿರುವ ಕೊರೋನಾ ತಪಾಸಣಾ ಕೇಂದ್ರಗಳಲ್ಲಿ ಎಂದಿನಂತೆ ಯಾವುದೇ ಅಡೆತಡೆಗಳಿಲ್ಲದೆ ಕೋವಿಡ್ ಪರೀಕ್ಷೆ ನಡೆಯಿತು. ಈ ಪರೀಕ್ಷೆ ಮಾಡಿಸಿಕೊಳ್ಳಲು ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನವದರು ಆಗಮಿಸಿದ್ದರು. ವಿವಿಧ ಲಸಿಕಾ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆದರು.
ಬೆಂಗಳೂರು: ಒಂದೇ ದಿನ 149 ಮಂದಿ ಸಾವು, ಸಾವಿನಲ್ಲೂ ಕೊರೋನಾ ದಾಖಲೆ..! .
ಇನ್ನು ತುಮಕೂರಿನ ಜಿಲ್ಲಾಸ್ಪತ್ರೆ ಆವರಣದಲ್ಲಿ 300ಕ್ಕೂ ಅಧಿಕ ಮಂದಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಕೋವಿಡ್ ಟೆಸ್ಟ್ ಮಾಡಿಸಿಕೊಂಡರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಹೊರಭಾಗದಲ್ಲಿ ಹಾಕಿದ್ದ ಟೆಂಟ್ನಲ್ಲಿ ಜನ ಕಾದು ಕುಳಿತು ಲಸಿಕೆ ಹಾಕಿಸಿಕೊಂಡರು. ಕುಮಟಾ, ರಾಣಿಬೆನ್ನೂರು ಆಸ್ಪತ್ರೆಯಲ್ಲೂ ಜನ ತಂಡೋಪತಂಡವಾಗಿ ಆಗಮಿಸಿ ವೈದ್ಯಕೀಯ ಸೇವೆ ಪಡೆದುಕೊಂಡರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬೆಳಗ್ಗೆ 8 ಗಂಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತರೂ 11 ಗಂಟೆವರೆಗೂ ವೈದ್ಯರ, ಆರೋಗ್ಯ ಸಿಬ್ಬಂದಿಯ ನೆರವು ದಕ್ಕಲಿಲ್ಲ ಎಂಬ ಆರೋಪ ಕೇಳಿಬಂದಿದೆ.