ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಪರದಾಡುತ್ತಿರುವ ಕಾಂಗ್ರೆಸ್‌ ಸರ್ಕಾರವು ನಮ್ಮ ರಾಜ್ಯದ ರೈತರಿಂದಲೇ ಅಕ್ಕಿಯನ್ನು ಖರೀದಿ ಮಾಡಿ ವಿತರಣೆ ಮಾಡಬೇಕು.

ಬೆಂಗಳೂರು (ಜೂ.17): ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಪರದಾಡುತ್ತಿರುವ ಕಾಂಗ್ರೆಸ್‌ ಸರ್ಕಾರವು ನಮ್ಮ ರಾಜ್ಯದ ರೈತರಿಂದಲೇ ಅಕ್ಕಿಯನ್ನು ಖರೀದಿ ಮಾಡಿ ವಿತರಣೆ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಕ್ಕಿ ಸಿಗುತ್ತಿಲ್ಲವೆಂದು ರಾಜ್ಯ, ರಾಜ್ಯಗಳಿಗೆ ತೆರಳಿ ಪರದಾಡುವ ಬದಲು ನಮ್ಮ ರಾಜ್ಯದ ರೈತರಿಂದಲೇ ಅಕ್ಕಿ ಖರೀದಿ ಮಾಡಲಿ. ನಮ್ಮ ರೈತರ ಬಳಿಯಿಂದ ನೇರವಾಗಿ ಅಕ್ಕಿ ಖರೀದಿಸಲಿ ಎಂದು ನಾನು ಸಿಎಂ ಸಿದ್ದರಾಮಯ್ಯ ಬಳಿ ನಾನು ಮನವಿ ಮಾಡುತ್ತೇನೆ. ರಾಜ್ಯದ ಜನರಿಗೆ ಒಟ್ಟು 15 ಕೆಜಿ ಅಕ್ಕಿಯನ್ನ ಕಾಂಗ್ರೆಸ್ ಸರ್ಕಾರ ಜನರಿಗೆ ಕೊಡಬೇಕು. ಈಗಾಗಲೇ ಕೇಂದ್ರ ಸರ್ಕಾರ‌ 5 ಕೆಜಿ ಅಕ್ಕಿ ಕೊಡ್ತಿದೆ. ಈಗ ಕಾಂಗ್ರೆಸ್ ಹೇಳಿದಂತೆ 10 ಕೆಜಿ ಅಕ್ಕಿಯನ್ನ ಕೊಡಲಿ. ಅವರು ಅಕ್ಕಿ‌ ಕೊಡುವುದಕ್ಕಾಗಿದೇ ಕೇಂದ್ರದ ಮೇಲೆ ಗೂಬೆ ಕೂರಿಸ್ತಿದೆ. ಕುಣಿಯಲಾಗದವನು ನೆಲ ಡೊಂಕು ಅಂದಂಗಾಗಿದೆ ರಾಜ್ಯದ ಸ್ಥಿತಿ ಆಗಿದೆ. ರಾಜ್ಯದ ಜನರನ್ನು ಈ ಸರ್ಕಾರ ದಾರಿ ತಪ್ಪಿಸ್ತಿದೆ. ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ಹೇಳಿದರು. 

ಗೃಹಲಕ್ಷ್ಮಿ ಯೋಜನೆಯ ಗುಡ್‌ ನ್ಯೂಸ್‌: ಗ್ರಾ.ಪಂ. ಮಟ್ಟದ ಬಾಪೂಜಿ ಸೇವಾ ಕೇಂದ್ರದಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ

ಎಫ್‌ಸಿಐಗೆ ಪತ್ರ ಬರೆಯುವ ಮುನ್ನವೇ ತಿದ್ದುಪಡಿ: ಕೇಂದ್ರ ಸರ್ಕಾರ ಪಾಲಿಸಿ ತಿದ್ದುಪಡಿ ಮಾಡಿದೆ ಎಂದು ಕಾಂಗ್ರೆಸ್‌ ಸುಳ್ಳು ಆರೋಪ ಮಾಡ್ತಿದೆ. ರಾಜ್ಯ ಸರ್ಕಾರ ಫುಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಎಫ್‌ಸಿಐ)ಗೆ ಹೆಚ್ಚವರಿ 5 ಕೆಜಿ ಅಕ್ಕಿಗೆ ಮನವಿ ಮಾಡೋದಕ್ಕಿಂತ ಮುನ್ನವೇ ಕೇಂದ್ರ ಸರ್ಕಾರ ಮೇ 2 ರಂದು ಅಕ್ಕಿ, ಗೋಧಿಗಳನ್ನು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಇತರೆ ಯಾವುದೇ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಂತೆ ತಿದ್ದುಪಡಿಯನ್ನು ಮಾಡಲಾಗಿದೆ. ಅಕ್ಕಿ ಮತ್ತು ಗೋಧಿ ದರ ಹೆಚ್ಚಳವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಈ ಕ್ರಮವನ್ನು ಕೈಗೊಂಡಿದೆ. ಆದರೆ, ರಾಜ್ಯ ಕಾಂಗ್ರೆಸ್ ಸುಳ್ಳು ಆರೋಪಗಳನ್ನ ಮಾಡುತ್ತಿದೆ ಎಂದು ಹೇಳಿದರು. 

ಅಕ್ಕಿ, ಗೋಧಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಕ್ರಮ: ದೇಶದಲ್ಲಿ ಪ್ರಮುಖ ಆಹಾರ ಧಾನ್ಯಗಳಾದ ಅಕ್ಕಿ, ಗೋಧಿ ಬೆಲೆ ಏರಿಕೆಯಲ್ಲಿ ಏರುಪೇರು ತಡೆಯಲು, ಎಲ್ಲ ರಾಜ್ಯಗಳಿಗೂ ಅಕ್ಕಿ, ಗೋಧಿ ಕೊರತೆ ಆಗದಿರಲು ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಮೇ ತಿಂಗಳಲ್ಲೇ ಕೇಂದ್ರ ಸರ್ಕಾರ ನಿಯಮಗಳಲ್ಲಿ ಈ ಬದಲಾವಣೆ ತಂದಿದೆ. ರಾಜ್ಯವು ಅಕ್ಕಿ ಬೇಕು ಅಂತ FCIಗೆ ಪತ್ರ ಬರೆಯುವ ಮುನ್ನವೇ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯ ನಿಯಮಗಳಲ್ಲಿ ಬದಲಾವಣೆ ತರಲಾಗಿತ್ತು. ರಾಜ್ಯವು ಪತ್ರ ಬರೆಯುವ ಮೊದಲೇ ಎಲ್ಲ ರಾಜ್ಯಗಳ FCIಗಳಿಗೆ ನಿಯಮಗಳಲ್ಲಿ ಬದಲಾವಣೆಗೆ ಸೂಚನೆ ನೀಡಲಾಗಿತ್ತು. ಜೂನ್ 8 ರಂದು ಕ್ಯಾಬಿನೆಟ್ ಸಮಿತಿಯಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಗೋಧಿ ಮಾರಾಟ ಮಾಡದಂತೆ ಸೂಚಿಸಲಾಗಿತ್ತು ಎಂದು ತಿಳಿಸಿದರು.

ಜನತೆಗೆ ಯಾಮಾರಿಸದೇ 15 ಕೆ.ಜಿ. ಅಕ್ಕಿಯನ್ನು ಕೊಡಿ: ನಾವು 25 ಜನ ಸಂಸದರು ನಮ್ಮ ಕೆಲಸ ನಾವು ಮಾಡುತ್ತಿದ್ದು, ರಾಜ್ಯ ಜನತೆಗೆ ತಲಾ 5 ಕೆಜಿ ಅಕ್ಕಿ ತಗೆದುಕೊಂಡು ಬರ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಉಚಿತವಾಗಿ ಕೇಂದ್ರ ಸರ್ಕಾರ ಕೊಡ್ತಿದೆ. ಹಿಂದಿನ ತಿಂಗಳು ಬಂದಿದೆ, ಮುಂದಿನ ತಿಂಗಳು ಬರಲಿದೆ ಈ ತಿಂಗಳ ಸಹ ಸಿಗಲಿದೆ. ಈಗ ನೀವು 130 ಜನ ಇದ್ದೀರಲ್ವಾ ಜನತೆಗೆ ತಲಾ 10 ಕೆಜೆ ಅಕ್ಕಿ ತಂದು ಕೊಡಿ. ಕೇಂದ್ರ ಸರ್ಕಾರದ 5 ಕೆಜಿ ಸೇರಿ ಒಟ್ಟು 15 ಕೆಜಿ ಅಕ್ಕಿಯನ್ನು ಜನರಿಗೆ ಕೊಡಬೇಕು ಎಂದು ಆಗ್ರಹಿಸಿದರು.

ಪ್ರಧಾನಿಗೆ ಚೋಳರ ಸೆಂಗೋಲ್‌, ಸಿಎಂ ಸಿದ್ದರಾಮಯ್ಯನಿಗೆ ಪೆರಿಯಾರ್‌ ಸೆಂಗೋಲ್‌

ನಮ್ಮ ಸರದಿ ಮುಗಿದಿದೆ, ಈಗ ನೀವು ಅಕ್ಕಿ ತನ್ನಿ ನೋಡೋಣ: ರಾಜ್ಯದ ಸಂಸದರು ಅಕ್ಕಿ ಕೊಡುವಂತೆ ಕೇಂದ್ರಕ್ಕೆ ಒತ್ತಡ ಹಾಕಲಿ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳುತ್ತಾರೆ. ಆದರೆ, ಬಿಜೆಪಿಯ ಸಂಸದರ ಪ್ರಯತ್ನ ದಿಂದಾಗಿಯೇ ಕೋವಿಡ್ ನಂತರ ಪ್ರತೀ ತಿಂಗಳು ಅಕ್ಕಿ ಕೊಡ್ತಿದೆ. ನಮ್ಮೆಲ್ಲರ ಪ್ರಯತ್ನದಿಂದ, ಮೋದಿ ಸರ್ಕಾರದ ಪ್ರಯತ್ನದಿಂದ ರಾಜ್ಯದ ಜನಕ್ಕೆ ಅಕ್ಕಿ ಸಿಕ್ತಿದೆ. ಈಗ ಇವರು 135 ಜನ ಶಾಸಕರಿದ್ದಾರೆ. ಇವರು ಹತ್ತು ಕೆಜಿ ಅಕ್ಕಿ ತರಲಿ ನೋಡೋಣ. ರಾಜಕೀಯ ಮಾಡದೇ 10 ಕೆಜಿ ಅಕ್ಕಿ ತನ್ನಿ ನೋಡೋಣ. ಅಕ್ಕಿ ತರುವ ನಮ್ಮ ಸರದಿ ಆಯ್ತು, ಈಗ ನಿಮ್ಮ ಸರದಿ. ನೀವು ಅಕ್ಕಿ‌ ಕೊಡ್ತೀವಿ ಅಂತ ವಾಗ್ದಾನ ಮಾಡಿ ಕೇಂದ್ರದ ಮೇಲೆ ಆರೋಪ‌ ಮಾಡಿದ್ರೆ ಹೇಗೆ..? ಎಂದು ಆಕ್ರೋಶ ವ್ಯಕ್ತಪಡಿಸಿದರು.