ಕರ್ನಾಟಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೆಲ ಭಾಗಗಳಲ್ಲಿ ಈಗಾಗಲೇ ನೀರಿನ ಅಭಾವ ಉಂಟಾಗಿದೆ. ಈ ನಡುವೆಯೇ ಕೇಂದ್ರ ಜಲ ಆಯೋಗ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಜಲಾಶಯಗಳಲ್ಲಿ ಶೇ. 15ರಷ್ಟು ಮಾತ್ರವೇ ನೀರಿನ ಸಂಗ್ರಹವಿದೆ.

ನವದೆಹಲಿ (ಮೇ.11): ಕರ್ನಾಟಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೆಲ ಭಾಗಗಳಲ್ಲಿ ಈಗಾಗಲೇ ನೀರಿನ ಅಭಾವ ಉಂಟಾಗಿದೆ. ಈ ನಡುವೆಯೇ ಕೇಂದ್ರ ಜಲ ಆಯೋಗ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಜಲಾಶಯಗಳಲ್ಲಿ ಶೇ. 15ರಷ್ಟು ಮಾತ್ರವೇ ನೀರಿನ ಸಂಗ್ರಹವಿದೆ. ಕಳೆದ 10 ವರ್ಷಗಳ ಸರಾಸರಿಯಲ್ಲಿಯೇ ನೀರಿನ ಶೇಖರಣಾ ಸಾಮರ್ಥ್ಯವು ಈ ಬಾರಿ ಕನಿಷ್ಟ ಮಟ್ಟಕ್ಕೆ ಇಳಿದಿದೆ ಎಂದು ಆತಂಕ ವ್ಯಕ್ತಪಡಿಸಿದೆ.

Add Asianetnews Kannada as a Preferred SourcegooglePreferred

ಆಯೋಗ ಈ ಬಗ್ಗೆ ಅಂಕಿ ಅಂಶ ಪ್ರಕಟಿಸಿದ್ದು, ವಾರದಿಂದ ವಾರಕ್ಕೆ ಜಲಾಶಯಗಳಲ್ಲಿ ನೀರಿನ ಪ್ರಮಾಣದಲ್ಲಿ ಕುಸಿತ ಕಂಡು ಬರುತ್ತಿರುವುದು ಆತಂಕ ಸೃಷ್ಟಿಸಿದೆ. ಕಳೆದ ಗುರುವಾರ ಬಿಡುಗಡೆಯಾಗಿದ್ದ ವರದಿಯಲ್ಲಿ ದಕ್ಷಿಣ ಜಲಾಶಯದ ನೀರಿನ ಸಾಮರ್ಥ್ಯವು ಶೇ.16ರಷ್ಟಿತ್ತು. ಅದಕ್ಕೂ ಹಿಂದಿನ ವಾರ ಶೇ.17ರಷ್ಟಿತ್ತು. ಈ ವಾರ ಮತ್ತೇ ನೀರಿನ ಸಂಗ್ರಹ ಪ್ರಮಾಣ ಕುಸಿತಗೊಂಡಿದೆ ಎಂದು ತಿಳಿಸಿದೆ.

ದಕ್ಷಿಣ ಭಾರತದ ಈ 42 ಡ್ಯಾಮ್‌ಗಳಲ್ಲಿ ಒಟ್ಟು 53.334 ಬಿಲಿಯನ್‌ ಕ್ಯೂಬಿಕ್‌ ಮೀಟರ್‌ (ಬಿಸಿಎಂ) ನೀರು ಸಂಗ್ರಹಿಸಬಹುದಾಗಿದೆ. ಆದರೆ ಸದ್ಯ ಒಟ್ಟು 8.865 ಬಿಸಿಎಂ ಮಾತ್ರ ನೀರಿನ ಸಂಗ್ರಹವಿದೆ. ಇದು ಒಟ್ಟು ಸಾಮರ್ಥ್ಯದ ಶೇ.17ರಷ್ಟಾಗುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ಶೇ.29ರಷ್ಟು ನೀರಿತ್ತು. ಕಳೆದ ಹತ್ತು ವರ್ಷಗಳ ಸರಾಸರಿ ಪರಿಗಣಿಸಿದರೆ ಈ ಸಮಯದಲ್ಲಿ ಶೇ.23ರಷ್ಟು ನೀರಿರುತ್ತಿತ್ತು. ಹೀಗಾಗಿ ಈ ವರ್ಷದ ನೀರಿನ ಸಂಗ್ರಹ ಐತಿಹಾಸಿಕ ಕನಿಷ್ಠ ಎಂದು ಹೇಳಲಾಗಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತದಿಂದ ನೀರಾವರಿ, ಕುಡಿಯುವ ನೀರು ಪೂರೈಕೆ, ಜಲವಿದ್ಯುತ್‌ ಉತ್ಪಾದನೆಗೆ ಸಮಸ್ಯೆಯಾಗಲಿದೆ.

ದೇಶದಲ್ಲಿ ಹಿಂದುಗಳ ಸಂಖ್ಯೆ ಕುಸಿತ ಕಳವಳಕಾರಿ: ಪ್ರಲ್ಹಾದ್‌ ಜೋಶಿ

ದೇಶದ ಬೇರೆ ಭಾಗಗಳಲ್ಲಿ ಹೇಗಿದೆ?: ದಕ್ಷಿಣಕ್ಕೆ ಹೋಲಿಸಿದರೆ ಪೂರ್ವ ಭಾಗದ ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂನಂತಹ ರಾಜ್ಯಗಳಲ್ಲಿ ನೀರಿನ ಸಂಗ್ರಹ ಕಳೆದ 10 ವರ್ಷಗಳ ಸರಾಸರಿಗಿಂತ ಸುಧಾರಣೆಯಾಗಿದ್ದು, ಜಲಾಶಯಗಳಲ್ಲಿ ಶೇ.34ರಷ್ಟು ನೀರಿದೆ. ಆದರೆ ಗುಜರಾತ್‌ ಹಾಗೂ ಮಹಾರಾಷ್ಟ್ರ ರಾಜ್ಯಗಳು ಬರುವ ಪಶ್ಚಿಮ ವಲಯದ ಡ್ಯಾಮ್‌ಗಳಲ್ಲಿ ಶೇ.31.7ರಷ್ಟು ನೀರಿದೆ. ಇದು ಕಳೆದ 10 ವರ್ಷದ ಸರಾಸರಿಗಿಂತ ಕೊಂಚ ಕಡಿಮೆ. ಹಾಗೆಯೇ ಉತ್ತರ ಹಾಗೂ ಮಧ್ಯ ವಲಯದ ರಾಜ್ಯಗಳ ಡ್ಯಾಮ್‌ಗಳಲ್ಲೂ ನೀರಿನ ಸಂಗ್ರಹ ಕುಸಿಯುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.