ನಾಗರಪಂಚಮಿಗೂ ಕೊರೋನಾ ಭೀತಿ, ಕುಕ್ಕೆಯಲ್ಲಿ ಪ್ರವೇಶವಿಲ್ಲ!
ಕೊರೋನಾ ಹಾವಳಿ ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೂ ತಟ್ಟಿದೆ. ರಾಜ್ಯದ ಬಹುತೇಕ ಕಡೆ ಶ್ರಾವಣ ಮಾಸದ ಈ ಮೊದಲ ಹಬ್ಬದ ದಿನವಾದ ಶನಿವಾರ ಸಾರ್ವಜನಿಕವಾಗಿ ನಾಗಾರಾಧನೆ ನಿಷೇಧಿಸಲಾಗಿದೆ.
ಬೆಂಗಳೂರು(ಜು.25): ಕೊರೋನಾ ಹಾವಳಿ ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೂ ತಟ್ಟಿದೆ. ರಾಜ್ಯದ ಬಹುತೇಕ ಕಡೆ ಶ್ರಾವಣ ಮಾಸದ ಈ ಮೊದಲ ಹಬ್ಬದ ದಿನವಾದ ಶನಿವಾರ ಸಾರ್ವಜನಿಕವಾಗಿ ನಾಗಾರಾಧನೆ ನಿಷೇಧಿಸಲಾಗಿದೆ.
ನಾಗಾರಾಧನೆಯ ಪವಿತ್ರ ಕ್ಷೇತ್ರವಾದ ಕುಕ್ಕೆಸುಬ್ರಹ್ಮಣ್ಯದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಕುಕ್ಕೆ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ಕೇವಲ ಅರ್ಚಕರು, ಸಿಬ್ಬಂದಿ ಉಪಸ್ಥಿತಿಯಲ್ಲಷ್ಟೇ ನಾಗದೇವರಿಗೆ ವಿಶೇಷ ಪೂಜೆ ನೆರವೇರಲಿದೆ.
ರಮೇಶ ಜಾರಕಿಹೊಳಿ ನಿವಾಸದಲ್ಲಿ ಮಹತ್ವದ ಸಭೆ: ವಿಶ್ವನಾಥ್, ಯೋಗೇಶ್ವರ್ ಸಚಿವ ಸ್ಥಾನದ ಬಗ್ಗೆ ಚರ್ಚೆ
ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ನಾಗರ ಪಂಚಮಿಯ ಭಕ್ತಿ- ಸಂಭ್ರಮಕ್ಕೆ ಪ್ರತಿವರ್ಷ ಸಾಕ್ಷಿಯಾಗುತ್ತಿದ್ದ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಅನಂತ ಪದ್ಮನಾಭ ದೇವಾಲಯ ಸೇರಿ ಪ್ರಮುಖ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಸಿಬ್ಬಂದಿ ಉಪಸ್ಥಿತಿಯಲ್ಲಿ ನಾಗ ದೇವರಿಗೆ ಯಥಾಪ್ರಕಾರ ಪೂಜೆ-ಪುನಸ್ಕಾರ ನೆರವೇರಲಿದೆ.
ಬೆಂಗಳೂರು ಸಮೀಪದ ಪ್ರಮುಖ ನಾಗಾರಾಧನೆಯ ಕೇಂದ್ರ ಘಾಟಿಸುಬ್ರಹ್ಮಣ್ಯ ದೇಗುಲದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕಷ್ಟೇ ಅವಕಾಶವಿದ್ದು, ವಿಶೇಷ ಪೂಜೆಗೆ ನಿರ್ಬಂಧವಿಧಿಸಲಾಗಿದೆ. ಇನ್ನು ಉತ್ತರ ಕನ್ನಡದ ಪವಿತ್ರ ತಾಣ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲೂ ದೇವರ ದರ್ಶನ ನಿರ್ಬಂಧಿಸಲಾಗಿದೆ.
ಮಂಗಳೂರು-ಮುಂಬೈ ವಿಮಾನಯಾನ ಆರಂಭ, ಕೆಲವು ಪ್ರಯಾಣಿಕರಿಗೆ ಕ್ವಾರೆಂಟೈನ್ ಇಲ್ಲ
ಉ.ಕದಲ್ಲಿ ಇದೇ ಹಬ್ಬ: ಧಾರವಾಡ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ ಜಿಲ್ಲೆಯ ಹಲವೆಡೆ ಶುಕ್ರವಾರವೇ ಶ್ರದ್ಧಾ-ಭಕ್ತಿಯಿಂದ ನಾಗರ ಪಂಚಮಿ ಆಚರಿಸಲಾಗಿದೆ. ಕೊರೋನಾ ಭಯದ ಮಧ್ಯೆಯೂ ಕೆಲವರು ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಿ ಪೂಜಿಸಿದ್ದಾರೆ. ಆದರೆ ಬಹುತೇಕರು ತಮ್ಮ ಮನೆಯಲ್ಲೇ ಹಬ್ಬದ ಆಚರಣೆ ಮಾಡಿದ್ದಾರೆ. ಬಹುತೇಕ ಕಡೆ ಶುಕ್ರವಾರ ರೊಟ್ಟಿಹಬ್ಬ (ನಾಗರಚೌತಿ) ಆಚರಿಸಿದ್ದು, ಶನಿವಾರ ನಾಗರ ಪಂಚಮಿ ಪೂಜಾ ಕೈಂಕರ್ಯ ಕೈಗೊಳ್ಳಲಿದ್ದಾರೆ.