ರಾಜ್ಯ ಸರ್ಕಾರವು ತಮಿಳುನಾಡು ಮಾದರಿಯಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸೆಸ್‌ ಇಳಿಕೆ ಮಾಡಲಿದೆ ಎಂಬ ನಿರೀಕ್ಷೆ ಹುಸಿ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ನಂತರ ರಾಜ್ಯದಲ್ಲಿಯೂ ಸೆಸ್‌ ಇಳಿಕೆ ಕೂಗು ಕೇಳಿ ಬರುತ್ತಿದೆ

ಬೆಂಗಳೂರು (ಸೆ.05): ರಾಜ್ಯ ಸರ್ಕಾರವು ತಮಿಳುನಾಡು ಮಾದರಿಯಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸೆಸ್‌ ಇಳಿಕೆ ಮಾಡಲಿದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ತಮಿಳುನಾಡು ಮಾದರಿಯಲ್ಲಿಯೇ ತೈಲದ ಮೇಲಿನ ಸೆಸ್‌ ಕಡಿಮೆ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿಕೆ ನೀಡಿದ್ದರು. ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ನಂತರ ರಾಜ್ಯದಲ್ಲಿಯೂ ಸೆಸ್‌ ಇಳಿಕೆ ಕೂಗು ಕೇಳಿ ಬರುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದರು.

ಅತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ: ಇತ್ತ ರೈತನ ಟೊಮೇಟೊ ದರ ಕುಸಿತ

ಇದರಿಂದ ಶನಿವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸೆಸ್‌ ಇಳಿಕೆ ಬಗ್ಗೆ ನಿರ್ಧಾರವಾಗಲಿದೆ. ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಪೆಟ್ರೋಲ್‌, ಡೀಸೆಲ್‌ ಮೇಲಿನ ಸೆಸ್‌ ಇಳಿಕೆಯಾಗಿ ತನ್ಮೂಲಕ ತೈಲ ದರ ಇಳಿಕೆಯಾಗಲಿದೆ ಎಂದು ಜನರು ನಿರೀಕ್ಷಿಸಿದ್ದರು.

ಸಭೆ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸೆಸ್‌ ಇಳಿಕೆಯಂತಹ ವಿಚಾರವೇ ಪ್ರಸ್ತಾಪವಾಗಿಲ್ಲ. ಈ ಕುರಿತು ಚರ್ಚೆಯೂ ಆಗಿಲ್ಲ, ನಿರ್ಧಾರವೂ ಆಗಿಲ್ಲ ಎಂದು ಹೇಳುವ ಮೂಲಕ ನಿರಾಸೆ ಮೂಡಿಸಿದರು.

ಮೂಲಗಳ ಪ್ರಕಾರ, ಕೆಲ ಸಚಿವರು ಸೆಸ್‌ ಇಳಿಕೆ ವಿಷಯ ಪ್ರಸ್ತಾಪಿಸಲು ಮುಂದಾದರೂ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ನಾಯಕರು ಇದು ಸೂಕ್ತ ಸಮಯವಲ್ಲ ಎಂದು ಹೇಳಿ ತಡೆದರು ಎಂದು ತಿಳಿದು ಬಂದಿದೆ.