ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಎಂ.ವಿ. ಪ್ರಶಾಂತ್ಕುಮಾರ್ ವಿರುದ್ಧದ ಲಂಚ ಹಗರಣದ ಐವರು ಆರೋಪಿಗಳ ಮೇಲೆ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್
ಬೆಂಗಳೂರು (ಜೂ.30) : ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಎಂ.ವಿ. ಪ್ರಶಾಂತ್ಕುಮಾರ್ ವಿರುದ್ಧದ ಲಂಚ ಹಗರಣದ ಐವರು ಆರೋಪಿಗಳ ಮೇಲೆ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಲಂಚ ಪಡೆಯುವವರನ್ನು ವಿಚಾರಣೆಗೊಳಪಡಿಸುವಂತೆ ಲಂಚ ನೀಡುವವರನ್ನೂ ವಿಚಾರಣೆಗೆ ಒಳಪಡುವಂತೆ ಮಾಡುವ ಮೂಲಕ ಭ್ರಷ್ಟಾಚಾರದ ಹಾವಳಿಗೆ ಕಡಿವಾಣ ಹಾಕಬೇಕಿದೆ ಎಂದು ನುಡಿದಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಯಿಂದ (KSDL) ಕೆಮಿಕಲ್ ಆಯಿಲ್ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ಪಡೆಯಲು ಕೆಎಸ್ಡಿಎಲ್ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ(Madalu veerupakshappa) ಹಾಗೂ ಅವರ ಪುತ್ರ ಪ್ರಶಾಂತ್ಕುಮಾರ್ಗೆ ಲಂಚ ನೀಡಲು ಮುಂದಾದ ಆರೋಪದ ಮೇಲೆ ತಮ್ಮ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದು ಕೋರಿ ‘ಕರ್ನಾಟಕ ಆರೋಮಾ ಕಂಪನಿ’ಯ ಮಾಲೀಕರಾದ ಕೈಲಾಶ್ ಎಸ್. ರಾಜ್, ವಿನಯ್ ಎಸ್. ರಾಜ್, ಚೇತನ್ ಮರ್ಲೇಚಾ, ಸಿಬ್ಬಂದಿ ಅಲ್ಬರ್ಚ್ ನಿಕೋಲಾಸ್ ಮತ್ತು ಗಂಗಾಧರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
KSDLcorruption : ಸಾಬೂನು ನಿಗಮದಲ್ಲಿ ಮತ್ತೆ ಭ್ರಷ್ಟಾಚಾರದ ದುರ್ಗಂಧ!
ಈ ಐವರ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಲಂಚ ಪಡೆಯುವವರು ಮತ್ತು ಸ್ವೀಕರಿಸುವವರನ್ನು ಪ್ರಾಸಿಕ್ಯೂಷನ್ನ ಒಂದೇ ನೆಲೆಯಲ್ಲಿ ನಿಲ್ಲುವಂತೆ ಮಾಡಲು 2018ರ ಜು.26ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಅರ್ಜಿದಾರರ ವಿರುದ್ಧದ ಪ್ರಕರಣ ಕೈಬಿಟ್ಟರೆ ಕಾಯ್ದೆಗೆ ತಿದ್ದುಪಡಿ ಮಾಡಿದ ಉದ್ದೇಶವೇ ನಿರರ್ಥಕವಾಗಲಿದೆ ಎಂದು ಆದೇಶಿಸಿದೆ.
ಅಲ್ಲದೆ, ದೇಶದ ಸಾರ್ವಜನಿಕ ಬದುಕಿನ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ವ್ಯಾಪಿಸಿದೆ. ಸಾಂವಿಧಾನಿಕ ಆಡಳಿತಕ್ಕೆ ಭ್ರಷ್ಟಾಚಾರ ಮಾರಕವಾಗಿ ಪರಿಣಮಿಸಿದೆ. ಹಾಗಾಗಿ, ಲಂಚ ಸ್ವೀಕರಿಸುವವರಂತೆಯೇ ಲಂಚ ನೀಡುವವರನ್ನೂ ಕಾನೂನು ಪ್ರಕ್ರಿಯೆಗೆ ಗುರಿಪಡಿಸುವ ಮೂಲಕ ಭ್ರಷ್ಟಾಚಾರದ ಪಿಡುಗನ್ನು ಮೊಗ್ಗಿನಲ್ಲೇ ಚಿವುಟಿ ಹಾಕಲು ಇದು ಸಕಾಲವಾಗಿದೆ ಎಂದು ಹೈಕೋರ್ಚ್ ಆದೇಶದಲ್ಲಿ ತೀಕ್ಷ$್ಣವಾಗಿ ನುಡಿದಿದೆ.
