Asianet Suvarna News Asianet Suvarna News

ಗಣೇಶ ಹಬ್ಬಕ್ಕೆ ಖಾಸಗಿ ಬಸ್‌ಗಳಿಂದ ಸುಲಿಗೆ: ಸರ್ಕಾರದ ವಿರುದ್ಧ ಆಕ್ರೋಶ

*   ಟಿಕೆಟ್‌ ದರ 2-3 ಪಟ್ಟು ಏರಿಕೆ
*   ಕೋವಿಡ್‌ ಸಂಕಷ್ಟದ ನಡುವೆಯೂ ನಿಂತಿಲ್ಲ ಸುಲಿಗೆ
*   ಧನದಾಹಕ್ಕೆ ನಿಯಂತ್ರಣ ಹಾಕುವಲ್ಲಿ ಸರ್ಕಾರ ವಿಫಲ

Outrage against the government for Increasing Private Bus Fare During Ganesh Festival grg
Author
Bengaluru, First Published Sep 8, 2021, 7:40 AM IST

ಬೆಂಗಳೂರು(ಸೆ.08): ಗೌರಿ-ಗಣೇಶ ಹಬ್ಬದ ಸಂದರ್ಭದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್‌ ಆಪರೇಟರ್‌ಗಳು ಪ್ರಯಾಣದ ಟಿಕೆಟ್‌ ದರವನ್ನು 2-3 ಪಟ್ಟು ಹೆಚ್ಚಳ ಮಾಡಿದ್ದಾರೆ. ಕೋವಿಡ್‌ ಸಂಕಷ್ಟದ ಸ್ಥಿತಿ ನಡುವೆ ಮನಸೋ ಇಚ್ಛೆ ಟಿಕೆಟ್‌ ದರ ಏರಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆ.9 ಮತ್ತು 10ರಂದು ಗೌರಿ-ಗಣೇಶ ಹಬ್ಬವಿರುವುದರಿಂದ ಸಾಕಷ್ಟು ಮಂದಿ ರಾಜಧಾನಿಯಿಂದ ರಾಜ್ಯ ಹಾಗೂ ಹೊರರಾಜ್ಯಗಳಿಗೆ ತೆರಳಲಿದ್ದಾರೆ. ಈ ಸಂದರ್ಭದ ದುರ್ಬಳಕೆ ಮಾಡಿಕೊಂಡಿಕೊಂಡಿರುವ ಖಾಸಗಿ ಬಸ್‌ ಅಪರೇಟರ್‌ಗಳು ಸೆ.8 ಮತ್ತು ಸೆ.9ರ ಟಿಕೆಟ್‌ ದರವನ್ನು ಮನಬಂದಂತೆ ಹೆಚ್ಚಿಸಿ ಹಗಲು ದರೋಡೆಗೆ ಮುಂದಾಗಿದ್ದಾರೆ. ಸಾಲು ರಜೆ, ಹಬ್ಬ, ವಿಶೇಷ ಸಂದರ್ಭಗಳಲ್ಲಿ ಗ್ರಾಹಕರ ಸುಲಿಗೆ ಸಾಮಾನ್ಯವಾಗಿದೆ. ಖಾಸಗಿ ಬಸ್‌ ಆಪರೇಟರ್‌ಗಳ ಈ ಧನದಾಹಕ್ಕೆ ಸರ್ಕಾರ ನಿಯಂತ್ರಣ ಹಾಕುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಮುಂಗಡ ಟಿಕೆಟ್‌ ಬುಕಿಂಗ್‌ ಜೋರಾಗಿದೆ. ಸೆ.8 ಮತ್ತು 9ರಂದು ಬೆಂಗಳೂರಿನಿಂದ ರಾಜ್ಯದ ದೂರದ ಜಿಲ್ಲೆಗಳು ಹಾಗೂ ಹೊರರಾಜ್ಯಗಳ ವಿವಿಧ ನಗರಗಳಿಗೆ ತೆರಳುವ ಖಾಸಗಿ ಬಸ್‌ಗಳ ಶೇ.80ರಷ್ಟುಆಸನಗಳ ಮುಂಗಡ ಟಿಕೆಟ್‌ ಖರೀದಿಸಲಾಗಿದೆ. ಆಸನಗಳಿಗೆ ಜನರ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಆಪರೇಟರ್‌ಗಳು ಹುಬ್ಬಳ್ಳಿ, ಬೀದರ್‌, ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಕೊಪ್ಪಳ ಮೊದಲಾದ ಕಡೆಗೆ ತೆರಳುವ ಬಸ್‌ಗಳ ಟಿಕೆಟ್‌ ದರವನ್ನು ಐದಾರು ಪಟ್ಟು ಏರಿಸಿದ್ದಾರೆ. ಹಬ್ಬಕ್ಕೆ ಊರುಗಳಿಗೆ ತೆರಳುವ ಅನಿವಾರ್ಯತೆ ಇರುವವರು ದುಬಾರಿ ದರ ತೆತ್ತು ಮುಂಗಡ ಟಿಕೆಟ್‌ ಖರೀದಿಸುತ್ತಿದ್ದಾರೆ..

ರಾಜ್ಯದ ಜನತೆಯಲ್ಲಿ ವಿಶೇಷ ಮನವಿ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ

ದುಬಾರಿ ದರಕ್ಕೆ ಕಡಿವಾಣ ಅಗತ್ಯ:

ಹಬ್ಬದ ಹಿನ್ನೆಲೆಯಲ್ಲಿ ಸೆ.9ರಂದು ಊರಿಗೆ ತೆರಳಬೇಕು. ಸಾಮಾನ್ಯ ದಿನಗಳಲ್ಲಿ ಧಾರವಾಡಕ್ಕೆ ಟಿಕೆಟ್‌ ದರ ಗರಿಷ್ಠ 800 ರು. ಇರುತ್ತದೆ. ಆದರೆ, ಇದೀಗ ಎರಡು ಸಾವಿರ ರು.ವರೆಗೂ ಏರಿಸಲಾಗಿದೆ. ಅನಿವಾರ್ಯವಾಗಿ ಊರಿಗೆ ತೆರಳಲೇಬೇಕಿರುವುದರಿಂದ ನಿಗದಿತ ಹಣ ಪಾವತಿಸಿ ಮುಂಗಡ ಟಿಕೆಟ್‌ ಪಡೆದಿದ್ದೇನೆ. ಖಾಸಗಿ ಬಸ್‌ಗಳಲ್ಲಿ ಇದೇನು ಹೊಸದಲ್ಲ. ಹಬ್ಬದ, ಸಾಲು ರಜೆಗಳ ಸಂದರ್ಭದಲ್ಲಿ ಪ್ರಯಾಣಿಕರ ಸುಲಿಗೆ ಮಾಡುತ್ತಾರೆ. ಯಾವ ಸರ್ಕಾರ ಬಂದರೂ ಈ ಖಾಸಗಿ ಬಸ್‌ಗಳಿಗೆ ಕಡಿವಾಣ ಮಾತ್ರ ಹಾಕುತ್ತಿಲ್ಲ ಎಂದು ಖಾಸಗಿ ಕಂಪನಿಯೊಂದರ ಉದ್ಯೋಗಿ ವಿನಯ್‌ ಬಿದರೂರು ಕಿಡಿಕಾರಿದರು.

ದರ ಏರಿಕೆ ಅನಿವಾರ್ಯ:

ಕೊರೋನಾದಿಂದ ಸುಮಾರು ಒಂದು ವರ್ಷದಿಂದ ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿರಲಿಲ್ಲ. ಇದೀಗ ಕೆಲವು ಆಪರೇಟರ್‌ಗಳು ಸೀಮಿತ ಸಂಖ್ಯೆಯಲ್ಲಿ ಬಸ್‌ಗಳನ್ನು ರಸ್ತೆಗೆ ಇಳಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಟಿಕೆಟ್‌ ದರ ಏರಿಕೆ ಅನಿವಾರ್ಯ. ಏಕೆಂದರೆ, ಬೆಂಗಳೂರಿನಿಂದ ಪ್ರಯಾಣಿಕರು ಸಿಗುತ್ತಾರೆ. ಆ ಕಡೆಯಿಂದ ಬೆಂಗಳೂರಿಗೆ ನಿರೀಕ್ಷೆ ಸಂಖ್ಯೆಯಲ್ಲಿ ಪ್ರಯಾಣಿಕರು ಸಿಗುವುದಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಟಿಕೆಟ್‌ ದರ ಏರಿಸಿ, ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸುತ್ತೇವೆ ಎಂದು ಬಸವನಗುಡಿ ಖಾಸಗಿ ಟ್ರಾವೆಲ್‌ನ ಮ್ಯಾನೇಜರ್‌ ಪುರುಷೋತ್ತಮ ಹೇಳುತ್ತಾರೆ.

ಖಾಸಗಿ ಬಸ್‌ಗಳ ಟಿಕೆಟ್‌ ದರ ಏರಿಕೆ: ಎಲ್ಲಿಂದ ಎಲ್ಲಿಗೆ ಸಾಮಾನ್ಯ ದಿನ ಏರಿಕೆ (ದರ ರು.)

ಬೆಂಗಳೂರು-ಬೆಳಗಾವಿ 850-1000 1400-2000
ಬೆಂಗಳೂರು-ಹುಬ್ಬಳ್ಳಿ 650-1000 1500-2200
ಬೆಂಗಳೂರು-ಶಿವಮೊಗ್ಗ 700-1000 1300-1500
ಬೆಂಗಳೂರು-ಮಂಗಳೂರು 650-850 1000-1800
ಬೆಂಗಳೂರು-ಕೊಪ್ಪಳ 660-900 1100-1400
ಬೆಂಗಳೂರು-ಬೀದರ್‌ 750-900 1200-1500
ಬೆಂಗಳೂರು- ಪುಣೆ 800-1200 1500-2500
ಬೆಂಗಳೂರು-ಮುಂಬೈ 1100-1300 1500-3000
ಬೆಂಗಳೂರು-ಚೆನ್ನೈ 650-800 1100-1250
ಬೆಂಗಳೂರು-ಹೈದರಾಬಾದ್‌ 850-1250 1400-1600

Follow Us:
Download App:
  • android
  • ios