ಆಸ್ಪತ್ರೆಯಲ್ಲೇ ಶಾಸಕ ಆನಂದ್ ಸಿಂಗ್ ಮಾಸ್ಟರ್ ಪ್ಲಾನ್ ..!
ಶಾಸಕ ಗಣೇಶ್ ರಿಂದ ಹಲ್ಲೆಗೆ ಒಳಗಾಗಿರುವ ಶಾಸಕ ಆನಂದ್ ಸಿಂಗ್ ಆಸ್ಪತ್ರೆಯಲ್ಲಿದ್ದುಕೊಂಡೇ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಜಾಮೀನು ಸಿಗದಂತೆ ಮಾಡಲು ಆಸ್ಪತ್ರೆಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
ಬೆಂಗಳೂರು : ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳಲು ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಇರಿಸಿದ್ದ ವೇಳೆ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಬಂಧಿಸಬೇಕು ಎಂದು ಆನಂದ್ ಸಿಂಗ್ ಕುಟುಂಬದವರು ಪಟ್ಟು ಹಿಡಿದಿದ್ದಾರೆ.
ಶಾಸಕ ಗಣೇಶ್ ಬಂಧನವಾಗುವ ತನಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದಿರಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆದರೆ ಇತ್ತ ಗಣೇಶ್ ನಿರೀಕ್ಷಣಾ ಜಾಮೀನು ಪಡೆಯಲು ಶಾಸಕ ಗಣೇಶ್ ಸಿದ್ಧತೆ ನಡೆಸಿದ್ದಾರೆ.
ಆನಂದ್ ಸಿಂಗ್ ಡಿಸ್ಚಾರ್ಜ್ ಆದರೆ ಗಣೇಶ್ ಗೆ ಜಾಮೀನು ಸಿಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಆನಂದ್ ಸಿಂಗ್ ಆಸ್ಪತ್ರೆಯಲ್ಲೇ ಇನ್ನೆರಡು ದಿನ ಉಳಿಯಲು ನಿರ್ಧಾರ ಮಾಡಿದ್ದಾರೆ.
ಸದ್ಯ ಹಲ್ಲೆಯಾದ ಗಾಯಗಳೆಲ್ಲಾ ಮಾಸಿದ್ದು, ಕಣ್ಣಿನ ಭಾಗದಲ್ಲಿ ಸ್ವಲ್ಪ ಮಟ್ಟಿಗಿನ ಊತವಿದೆ. ಶಾಸಕ ಆನಂದ್ ಸಿಂಗ್ ಬಯಸಿದರೆ ಡಿಸ್ಚಾರ್ಜ್ ಮಾಡುವುದಾಗಿ ಅಪೋಲೋ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಸದ್ಯ ಬಿಡದಿ ಪೊಲೀಸರಿಂದ ಶಾಸಕ ಗಣೇಶ್ ಗಾಗಿ ತೀವ್ರ ಹುಡುಕಾಟ ಆರಂಭವಾಗಿದ್ದು, ಸದ್ಯ ಪೊಲೀಸರ ಕಣ್ತಪ್ಪಿಸಿ ಶಾಸಕ ಗಣೇಶ್ ನಾಪತ್ತೆಯಾಗಿದ್ದಾರೆ.