Asianet Suvarna News Asianet Suvarna News

22 ದಿನಗಳಲ್ಲೇ ಭರ್ತಿಯಾದ ಮಂತ್ರಾಲಯ ರಾಯರ ಮಠದ ಹುಂಡಿಗಳು: ಪ್ರತಿನಿತ್ಯ 10 ಲಕ್ಷ ರೂ. ಕಾಣಿಕೆ

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಹುಂಡಿಗಳು ಕೇವಲ 22 ದಿನಗಳಲ್ಲಿ ಭರ್ಥಿಯಾಗಿವೆ.

Mantralayam raghavendra temple hundi filled in 22 days Devotees donate 10 lakh rupees daily sat
Author
First Published Aug 23, 2023, 7:40 PM IST

ರಾಯಚೂರು (ಆ.23): ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ರಾಯರ ಮಠಕ್ಕೆ ಕಳೆದ 22 ದಿನಗಳಲ್ಲಿ ಪ್ರತಿನಿತ್ಯವೂ ತಲಾ 10 ಲಕ್ಷ ರೂ.ಗಿಂತ ಅಧಿಕ ಮೊತ್ತದ ಕಾಣಿಕೆಯನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ.

ಕಳೆದ ಮೂರು ವಾರಗಳಲ್ಲಿ ಸಾಲು ಸಾಲು ರಜೆಗಳು ಇದ್ದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳ ಜೊತೆಗೆ ಧಾರ್ಮಿಕ ಕೇಂದ್ರಗಳಿಗೆ ಪ್ರವಾಹ ಹೋಗುವವರ ಸಂಖ್ಯೆಯೂ ಹೆಚ್ಚಾಗಿತ್ತು. ಇನ್ನು ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿಯೂ ಹುಂಡಿಗೆ ಭಕ್ತರ ಕಾಣಿಕೆ ಹಾಕಿರುವ ಮೊತ್ತದ ಪ್ರಮಾಣವೂ ಹೆಚ್ಚಾಗಿದೆ. ಇನ್ನು ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ರಾಯರ ಮಠದ ಎಲ್ಲ ಹುಂಡಿಗಳು ಕೇವಲ 22 ದಿನಗಳಲ್ಲಿಯೇ ಭರ್ತಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಹುಂಡಿಯನ್ನು ತೆಗೆದು ಎಣಿಕೆ ಮಾಡಲಾಗಿದ್ದು, ಬರೋಬ್ಬರಿ 2,35,62,719 ರೂ. (2.35 ಕೋಟಿ ರೂ.) ಕಾಣಿಕೆ ಸಂಗ್ರಹ ಆಗಿದೆಯೆಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

Chandrayaan-3 ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಇಸ್ರೋ ವಿಜ್ಞಾನಿ ಮುತ್ತುವೇಲ್

ಪ್ರತಿನಿತ್ಯ 10 ಲಕ್ಷ ರೂ.ಗಿಂತ ಅಧಿಕ ಕಾಣಿಕೆ:  ಇನ್ನು ಸಾಲು ಸಾಲು ರಜೆಗಳಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಭಕ್ತರ ದಂಡು ಹರಿದುಬಂದಿತ್ತು. ಭಕ್ತರಿಂದ ರಾಯರ ಮಠದ ಹುಂಡಿಗಳು ಸಂಪೂರ್ಣ ಭರ್ತಿಯಾಗಿದ್ದವು. ಈ ಹಿಂದೆ ತಿಂಗಳಿಗೊಮ್ಮೆ ಹುಂಡಿ ಎಣಿಕೆ ಮಾಡಲಾಗುತ್ತಿತ್ತು. ಆದರೆ, ಈಗ 22 ದಿನಗಳಿಗೆ ರಾಯರ ಹುಂಡಿ ಭರ್ತಿಯಾಗಿದ್ದವು. ರಾಯರ ಮಠದ ಸಾವಿರಾರು ಭಕ್ತರಿಂದ ಶ್ರೀಮಠಕ್ಕೆ ಕಾಣಿಕೆಯು ಧಾರಾಳವಾಗಿ ಹರಿದುಬಂದಿದೆ. ಇನ್ನು ಹುಂಡಿ ಭರ್ತಿಯಾದ ಬೆನ್ನಲ್ಲೇ ಎಣಿಕೆ ಮಾಡಲಾಗಿದೆ. ಒಟ್ಟಾರೆ, 2.35 ಕೋಟಿ ರೂ. ಹಣ ಸಂಗ್ರಹವಾಗಿದ್ದು, ಈ ಮೊತ್ತವನ್ನು ಪ್ರತಿನಿತ್ಯ ಸರಾಸರಿಗೆ ಹೋಲಿಕೆ ಮಾಡಿದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಕಾಣಿಕೆ ಸಂಗ್ರಹ ಆಗಿರುವುದು ತಿಳಿದುಬಂದಿದೆ. 

ಮಠದ ಕಲ್ಯಾಣ ಕಾರ್ಯಕ್ಕಾಗಿ ಹಣಬಳಕೆ: ಇನ್ನು ಮಂತ್ರಾಲಯದ ರಾಯರ ಮಠದಲ್ಲಿ ಕಡಿಮೆ ದಿನಗಳಲ್ಲಿ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಭಕ್ತರು ನೀಡಿದ ಕಾಣಿಕೆಯನ್ನು ಶ್ರೀಮಠದ ಕಲ್ಯಾಣ ಕಾರ್ಯಕ್ಕಾಗಿ ಬಳಕೆ ಮಾಡಲಾಗುತ್ತದೆ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮೀಜಿ ಮಠದ ಸಿಬ್ಬಂದಿ ಮಾಹಿತಿ ನೀಡಿದರು.

108 ಅಡಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣ: ದೇಶದಲ್ಲಿ ಹಿಂದೂಗಳ ಆರಾಧ್ಯ ದೈವವಾದ ಶ್ರೀರಾಮನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಬೆನ್ನಲ್ಲಿಯೇ ಶ್ರೀ ಗುರು ರಾಘವೇಂದ್ರನ ಸನ್ನಿಧಿಯಾದ ಮಂತ್ರಾಲಯದಲ್ಲಿ 108 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಜುಲೈ 23ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವರ್ಚುವಲ್‌ ಆಗಿ ಅಡಿಗಲ್ಲು ಹಾಕಿದ್ದರು. ಇದೇ ವೇಳೆ ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಭೌತಿಕವಾಗಿ ಭೂಮಿ ಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶ ರಾಜ್ಯದ ಹಲವು ಸಚಿವರುಗಳು ಹಾಗೂ ಗಣ್ಯರು ಭಾಗಿಯಾಗಿದ್ದರು. ಅಪಾರ ಭಕ್ತರ ಸಮ್ಮುಖದಲ್ಲಿ ನಡೆದ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಲಾಗಿತ್ತು. 

ಮಂತ್ರಾಲಯದಲ್ಲಿ 108 ಅಡಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು

ದೇಶದಲ್ಲಿಯೇ ಅತಿದೊಡ್ಡ ಶ್ರೀರಾಮನ ಪ್ರತಿಮೆ: ದೇಶದಲ್ಲೇ ಅತಿ ದೊಡ್ಡ ಶಿಲಾಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 108 ಅಡಿ ಉದ್ದದ ಶ್ರೀರಾಮನ ಮೂರ್ತಿಯನ್ನು ಮಂತ್ರಾಲಯದಲ್ಲಿ ಸ್ಥಾಪಿಸಲಾಗುವುದು. ಪ್ರತಿಮೆಯನ್ನು ಕೆತ್ತಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಲಾಗುವುದು. ವಿಶೇಷ ಯೋಜನೆಗೆ ಅಂದಾಜು 6 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಪುರಾಣದ ಪ್ರಕಾರ, ಶ್ರೀರಾಮನು ಸೀತಾದೇವಿಯನ್ನು ಹುಡುಕಲು ಲಂಕೆಗೆ ತೆರಳುತ್ತಿದ್ದಾಗ ಇಲ್ಲಿ ಆಶ್ರಯ ಪಡೆದಿದ್ದನು ಎಂಬ ನಂಬಿಕೆಯಿದೆ. ಆದ್ದರಿಂದ ಬೃಂದಾವನದಲ್ಲಿ ಪ್ರತಿಮೆಯನ್ನು ಸ್ಥಾಪಿಸಲು ಸ್ಥಳವನ್ನು ಆರಿಸಿಕೊಳ್ಳಲಾಗಿದೆ ಎಂದು ಮಂತ್ರಾಲಯ ಮಠದ ಮಠಾಧೀಶ ಶ್ರೀ ಸುಬುದೇಂದ್ರ ತೀರ್ಥ ಸ್ವಾಮಿಗಳು ತಿಳಿಸಿದ್ದರು.

Follow Us:
Download App:
  • android
  • ios