ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ೮ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಹಿಂದೂ ಯುವಕರು ಕೂಡ ಭಾಗಿಯಾಗಿರುವ ಶಂಕೆ ಇದೆ. ವಿಡಿಯೋ ಸಾಕ್ಷ್ಯಾಧಾರದ ಮೇಲೆ ಕಾರ್ಯಾಚರಣೆ ನಡೆದಿದೆ. ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಗೃಹ ಸಚಿವರು ಇಂದು ಮಂಗಳೂರಿಗೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆ ಕುರಿತು ಸಭೆ ನಡೆಸಲಿದ್ದಾರೆ.

ಮಂಗಳೂರು(ಮೇ.03) ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆಗೆ ಬಾರಿ ಸಂಚು ನಡೆದಿರುವುದು ಬಯಲಾಗಿದೆ. ಕಾಂಟ್ರಾಕ್ಟ್ ಕಿಲ್ಲರ್ಸ್ ಬಳಸಿ ಈ ದಾಳಿ ನಡೆಸಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಇದೀಗ ಪೊಲೀಸರು ಒಟ್ಟು 8 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಅನ್ನೋ ಮಾಹಿತಿ ಬಯಲಾಗಿದೆ. ಪೊಲೀಸರು ವಶಕ್ಕೆ ಪಡೆದಿರುವ 8 ಆರೋಪಿಗಳ ಪೈಕಿ ಇಬ್ಬರು ಹಿಂದೂ ಯುವಕರು ಎಂದು ಹೇಳಲಾಗುತ್ತಿದೆ. ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದೀಗ 8 ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಇಂದು ಅಧಿಕೃತ ಘೋಷಣೆ ಸಾಧ್ಯತೆ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಆರೋಪಿಗಳ ತಂಡ ಅಡ್ಡಗಟ್ಟಿ ಮಂಗಳೂರಿನ ಬಜ್ಪೆ ಸಮೀಪ ಹ*ತ್ಯೆ ಮಾಡಿತ್ತು. ಮೇ.01ರಂದು ಈ ಘಟನೆ ನೆಡೆದಿತ್ತು. ನಿನ್ನೆ ಸುಹಾಶ್ ಶೆಟ್ಟಿ ಅಂತ್ಯಸಂಸ್ಕಾರ ಕಾರಿಂಜದ ಸ್ವಗೃಹದಲ್ಲಿ ನಡೆದಿದೆ. ಈ ಘಟನೆಯಿಂದ ರಾಜ್ಯಾದ್ಯಂತ ಆಕ್ರೋಶಗಳು ಹೆಚ್ಚಾಗುತ್ತಿದೆ. ಇತ್ತ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, 8 ಆರೋಪಿಗಳ ವಿಚಾರಣೆ ತೀವ್ರಗೊಳಿಸಿದ್ದಾರೆ. ವಶಕ್ಕೆ ಪಡೆದಿರುವ ಕೆಲ ಆರೋಪಿಗಳು ದಕ್ಷಿಣ ಕನ್ನಡದಲ್ಲೇ ಅವಿತು ಕುಳಿತಿದ್ದರು. ಆರೋಪಿಗಳ ವಶಕ್ಕೆ ಪಡೆದಿರುವ ಕುರಿತು ಇಂದು ಮಂಗಳೂರು ಕಮಿಷನರ್ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. 

ಸುಹಾಸ್ ಶೆಟ್ಟಿ ಹ*ತ್ಯೆ ಸುಳಿವು ಮೊದಲೇ ಪೊಲೀಸರಿಗಿತ್ತು, ಮೆಸೇಜ್ ಮಾಹಿತಿ ಬಿಚ್ಚಿಟ್ಟ ಸುನೀಲ್ ಕಮಾರ್

ಚಿಕ್ಕಮಗಳೂರಿನಲ್ಲಿ ಇಬ್ಬರ ಬಂಧನ?
ಹಿಂದೂ ಕಾರ್ಯಕರ್ತನ ಮೇಲಿನ ದಾಳಿಯಲ್ಲಿ ಹಿಂದೂ ಯುವಕರನ್ನೇ ಬಳಸಲಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ. ಚಿಕ್ಕಮಗಳೂರಿನ ಕಳಸ ಮೂಲದ ಇಬ್ಬರು ಹಿಂದೂ ಯವಕರು ಮಂಗಳೂರಿನ ನಟೋರಿಯಸ್ ಸಫ್ವಾನ್ ಗ್ಯಾಂಗ್ ಜೊತೆ ಸೇರಿಕೊಂಡಿದ್ದರು. ಸಫ್ಬಾನ್ ಗ್ಯಾಂಗ್ ಜೊತೆಗಿದ್ದ ಇಬ್ಬರು ಹಿಂದೂ ಯುವಕರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕಾನೂನು ಸುವ್ಯವಸ್ಥೆಗೆ ಮಂಗಳೂರಿನಲ್ಲಿ ಗೃಹ ಸಚಿವರ ಸಭೆ
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಪರಿಸ್ಥಿತಿ ಉದ್ವಿಘ್ನವಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿದೆ. ವಿಶ್ವಹಿಂದೂ ಪರಿಷತ್ ಹಾಗೂ ಇತರ ಸಂಘಟನೆಗಳು ನಿನ್ನೆ(ಮೇ.02) ರಂದು ಕರೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಯಶಸ್ವಿಯಾಗಿದೆ. ಕೆಲವೆಡೆ ಬಸ್‌ಗೆ ಕಲ್ಲು ತೂರಿದ ಘಟನೆಗಳು ನಡೆದಿದೆ. ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಹಿನ್ನಲೆಯಲ್ಲಿ ಇಂದು ಗೃಹ ಸಚಿವ ಪರಮೇಶ್ವರ್ ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಮಂಗಳೂರು ಕಮಿಷನರ್ ಸೇರಿದಂತೆ ಅಧಿಕಾರಿಗಳ ಜೊತೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಭೆ ನಡೆಸಲಿದ್ದಾರೆ.

ಸುಹಾಸ್ ಶೆಟ್ಟಿ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಕಾಂಗ್ರೆಸ್ ಒಲೈಕೆ ರಾಜಕಾರಣದಿಂದ ಈ ದಾಳಿಯಾಗಿದೆ ಎಂದು ಆರೋಪಿಸಿದೆ. ವಿಪಕ್ಷ ನಾಯಕ ಆರ್ ಆಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಿನ್ನೆ(ಮೇ.02) ಸುಹಾಶ್ ಶೆಟ್ಟಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಸ್ಥಳೀಯ ಬಿಜಿಪಿ ನಾಯಕರು ಪಾಲ್ಗೊಂಡಿದ್ದರು. ಈ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ಆರೋಪಿಗಳ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

ಮನೆಯಲ್ಲಿ ಮಡಗಟ್ಟಿದ ದುಃಖ
ಸುಹಾಸ್ ಶೆಟ್ಟಿ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಕ್ಕೆ ಆಧಾರವಾಗಿದ್ದ ಸುಹಾಶ್ ಶೆಟ್ಟಿ ಇದೀಗ ಅನಾರೋಗ್ಯ ಪೀಡಿತ ಪೋಷಕರನ್ನು ಅನಾಥವಾಗಿ ಬಿಟ್ಟು ಹೋಗಿದ್ದಾನೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಹಿಂದುತ್ವಕ್ಕಾಗಿ ಹೋರಾಡಿದ, ಹಿಂದುತ್ವವನ್ನೇ ಉಸಿರಾಗಿಸಿದ ಮಗನ ಜೀವ ಹೋಗಿದೆ ಎಂದು ತಾಯಿ ಸುಲೋಚನಾ ಕಣ್ಣೀರಿಟ್ಟಿದ್ದಾರೆ.

ಹಿಂದುತ್ವವೇ ನನ್ನ ಉಸಿರು ಎಂದವನ ಉಸಿರನ್ನೇ ಕಸಿದರು, ಸುಹಾಸ್ ಶೆಟ್ಟಿ ತಾಯಿ ಆಕ್ರಂದನ