ಕರ್ನಾಟಕದ ಬಿಜೆಪಿ ಸರಕಾರಕ್ಕೆ ಮಾನ ಮರ್ಯಾದೆ ಇಲ್ವಾ? : ಬಿಜೆಪಿ ಎಂಎಲ್ಸಿ ವಿಶ್ವನಾಥ್
ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಲಾಕ್ಡೌನ್ ಮಾಡಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ನಿಯಂತ್ರಣ ಅಸಾಧ್ಯ ಎಂದು ಬಿಜೆಪಿ ಲೀಡರ್ ವಿಶ್ವನಾಥ್ ಸರ್ಕಾರದ ವಿರುದ್ಧ ಖಡಕ್ ವಾಕ್ ಪ್ರಹಾರ ನಡೆಸಿದರು.
ಮೈಸೂರು (ಮೇ.07): ರಾಜ್ಯದಲ್ಲಿ ಕೋವಿಡ್ ಅಟ್ಟಹಾಸ ಏರುತ್ತಲಿದೆ. ದಿನದಿನವೂ ದಾಖಲೆಯ ಪ್ರಮಾಣದಲ್ಲಿ ಸೋಂಕು- ಸಾವುಗಳಾಗುತ್ತಿದ್ದು, ಇದರ ನಡುವೆ ಬಿಬಿಎಂಪಿಯಲ್ಲಿ ನಡೆದ ಬೆಡ್ ಬುಕಿಂಗ್ ಹಗರಣ ಸಂಬಂಧ ಬಿಜೆಪಿ ಮುಖಂಡ ಎಂಎಲ್ಸಿ ಎಚ್ ವಿಶ್ವನಾಥ್ ಗರಂ ಆಗಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ವಿಶ್ವನಾಥ್ ಬಿಬಿಎಂಪಿಯಲ್ಲಿ ಬೆಡ್ ಬುಕಿಂಗ್ ಹಗರಣ ನಡೆಯುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ವಾ ? ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಇದ್ದು ಈ ಹಗರಣವನ್ನು ಒಬ್ಬ ಎಂಪಿ ಬಯಲು ಮಾಡಬೇಕಾಗಿತ್ತಾ? ಸರ್ಕಾರ ಏನು ಮಾಡುತ್ತಿದೆ? ಎಂದು ಆಕ್ರೋಶ ಹೊರಾಹಾಕಿದರು. ಅಲ್ಲದೇ ಈ ಪ್ರಕರಣವನ್ನು ಬಯಲಿಗೆ ತಂದ ಸಂಸದ ತೇಜಸ್ವಿ ಸೂರ್ಯರನ್ನು ಅಭಿನಂದಿಸಬೇಕು ಎಂದರು.
ಜನತಾ ಕರ್ಫ್ಯೂನಿಂದ ಉಪಯೋಗವಿಲ್ಲ, ಸಂಪೂರ್ಣ ಲಾಕ್ಡೌನ್ ಮಾಡಿ: ಹೆಚ್. ವಿಶ್ವನಾಥ್ ..
ಅಲ್ಲದೇ ಈ ಹಗರಣದ ವಿಚಾರವಾಗಿ ಕೆಲವೆಡೆ ಇದಕ್ಕೆ ಕೋಮು ಬಣ್ಣ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಈ ಕೆಲಸ ಮಾಡಬಾರದು ತೇಜಸ್ವಿ ಸೂರ್ಯ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ವಿಶ್ವನಾಥ್ ಹೇಳಿದರು.
ಹೆಚ್ಚಿದ ಒತ್ತಡ: 14 ದಿನ ಲಾಕ್ಡೌನ್ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ
ರಾಜ್ಯದಲ್ಲಿ ಲಾಕ್ಡೌನ್ ವಿಚಾರ
ಸೋಮವಾರದಿಂದ ಯಡಿಯೂರಪ್ಪ ಲಾಕ್ಡೌನ್ ಮಾಡಲೇಬೇಕು. ಬಾಯಿ ಮಾತಿಗೆ ಹೇಳಬಾರದು. ಇದರಿಂದ ಇನ್ನಷ್ಟು ಸಂಕಷ್ಟಗಳು ತಪ್ಪಿ ಪ್ರಾಣಗಳು ಉಳಿಯುತ್ತದೆ ಎಂದರು .
ಬೆಳಗಾವಿಯಲ್ಲಿ ವಿಶಾಲವಾಗಿ ಸುವರ್ಣಸೌಧ ಇದ್ದು ಇಲ್ಲಿ 2 ಸಾವಿರ ಬೆಡ್ ವ್ಯವಸ್ಥೆ ಮಾಡಿ ಆಸ್ಪತ್ರೆ ಮಾಡಲಿ. ಊರಿಂದ ಹೊರಗಡೆ ಇದ್ದು, ಇದನ್ನು ತಾತ್ಕಾಲಿಕ ಆಸ್ಪತ್ರೆಯಾಗಿ ಬದಲಾಯಿಸಲಿ. ವರ್ಷಕ್ಕೆ ಒಮ್ಮೆ ಅಲ್ಲಿ ಸದನ ನಡೆಯುತ್ತದೆ. ಅದರ ಬದಲು ಆಸ್ಪತ್ರೆ ಮಾಡಿದಲ್ಲಿ ಜನತೆಗೆ ಉಪಯೋಗವಾಗುತ್ತದೆ ಎಂದು ಸಲಹೆ ನೀಡಿದರು.
ಮೈಸೂರು ಉಸ್ತುವಾರಿಗೆ ಟಾಂಗ್ : ಮೈಸೂಉ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಎಸ್ ಟಿ ಸೋಮಶೇಖರ್ ಅವರೇ ಬರೀ ಅಧಿಕಾರಿಗಳ ಮಾತು ಕೇಳಬೇಡಿ. ನೀವೆ ನೇರವಾಗಿ ಆಸ್ಪತ್ರೆಗೆ ಹೋಗಿ ನೋಡಿ. ಅಧಿಕಾರಿಗಳು ಹೇಳಿದ್ದೇ ಸತ್ಯ ಅಂದುಕೊಂಡರೆ ಅನಾಹುತವಾಗುತ್ತದೆ.
ಮೈಸೂರಿನಲ್ಲಿ ಡಿಎಚ್ಓ ಅವರೂ ಅಸಹಾಯಕರಾಗಿದ್ದಾರೆ. ಕರ್ನಾಟಕದ ಆಡಳಿತದವರಿಗೆ ಗರ ಬಡಿದಿದೆ. ಪಕ್ಕದ ರಾಜ್ಯದವರು ನಮಗೆ ಮಾದರಿಯಾಗಿದ್ದಾರೆ ಎಂದು ಖಡಕ್ ವಾಕ್ ಪ್ರಹಾರ ನಡೆಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona