ಫಸಲ್ ಬಿಮಾ ಯೋಜನೆಗೆ ರಾಜ್ಯ ಸರ್ಕಾರ ಗುಡ್ಬೈ?: ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ
ಸ್ವಂತ ಹೊಸ ಬೆಳೆ ವಿಮಾ ನೀತಿಗೆ ಚಿಂತನೆ, ಗುಜರಾತ್ ಕೂಡ ಹೊರಬಂದಿದೆ: ಕಂದಾಯ ಸಚಿವ ಕೃಷ್ಣಬೈರೇಗೌಡ
ವಿಧಾನಸಭೆ(ಜು.11): ಪ್ರಧಾನಮಂತ್ರಿ ಫಸಲ್ ಬಿಮಾ ಬೆಳೆ ವಿಮಾ ಯೋಜನೆಯಿಂದ ಹೊರಬಂದು ನಮ್ಮದೇ ರಾಜ್ಯದ ಹೊಸ ಬೆಳೆ ವಿಮಾ ನೀತಿ ರೂಪಿಸಿಕೊಳ್ಳುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸದನದಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ಫಸಲ್ ಬಿಮಾ ಬೆಳೆ ವಿಮೆ ಯೋಜನೆಯಲ್ಲಿನ ಸಾಧಕ-ಬಾಧÜಕ ಪರಿಶೀಲಿಸಿದ ಬಳಿಕ ಗುಜರಾತ್ ಸರ್ಕಾರ ಈ ಯೋಜನೆಯಿಂದ ಹೊರಬಂದು ತಮ್ಮದೇ ಆದ ಬೆಳೆ ವಿಮಾ ನೀತಿ ಮಾಡಿಕೊಂಡಿದೆ. ನಮ್ಮ ರಾಜ್ಯದ ಸರ್ಕಾರದ ಮಟ್ಟದಲ್ಲೂ ಇಂತಹ ಚಿಂತನೆ ನಡೆಯುತ್ತಿದೆ. ಸಮರ್ಪಕವಾದ ಚರ್ಚೆಯ ಬಳಿಕ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.
ರಾಜ್ಯದಲ್ಲಿ ಬರಗಾಲ ಘೋಷಣೆ ಬಗ್ಗೆ ಜುಲೈ ತಿಂಗಳಲ್ಲಿ ನಿರ್ಧಾರ: ಸಚಿವ ಕೃಷ್ಣಬೈರೇಗೌಡ
ಇದಕ್ಕೂ ಮುನ್ನ ಶಾಸಕ ಶಿವಲಿಂಗೇಗೌಡ ಅವರು, ಪ್ರಧಾನಮಂತ್ರಿ ಫಸಲ್ಬಿಮಾ ಯೋಜನೆಯಲ್ಲಿ ಸಾಕಷ್ಟುಲೋಪದೋಷಗಳಿವೆ. ರೈತರಿಗೆ ಸರಿಯಾದ ವಿಮಾ ಸೌಲಭ್ಯ ಸಿಗುತ್ತಿಲ್ಲ. ಖಾಸಗಿ ಕಂಪನಿಗಳಿಗೆ ಅನುಕೂಲವಾಗುತ್ತಿದೆ ಅಷ್ಟೆ. ಸಾಸಿವೆ, ಉದ್ದು, ಹೆಸರು ಮತ್ತಿತರೆ ದ್ವಿದಳ ದಾನ್ಯಗಳಿಗೆ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜೂನ್ 22 ಅನ್ನು ಕೊನೆಯ ದಿನ ಮಾಡಲಾಗಿದೆ. ಆದರೆ, ಮುಂಗಾರು ಆರಂಭವಾಗಿದ್ದೇ ತಡವಾಗಿ. ರೈತರು ಆ ನಂತರವೂ ಈ ಬೆಳೆಗಳನ್ನು ಬಿತ್ತಿದ್ದು ವಿಮೆ ಮಾಡಿಸಲಾಗದೆ ವಂಚಿತರಾಗಿದ್ದಾರೆ ಎಂದು ದೂರಿದರು.
ಈ ಬೆಳೆ ವಿಮಾ ಯೋಜನೆಯಲ್ಲಿ ಲೋಪಗಳಿವೆ ಎಂಬುದಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವರು, ರಾಜ್ಯದ್ದೇ ಬೆಳೆ ವಿಮಾ ನೀತಿ ತರುವ ಚಿಂತನೆ ನಡೆದಿರುವುದನ್ನು ತಿಳಿಸಿದರು. ಜೊತೆಗೆ ಉದ್ದು, ಎಳ್ಳು ಮತ್ತು ಶೇಂಗಾ ಬೆಳೆಗಳಿಗೆ ಜೂ. 22 ರಂದು ಕೊನೆಯ ದಿನವಾಗಿತ್ತು. ಇದನ್ನು ವಿಸ್ತರಿಸಲು ನಾವು ಕೇಂದ್ರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು. ಆದರೆ, ಹತ್ತಿ, ಅಲಸಂದೆ, ತೊಗರಿ ಮತ್ತಿತರ ಬೆಳೆಗಳಿಗೆ ಜು.31ರವರೆಗೆ ಮತ್ತು ಸೂರ್ಯಕಾಂತಿ, ರಾಗಿ, ಭತ್ತ ಇನ್ನಿತರೆ ಬೆಳೆಗಳಿಗೆ ವಿಮೆ ಮಾಡಿಸಲು ಆ.16ರವರೆಗೆ ಅವಕಾಶವಿದೆ ಎಂದು ತಿಳಿಸಿದರು.