ಬಳ್ಳಾರಿ ಆಯ್ತು ಇದೀಗ ಜಾರಕಿಹೊಳಿ ಕೋಟೆಗೆ ಡಿಕೆಶಿ ಎಂಟ್ರಿ!
ಬೆಳಗಾವಿ ರಾಜಕಾರಣಕ್ಕೆ ಡಿಕೆಶಿ ಮತ್ತೆ ಎಂಟ್ರಿ! ಜಾರಕಿಹೊಳಿ ಕೋಟೆಗೆ ಲಗ್ಗೆ ಇಡ್ತಾರಾ ಜಲಸಂಪನ್ಮೂಲ ಸಚಿವ?! ಬಳ್ಳಾರಿ ಲೋಕಸಭೆ ಉಪಚುನಾವಣೆ ಗೆದ್ದ ಹುಮ್ಮಸ್ಸಿನಲ್ಲಿ ಡಿಕೆಶಿ! ರಮೇಶ್ ಜಾರಕಿಹೊಳಿ ರೈತರ ಕಬ್ಬಿನ ಬಾಕಿ ಬಿಲ್ ಪಾವತಿಸುತ್ತಾರೆ! ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಮೇಲೆ ಒತ್ತಡ ಹೇರಿದ ಡಿಕೆಶಿ
ಬೆಳಗಾವಿ(ನ.23): ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಕಾಂಗ್ರೆಸ್ ನಾಯಕ, ಸಚಿವ ಡಿಕೆ ಶಿವಕುಮಾರ್, ಇದೀಗ ಮತ್ತೆ ಬೆಳಗಾವಿ ರಾಜಕಾರಣದತ್ತ ಮುಖ ಮಾಡಿದಂತಿದೆ.
ಬಳ್ಳಾರಿ ಗೆಲುವಿನ ಗುಂಗಿನಲ್ಲಿರುವ ಡಿಕೆಶಿ, ಇದೀಗ ಬೆಳಗಾವಿಗೂ ತಮ್ಮ ಪ್ರಭಾವ ವಿಸ್ತರಿಸೋ ಪ್ಲ್ಯಾನ್ ಹಾಕಿಕೊಂಡಂತೆ ಕಾಣುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಕಬ್ಬು ಬೆಳೆಗಾರರ ಹೋರಾಟ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಬಿಲ್ ಪಾವತಿ ಮಾಡುವ ಕುರಿತು ಡಿಕೆಶಿ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಾಮಾಣಿಕರಿದ್ದು ರೈತರ ಬಿಲ್ ಕೊಡುತ್ತಾರೆ ಎಂಬ ನಂಬಿಕೆ ತಮಗಿದೆ ಎಂದು ಜಲಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ರೈತರ ಬಾಕಿ ಬಿಲ್ ಕೊಡಲು ರಮೇಶ್ ಜಾರಕಿಹೊಳಿ ಅವರ ಮೇಲೆ ಪರೋಕ್ಷ ಒತ್ತಡ ಹಾಕಿದ್ದಾರೆ ಡಿಕೆಶಿ.
ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜತೆ ಮಾತನಾಡಿದ ಸಚಿವರು, ಬೆಳಗಾವಿ ಜಿಲ್ಲಾ ಮಂತ್ರಿಗಳು ಆಗಿರುವ ರಮೇಶ್ ಮುಖ್ಯಮಂತ್ರಿಗಳ ಜೊತೆ ಸೇರಿ ರೈತರ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿಯ ಆರ್. ಅಶೋಕ ಅವರ ಫೋನ್ ಕದ್ದಾಲಿಕೆ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಕೇಂದ್ರದಲ್ಲಿ ಅವರ ಸರ್ಕಾರವೇ ಇದೆ ತನಿಖೆ ಮಾಡಿಸಲಿ ಎಂದು ಟಾಂಗ್ ನೀಡಿದರು.