ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಯಚೂರು ಜಿಲ್ಲಾ ಪ್ರವಾಸವು, ಅವರ ಸಂಪುಟ ಸಹೋದ್ಯೋಗಿ ಹಾಗೂ ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರದ್ದಾಗಿದೆ. ತಮ್ಮ ಆಪ್ತ ಗೆಳೆಯನ ಅಗಲಿಕೆಗೆ ಡಿಕೆಶಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಯಚೂರು (ಮೇ.10): ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣಕ್ಕೆ ಇಂದು ಆಗಮಿಸಬೇಕಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿ ಬಹುತೇಕ ರದ್ದಾಗಿದೆ. ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಈ ಪ್ರವಾಸವನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಕೈ ಕೊಟ್ಟ ಆರೋಗ್ಯ, ಸಚಿವ ಸುಧಾಕರ್ ಇನ್ನಿಲ್ಲ:
ಹಿರಿಯೂರು ಶಾಸಕರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಸುಧಾಕರ್ ಅವರ ಸಾವು ಕಾಂಗ್ರೆಸ್ ಪಾಳಯದಲ್ಲಿ ಆಘಾತ ಮೂಡಿಸಿದೆ.
ಆಪ್ತ ಗೆಳೆಯನ ಅಗಲಿಕೆಗೆ ಡಿಕೆಶಿ ಕಂಬನಿ
ತಮ್ಮ ಸಂಪುಟ ಸಹೋದ್ಯೋಗಿಯ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. 'ನಮ್ಮ ಸಂಪುಟ ಸಹೋದ್ಯೋಗಿ ಹಾಗೂ ನನ್ನ ಆಪ್ತರೂ ಆಗಿದ್ದ ಡಿ. ಸುಧಾಕರ್ ಅವರ ಸಾವು ನನಗೆ ಅತೀವ ದುಃಖವನ್ನುಂಟು ಮಾಡಿದೆ. ಉತ್ತಮ ಜನಪರ ಸೇವಕನನ್ನು ನಾವು ಕಳೆದುಕೊಂಡಿದ್ದೇವೆ' ಎಂದು ಭಾವುಕರಾಗಿದ್ದಾರೆ.
'ಶೋಕ ಸಾಗರದಲ್ಲಿ ಆಪ್ತರು
'ಭಗವಂತ ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ' ಎಂದು ಡಿಕೆ ಶಿವಕುಮಾರ್ ಪ್ರಾರ್ಥಿಸಿದ್ದಾರೆ. ಸಚಿವರ ನಿಧನದ ಹಿನ್ನೆಲೆಯಲ್ಲಿ ಇಂದಿನ ರಾಯಚೂರು ಪ್ರವಾಸ ಬಹುತೇಕ ರದ್ದಾಗಿದೆ.


