ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಸರ್ಕಾರಿ ನೌಕರರು ಗೈರಾದ ಹಿನ್ನೆಲೆಯಲ್ಲಿ, ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಖಾಸಗಿ ವ್ಯಕ್ತಿಗಳನ್ನು ಗಣತಿದಾರರಾಗಿ ನೇಮಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ಏ.22 ರಂದು ನೇರ ಸಂದರ್ಶನ ಆಯೋಜಿಸಲಾಗಿದ್ದು, ಆಯ್ಕೆಯಾದವರಿಗೆ ಗೌರವಧನ ಹಾಗೂ ತರಬೇತಿ ನೀಡಲಾಗುವುದು.

ಬೆಂಗಳೂರು: ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಸರ್ಕಾರಿ ನೌಕರರಲ್ಲದವರನ್ನು ನೇಮಿಸಿಕೊಳ್ಳಲು ಕೇಂದ್ರ ನಗರ ಪಾಲಿಕೆ ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದ್ವಿತೀಯ ಪಿ.ಯು.ಸಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವರನ್ನು ಗಣತಿದಾರರಾಗಿ ಆಯ್ಕೆ ಮಾಡಿಕೊಳ್ಳಲು ಏ.22ರಂದು ಬೆಳಗ್ಗೆ 9 ಗಂಟೆಗೆ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ. ಅಂದಾಜು 1,000 ಜನರನ್ನು ಗಣತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಆದ್ಯತೆ

ಆಸಕ್ತರು ಕನಿಷ್ಟ ಆ್ಯಂಡ್ರಾಯ್ಡ್-12, 4 ಜಿಬಿ ರ್‍ಯಾಮ್ ಇರುವ ಮೊಬೈಲ್ ಫೋನ್ ಹೊಂದಿರಬೇಕು. ಆಯ್ಕೆಯಾದವರಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಸಿ.ವಿ.ರಾಮನ್ ನಗರ, ಶಾಂತಿನಗರ, ಶಿವಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಹಾಗೂ ಗಾಂಧಿನಗರ ಕ್ಷೇತ್ರಗಳ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಗೌರವಧನ: ಮೊದಲ ಹಂತದ ಗಣತಿಗೆ 9,000 ರು. (ಕನಿಷ್ಠ 150-200 ಮನೆಗಳು) ಹಾಗೂ ಮುಂದಿನ ವರ್ಷದ ಎರಡನೇ ಹಂತದ ಗಣತಿ ಕಾರ್ಯಕ್ಕೆ 16,000 ರು. ಗೌರವ ಧನ ನೀಡಲಾಗುವುದು ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಗಣತಿಗೆ 2.5 ಲಕ್ಷ ಸರ್ಕಾರಿ ನೌಕರರು: ಸೇವೆ ವ್ಯತ್ಯಯ, ಸಿಬ್ಬಂದಿ ಕೊರತೆಯಿಂದ ಸರ್ಕಾರಿ ಸೇವೆಗಳಿಗೆ ಅಡ್ಡಿ, ಮನೆಗಣತಿ ಪ್ರಕ್ರಿಯೆ ಯಾವಾಗ?

ನೌಕರರ ಗೈರು ಕಾರಣ ಈ ಕ್ರಮ

ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಾವಿರಾರು ನೌಕರರು ಗಣತಿ ಕಾರ್ಯಕ್ಕೆ ಗೈರಾಗಿದ್ದಾರೆ. ನೌಕರರಿಗೆ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ನೀಡಿದ್ದರೂ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಖಾಸಗಿ ಗಣತಿದಾರರ ನೇಮಿಸಿಕೊಳ್ಳಲು ಪಾಲಿಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆ : ದಕ್ಷಿಣ ಭಾರತಕ್ಕೆ ಅನ್ಯಾಯವೇ? ಸಿದ್ದರಾಮಯ್ಯ ವಾದಕ್ಕೆ ಬೊಮ್ಮಾಯಿ ಖಡಕ್ ಉತ್ತರ