ವಿಜಯಪುರದ ಸಿಕ್ಯಾಬ್ ಸಂಸ್ಥೆಯ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ ನಡೆಯಿತು. ಮುಖ್ಯ ಅತಿಥಿ ಸಲೀಂ ಅಹಮ್ಮದ್ ಅವರು ಕಿರಿಯ ವೈದ್ಯರು ದಯೆ, ಶಿಸ್ತು ಮತ್ತು ಆತ್ಮಸಾಕ್ಷಿಯಿಂದ ಕೆಲಸ ಮಾಡುವಂತೆ ಕರೆ ನೀಡಿದರು. 

ವಿಜಯಪುರ (ನ.20): ಪದವಿ ಪಡೆದುಕೊಳ್ಳುತ್ತಿರುವ ಕಿರಿಯ ವೈದ್ಯರುಗಳು ದಯೆ, ಶಿಸ್ತು, ನ್ಯಾಯಪರತೆ ಮತ್ತು ಆತ್ಮಸಾಕ್ಷಿಗಳಿಂದ ಕೆಲಸ ಮಾಡಬೇಕಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್‌ ಹೇಳಿದರು.

ನಗರದ ಸಿಕ್ಯಾಬ್ ಸಂಸ್ಥೆಯ ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ವೈಯಕ್ತಿಕವಾಗಿ ಪ್ರಾಮಾಣಿಕತೆ, ಜಾಣ್ಮೆಯಿಂದ ಕೆಲಸ ಮಾಡುವ ವಿಭಿನ್ನ ಸಾಮರ್ಥ್ಯ ತುಂಬುತ್ತ ಸಿಕ್ಯಾಬ್ ಸಂಸ್ಥೆ ಮಾರ್ಗದರ್ಶನ ಮಾಡುತ್ತಿರುವುದು ವಿಶಿಷ್ಟವಾಗಿದೆ. ನಾನು ಪದವಿ ಮುಕ್ತಾಯಗೊಳಿಸಿದಾಗ ವಿಜೃಂಭಣೆಯುತವಾದ ಪದವಿ ಪ್ರದಾನ ಸಮಾರಂಭಗಳು ಇರಲಿಲ್ಲ ಎಂದರು.

ಯುನಾನಿ ಔಷಧಗೆ ಜಾಗತಿಕ ಮನ್ನಣೆ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿಒಎಸ್ ಚೇರಮನ್‌ ಪ್ರೊ.ಅಲಿಮುದ್ದೀನ್ ಕುಮ್ರಿ ಮಾತನಾಡಿ, ಯುನಾನಿ ಔಷಧಿಯು ವೈಜ್ಞಾನಿಕ ಮೌಲ್ಯ ಮತ್ತು ಜಾಗತಿಕ ಮನ್ನಣೆ ಪಡೆಯುತ್ತ ದಾಪುಗಾಲು ಹಾಕುತ್ತಿದೆ. ಸಂಶೋಧನೆ, ಡಿಜಿಟಲ್ ಹೆಲ್ತ್ ಸೇವೆ, ಸ್ವಾಸ್ಥ್ಯ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳುಂಟು ಎಂದರು.ಮಹಾರಾಷ್ಟ್ರದ ನಿಲಂಗಾಶರೀಫ್ ಪೀಠಾಧಿಪತಿ ಸಯ್ಯದ್ ಹೈದರಾಲಿ ಪಾಷಾ ಮಾತನಾಡಿ, ಪಾಲಕರು ಮಕ್ಕಳಿಗಾಗಿ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಅಮೂಲ್ಯ ಪಾತ್ರ ವಹಿಸುತ್ತಿದ್ದಾರೆ. ಮಕ್ಕಳ ಸಾಧನೆಗೆ ಹಿನ್ನೆಲೆಯಾಗಿ ಸದ್ದಿಲ್ಲದೆ ಶ್ರಮಿಸುತ್ತಿದ್ದಾರೆ. ಅಂತಹ ಪಾಲಕರನ್ನು ನಮ್ರತೆಯಿಂದ ಜವಾಬ್ದಾರಿಯಿಂದ ಸ್ಮರಿಸುವುದು ಮಕ್ಕಳ ಆದ್ಯ ಕರ್ತವ್ಯ ಎಂದರು.

ಮೆಡಿಸಿನ್ ಇಂಡಿಯಾ ನಿರ್ದೇಶಕ ಡಾ.ಶೂಜಾವುದ್ದೀನ್ ಮಾತನಾಡಿ, ಯುನಾನಿ ಕಾಲೇಜು ಉತ್ತುಂಗಕ್ಕೆ ಏರುವಲ್ಲಿ ಸಮಸ್ತ ಸಿಬ್ಬಂದಿ ಪಾತ್ರ ಅಪೂರ್ವವಾಗಿದೆ. ಇಲ್ಲಿನ ವಿದ್ಯಾರ್ಥಿಗಳ ಘನಶ್ರಮ, ಶಿಸ್ತು, ಶೈಕ್ಷಣಿಕ ಫಲಿತಾಂಶ ಬೆರಗಾಗಿಸಿದೆ ಎಂದರು.2019ರ ಬ್ಯಾಚಿನ 52 ಸ್ನಾತಕ, 2022ರ ಬ್ಯಾಚಿನ 04 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ, ನಿರ್ದೇಶಕ ಸಲಾವುದ್ದೀನ್ ಪುಣೆಕರ, ಶಹಾಜಮಾನ್ ಮುಜಾಹೀದ, ಎಸ್.ಡಿ.ಮಕಾಂದಾರ, ಕನ್ನಾನ ಮುಶ್ರೀಫ್,‌ ಕಾಲೇಜಿನ ಡೀನ್ ಡಾ.ಮಹಮ್ಮದ್‌ ಖಾದ್ರಿ, ಪ್ರಾಚಾರ್ಯೆ ಡಾ.ಶಹನಾಜಬಾನು, ಡಾ.ವಾರ್ಷಿಕ, ಉಪಪ್ರಾಚಾರ್ಯೆ ಡಾ.ತಸ್ಮೀಯಾ,‌ ಡಾ.ಸಬ್ಹಾ ಮಮದಾಪೂರ,‌ ಡಾ.ಸೈಯದಫಾತಿಮಾ ಜೊಹರಾ, ಡಾ.ಸಯಿದಾ ಅಸ್ಫಿಯಾಕಾಜಿ ಉಪಸ್ಥಿತರಿದ್ದರು.ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜು ರಾಷ್ಟ್ರಮಟ್ಟದಲ್ಲಿ (ನ್ಯಾಬೆಟ್) 2ನೇ ಶ್ರೇಯಾಂಕ ಪಡೆದು ರಾಜ್ಯಮಟ್ಟದಲ್ಲಿ ಗುರುತರವಾದ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯವಾಗಿದೆ. ಈ ಹಿರಿಯ ಸ್ಥಾನ ಗಟ್ಟಿಯಾಗಲು ಸಂಸ್ಥೆ ಮತ್ತು ಸಮಸ್ತ ಸಿಬ್ಬಂದಿಯ ಸಹಕಾರ ಅನುಕರಣೀಯವಾಗಿದೆ.

-ಸಲೀಂ ಅಹಮ್ಮದ್‌, ವಿಧಾನ ಪರಿಷತ್ ಮುಖ್ಯ ಸಚೇತಕರು.