ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ನಾಗಮೋಹನ್‌ ದಾಸ್‌ ಅವರು ಬರೆದಿರುವ ‘ರೈತರ ಭದ್ರತೆ, ದೇಶದ ಭದ್ರತೆ’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬೆಂಗಳೂರು (ಸೆ.14):  ಕೃಷಿಯನ್ನು ಹೊರತುಪಡಿಸಿ ಇತರೆ ಎಲ್ಲ ಉತ್ಪಾದನಾ ವಲಯಗಳಲ್ಲೂ ಬೆಲೆ ನಿಗದಿ ಮಾಡುವ ಹಕ್ಕು ಉತ್ಪಾದಕರಿಗೇ ಇದೆ. ಆದರೆ ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡುವವರು ಕೊಳ್ಳುವವರಾಗಿದ್ದಾರೆ. ಇದರಿಂದ ರೈತಾಪಿ ವರ್ಗ ನಿರಂತರ ಆರ್ಥಿಕ ಶೋಷಣೆ ಎದುರಿಸುವಂತಾಗಿದ್ದು, ಭವಿಷ್ಯದಲ್ಲಿ ಈ ವ್ಯವಸ್ಥೆ ಬದಲಾಗಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ನಾಗಮೋಹನ್‌ ದಾಸ್‌ ಅವರು ಬರೆದಿರುವ ‘ರೈತರ ಭದ್ರತೆ, ದೇಶದ ಭದ್ರತೆ’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಾಡಿನ ರೈತರು ಬರಗಾಲ, ಪ್ರವಾಹ, ಕೊರೋನಾ ಹಾವಳಿಗಳಿಂದಾಗಿ ಈಗಾಗಲೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರ ಜತೆಗೆ ನಿಲ್ಲಬೇಕಿದ್ದ ಸರ್ಕಾರಗಳು ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರ ಬೆನ್ನುಮೂಳೆಯನ್ನೇ ಮುರಿಯಲು ಹೊರಟಿದೆ ಎಂದು ಕಿಡಿಕಾರಿದರು.

ಕಾಳುಮೆಣಸಿನಿಂದ ರೈತರಿಗೆ ಬಂಪರ್ ಲಾಭ ...

ರಾಜ್ಯ ಸರ್ಕಾರದ ಜನವಿರೋಧಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಿ, ಅವುಗಳ ಸಾಧಕ-ಬಾಧಕಗಳನ್ನು ರಾಜ್ಯದ ಜನರ ಮುಂದೆ ಇಡಬೇಕು ಎಂಬುದು ನಮ್ಮ ಆಶಯ. ಆದರೆ ಈ ಬಾರಿಯ ಅಧಿವೇಶನದಲ್ಲಿ ಪ್ರಮುಖ ವಿಚಾರಗಳ ಚರ್ಚೆಗೆ ಅಗತ್ಯ ಸಮಯ ಸಿಗುವುದೇ ಅನುಮಾನವೆಂಬಂತಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ದಶಕಗಳ ಹಿಂದಿದ್ದ ಅವಿಭಜಿತ ಕುಟುಂಬಗಳೆಲ್ಲಾ ಕಾಲಕ್ರಮೇಣ ವಿಭಜನೆಯಾಗುತ್ತಾ ಇಂದು ಸಮಾಜದಲ್ಲಿ ಕೂಡು ಕುಟುಂಬಗಳು ಕಣ್ಮರೆಯಾಗುತ್ತಿವೆ. ಇದರಿಂದ ಬೃಹತ್‌ ಹಿಡುವಳಿಗಳು ಕುಟುಂಬಗಳ ನಡುವೆ ಹರಿದು ಹಂಚಿಹೋಗಿ ಕೃಷಿ ಕ್ಷೇತ್ರ ಬಡವಾಗುವ ಜತೆಗೆ ರೈತರೂ ಆರ್ಥಿಕ ಸಂಕಷ್ಟಎದುರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ನಗರೀಕರಣ ಹೆಚ್ಚಾಗಿ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಮೇಲೆ ಕೊಡ್ಡ ಪರಿಣಾಮ ಬೀರಿದೆ. ನಿರೀಕ್ಷಿತ ಬದಲಾವಣೆ ಆಗಿಲ್ಲ ಎಂದರು.

ಟೊಮೆಟೋಗೆ ಈಗ ಭಾರೀ ಬಂಪರ್ : ರೈತನಿಗೆ ಫುಲ್ ಖುಷ್ ..

ನಿವೃತ್ತ ನ್ಯಾ. ನಾಗಮೋಹನ್‌ದಾಸ್‌ ಮಾತನಾಡಿ, ಕೃಷಿಗೆ ಸಂಬಂಧಪಟ್ಟಂತೆ ಬಹಳಷ್ಟುಕಾಯ್ದೆಗಳ ತಿದ್ದುಪಡಿ ಕುರಿತು ‘ರೈತರ ಭದ್ರತೆ, ದೇಶದ ಭದ್ರತೆ’ ಪುಸ್ತಕದಲ್ಲಿ ಮಾಹಿತಿ ಸಂಗ್ರಹಿಸಿ ವಿವರಣೆ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರಿಸರವಾದಿ ಡಾ.ಯಲ್ಲಪ್ಪರೆಡ್ಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ, ರೈತ ಮುಖಂಡ ಕುರುಬೂರು ಶಾಂತಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.