ಸಚಿವ ಸತೀಶ್ ಜಾರಕಿಹೊಳಿ ಅವರು ಇತ್ತೀಚಿನ ಸಚಿವರ ಸಭೆಯನ್ನು 'ಜನರಲ್‌ ಚೆಕಪ್‌' ಎಂದು ಬಣ್ಣಿಸಿದ್ದು, ಇದೊಂದು ಸರ್ಜರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಂಪುಟ ಪುನರ್‌ ರಚನೆ, ಅಹಿಂದ ಒಗ್ಗೂಡಿಸುವಿಕೆ ಹಾಗೂ ಒಳ ಮೀಸಲಾತಿ ಬಗ್ಗೆ ಏನು ಹೇಳಿದರು?

ಸಚಿವರ ಸಭೆ ಸರ್ಜರಿ ಅಲ್ಲ, ಜನರಲ್‌ ಚೆಕಪ್‌ ಅಷ್ಟೇ

 ಬೆಂಗಳೂರು (ಏ.24): ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಚಿವ ಸಂಪುಟ ಪುನರ್‌ ರಚನೆ ಸೇರಿದಂತೆ ಹಲವು ವಿಚಾರದ ಬಗ್ಗೆ ತೀರ್ಮಾನ ಆಗಬೇಕಿದೆ. ಅಹಿಂದ ಒಟ್ಟುಗೂಡಿಸುವ ಕೆಲಸ ಆಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಬುಧವಾರ ಸಂಜೆ ನಡೆದ ಸಚಿವರ ಸಭೆಯಲ್ಲಿ ಅಷ್ಟೇನೂ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ. ಅದು ಸರ್ಜರಿ ಅಲ್ಲ ಜನರಲ್‌ ಚೆಕಪ್‌ ಅಷ್ಟೇ ಎಂದರು.

ಸಚಿವ ಸಂಪುಟ ಪುನರ್‌ ರಚನೆ ಆಗಬೇಕು. ಅಧ್ಯಕ್ಷ ಸ್ಥಾನ ಬದಲಾವಣೆ ಸೇರಿದಂತೆ ಹಲವು ವಿಚಾರವಿದ್ದು, ಅವೆಲ್ಲಾ ತೀರ್ಮಾನ ಆಗಬೇಕಿದೆ.

ಒಳ ಮೀಸಲು ಗೊಂದಲ ಬಗೆಹರಿಯಬೇಕು:

ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಜಾರಿ ಬಗ್ಗೆ ಗೊಂದಲ ಉಂಟಾಗಿದೆ. ಹೀಗಾಗಿ ಶುಕ್ರವಾರ ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಈ ಬಗ್ಗೆಯೂ ಚರ್ಚೆಯಾಗಿದೆ. ಜತೆಗೆ ಅಲ್ಪಸಂಖ್ಯಾತರು ಒಂದೇ ವೇದಿಕೆ ಅಡಿ ಬರಬೇಕು. ಅವರು ಇಬ್ಭಾಗ ಆಗುವುದು ಪಕ್ಷಕ್ಕೆ ಒಳ್ಳೆಯದಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಹೇಳಿದ್ದೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.