* ಬೆಂಗಳೂರು, ಬೆಳಗಾವಿ ಸೇರಿ ಕೆಲವೆಡೆ ಘಟನೆ* ಕೋವಿಡ್‌ ಲಸಿಕೆ ಹಾಕುವಲ್ಲಿ ಉಡುಪಿ ಜಿಲ್ಲೆ ಅತ್ಯುತ್ತಮ ಸಾಧನೆ * ಟೋಕನ್‌ ಸಿಗದಿದ್ದಕ್ಕೆ ಜನರ ಆಕ್ರೋಶ 

ಬೆಂಗಳೂರು(ಜು.04): ವೀಕೆಂಡ್‌ ಹಿನ್ನೆಲೆಯಲ್ಲಿ ಕೊರೋನಾ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆ ಜನರು ಆಗಮಿಸಿದ್ದರಿಂದ ರಾಜಧಾನಿ ಬೆಂಗಳೂರು, ಬೆಳಗಾವಿ, ಕಾರಾವಾರ ಸೇರಿದಂತೆ ಕೆಲವು ಲಸಿಕಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾದ ಘಟನೆ ಶನಿವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯ ಲಸಿಕೆ ಕೇಂದ್ರದ ಬಳಿ ಲಸಿಕೆಗೆ ಮುಗಿಬಿದ್ದರು. ಇನ್ನು ಬೆಳಗಾವಿಯ ಸಮಾದೇವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಲಸಿಕಾ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು.

ರಾಜ್ಯದಾದ್ಯಂತ ಕೋವಿಡ್‌ ಲಸಿಕೆ ಕೊರತೆ, ಜನರ ಪರದಾಟ

ಕಾರವಾರದ ಮೆಡಿಕಲ್‌ ಕಾಲೇಜಿನಲ್ಲಿ ಜನತೆ ಮುಗಿ ಬಿದ್ದು ಬಾಗಿಲಿನಲ್ಲಿ ನೂಕಾಟ ನಡೆಸಿ ಲಸಿಕೆ ಕೇಂದ್ರಕ್ಕೆ ನುಗ್ಗಲು ಪ್ರಯತ್ನಿಸಿದರು. 150 ಜನರಿಗೆ ಟೋಕನ್‌ ನೀಡಲಾಗಿತ್ತು. ಆದರೆ 500ಕ್ಕೂ ಹೆಚ್ಚು ಜನರು ಲಸಿಕೆ ಪಡೆಯಲು ಆಗಮಿಸಿದ್ದರಿಂದ ಟೋಕನ್‌ ಸಿಗದವರು ಲಸಿಕೆ ಕೊರತೆಗೆ ಕಿಡಿಕಾರಿದ್ದ ಕಂಡು ಬಂದಿತ್ತು.

ಅಲ್ಲದೇ ಕೋವಿಡ್‌ ಲಸಿಕೆ ಹಾಕುವಲ್ಲಿ ಉಡುಪಿ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದ್ದು, ರಾಜ್ಯಕ್ಕೆ 2ನೇ ಸ್ಥಾನದಲ್ಲಿದೆ. ಆದರೆ ಜಿಲ್ಲೆಗೆ ನಿಯಮಿತವಾಗಿ ಲಸಿಕೆ ಪೂರೈಕೆ ಇಲ್ಲದೆ ಸುಮಾರು 2 ಲಕ್ಷ ಮಂದಿ ಲಸಿಕೆಗೆ ಕಾಯುವಂತಾಗಿದೆ. ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಮಂದಿ ಲಸಿಕೆ ಪಡೆಯಲು ಅರ್ಹರಿದ್ದಾರೆ. ಅವರಲ್ಲಿ 5.42 ಲಕ್ಷ ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ.