ಮಾವಿನ ಫಸಲು ಹೆಚ್ಚಿಸಲು ರೈತರಿಗೆ ಇಲ್ಲಿದೆ ಐಡಿಯಾ
ಮಾವಿನ ಫಸಲು ಹೆಚ್ಚಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾವು ಅಭಿವೃದ್ಧಿ ಮಂಡಳಿ ರೈತರಿಗೆ ಆನ್ಲೈನ್ ಮೂಲಕ ತರಬೇತಿ ನೀಡುತ್ತಿದೆ.
ಬೆಂಗಳೂರು (ಸೆ.10): ಪ್ರಸಕ್ತ ವರ್ಷದ ಮಾವಿನ ಕಾಲ ಪೂರ್ಣಗೊಂಡಿದ್ದು, ಮುಂದಿನ ವರ್ಷದಲ್ಲಿ ಮಾವಿನ ಫಸಲು ಹೆಚ್ಚಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾವು ಅಭಿವೃದ್ಧಿ ಮಂಡಳಿ ರೈತರಿಗೆ ಆನ್ಲೈನ್ ಮೂಲಕ ತರಬೇತಿ ನೀಡುತ್ತಿದೆ. ರಾಜ್ಯದ ಎಲ್ಲ ಭಾಗಗಳಲ್ಲಿ ಮಾವು ಪೂರ್ಣಗೊಂಡಿದೆ. ಮುಂದಿನ ವರ್ಷದ ಫಸಲಿಗಾಗಿ ಮಾವಿನ ಗಿಡಗಳಿಗೆ ರಸಗೊಬ್ಬರ ಹಾಕುವುದು, ನೀರು ಹರಿಸುವ ವಿಧಾನ, ಹೂವು ಬೀಳದಂತೆ ಇರಲು ಔಷಧ ಸಿಂಪಡಣೆ ಸೇರಿದಂತೆ ಹಲವು ರೀತಿಯಲ್ಲಿ ಮಾಹಿತಿ ನೀಡಲಾಗುತ್ತಿದೆ.
ಈಗಾಗಲೇ ಸುಮಾರು 10ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಪ್ರತಿ ಕಾರ್ಯಕ್ರಮಕ್ಕೂ ಸುಮಾರು 80ರಿಂದ 100ಕ್ಕೂ ಹೆಚ್ಚು ಜನ ರೈತರು ಭಾಗಿಯಾಗುತ್ತಿದ್ದಾರೆ. ಜೊತೆಗೆ, ಅವರಿಗಿರುವ ಸಂಶಯಗಳನ್ನು ವಿಷಯ ತಜ್ಞರಿಗೆ ಹೇಳಿ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಮಾವು ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರತಿ ವರ್ಷ ರೈತರ ತೋಟಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲಾಗುತ್ತಿತ್ತು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಎಲ್ಲ ರೈತರಿಗೂ ಆನ್ಲೈನ್ ತರಬೇತಿ ನೀಡುತ್ತಿದ್ದೇವೆ. ಇದೀಗ ಅನ್ಲಾಕ್ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ತರಬೇತಿ ನೀಡುವುದಾಗಿ ಅಧಿಕಾರಿಗಳು ವಿವರಿಸಿದರು.
ಮಂಡ್ಯ, ರಾಮನಗರ , ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರಿಗೆ ಆನ್ಲೈನ್ನಲ್ಲಿ ತರಬೇತಿ ನೀಡಲಾಗಿದೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ರೈತರು ಈ ತರಬೇತಿಯಲ್ಲಿ ಭಾಗಿಯಾಗಿದ್ದಾರೆ. ಎಲ್ಲ ರೈತರು ಮಾಹಿತಿಯನ್ನು ಪಡೆದುಕೊಂಡಿದ್ದು ಮುಂದಿನ ವರ್ಷ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
- ಮಾವು ಅಭಿವೃದ್ಧಿ ಮಂಡಳಿಯಿಂದ ರೈತರಿಗೆ ತರಬೇತಿ ಆರಂಭ