'ಮಂಗಳಾದೇವಿ'ಯಲ್ಲೂ ಧರ್ಮ ದಂಗಲ್ ಸದ್ದು: ಮುಸ್ಲಿಮರ ವ್ಯಾಪಾರ ತಡೆದ್ರೆ ತಕರಾರು ತೆಗೆಯುತ್ತೇವೆ ಎಂದ ಸಮಿತಿ!
ಮಂಗಳೂರಿನ ಇತಿಹಾಸ ಪ್ರಸಿದ್ದ ಮಂಗಳಾದೇವಿಯಲ್ಲೂ ಧರ್ಮ ದಂಗಲ್ ಸದ್ದು ಮಾಡಿದ್ದು, ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದ ಆರೋಪ ಕೇಳಿ ಬಂದಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಅ.12): ಮಂಗಳೂರಿನ ಇತಿಹಾಸ ಪ್ರಸಿದ್ದ ಮಂಗಳಾದೇವಿಯಲ್ಲೂ ಧರ್ಮ ದಂಗಲ್ ಸದ್ದು ಮಾಡಿದ್ದು, ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದ ಆರೋಪ ಕೇಳಿ ಬಂದಿದೆ.
ಜಾತ್ರೋತ್ಸವದಲ್ಲಿ ಮುಸ್ಲಿಮರು ವ್ಯಾಪಾರ ಮಾಡದಂತೆ ತಡೆ ಆರೋಪ ವ್ಯಕ್ತವಾಗಿದ್ದು, ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ದ.ಕ ಡಿಸಿಗೆ ದೂರು ನೀಡಲಾಗಿದೆ. ಮಂಗಳಾದೇವಿ ಯಲ್ಲಿ ಅ.15ರಿಂದ 24ರವರೆಗೆ ನವರಾತ್ರಿ ಸಂಭ್ರಮ ನಡೆಯಲಿದ್ದು, ದೇವಸ್ಥಾನದ ಆಡಳಿತ ಮಂಡಳಿಯಿಂದ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಆರೋಪ ಕೇಳಿ ಬಂದಿದೆ. ಸದ್ಯ ನವರಾತ್ರಿ ಸಿದ್ದತೆ ಹಿನ್ನೆಲೆಯಲ್ಲಿ ಅಂಗಡಿ ಜಾಗದ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ವ್ಯಾಪಾರ ನಡೆಸಲು ಜಾಗ ಹಂಚಿಕೆಯಾಗಿದೆ. ಮಂಗಳೂರು ಮಹಾನಗರ ಪಾಲಿಕೆಗೆ ಸೇರಿರೋ ಸರ್ಕಾರಿ ರಸ್ತೆ ಇದಾಗಿದ್ದು, ಆದರೆ ಹಲವು ವರ್ಷಗಳಿಂದ ಈ ರಸ್ತೆಯ ಬದಿಗಳಲ್ಲಿ ನವರಾತ್ರಿ ಜಾತ್ರಾ ವ್ಯಾಪಾರಕ್ಕೆ ಪಾಲಿಕೆ ರಸ್ತೆಯಾದ್ರೂ ದೇವಸ್ಥಾನದ ಆಡಳಿತದಿಂದಲೇ ಜಾಗ ಹರಾಜು ನಡೆಯುತ್ತಿದೆ. ರಾಜ್ಯದ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಬರೋ ಮಂಗಳಾದೇವಿ ದೇವಸ್ಥಾನದ ಎದುರಿನ ರಸ್ತೆ ಪಾಲಿಕೆ ವ್ಯಾಪ್ತಿಗೆ ಸೇರಿದ್ದರೂ ಹಲವು ವರ್ಷಗಳಿಂದ ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ಹರಾಜು ಆಗ್ತಿದೆ. ಪ್ರತೀ ವರ್ಷ ಮುಸ್ಲಿಂ ವ್ಯಾಪಾರಿಗಳಿಂದಲೂ ಜಾತ್ರೆಯಲ್ಲಿ ವ್ಯಾಪಾರ ನಡೀತಾ ಇದ್ದು, ಆದರೆ ಈ ಬಾರಿ ಆಡಳಿತ ಮಂಡಳಿಯಿಂದಲೇ ನಿರ್ಬಂಧ ಆರೋಪ ವ್ಯಕ್ತವಾಗಿದೆ.
ಶಿವಮೊಗ್ಗದಲ್ಲಿ ಇದೆಲ್ಲ ಏನ್ ಹೊಸದಾಗಿ ಮಾಡ್ತಾರಾ? ಗೃಹ ಸಚಿವ ಪರಮೇಶ್ವರ ಉಡಾಫೆ ಉತ್ತರ!
'ಮುಸ್ಲಿಮರಿಗೆ ಅವಕಾಶ ಕೊಡದಿದ್ದರೆ ನಾವು ಅಲ್ಲಿ ಖಂಡಿತಾ ತಕರಾರು ತೆಗೀತೀವಿ'
ಇನ್ನು ಈ ಬಗ್ಗೆ ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಹೇಳಿಕೆ ನೀಡಿದ್ದು, ಬಿಜೆಪಿ ಸರ್ಕಾರ ಇದ್ದಾಗ ವ್ಯಾಪಾರದ ವಿಷಯದಲ್ಲಿ ಕೋಮು ವಿಷಬೀಜ ಭಿತ್ತಿದರು. ಆದರೆ ಈಗ ಕಾಂಗ್ರೆಸ್ ಅವಧಿಯಲ್ಲೂ ಅದೇ ಮುಂದುವರೆದಿದೆ. ಅಧಿಕಾರಿಗಳು, ಪೊಲೀಸರು ಇದನ್ನ ಕಟ್ಟುನಿಟ್ಟಾಗಿ ನೋಡಬೇಕು. ಮುಸಲ್ಮಾನರು ಬರಬಾರದು ಅಂತ ಹೇಳಲು ಇವರ್ಯಾರು? ನಾವು ದೇವಸ್ಥಾನದ ಒಳಗಡೆ ಕೇಳ್ತಾ ಇಲ್ಲ, ಎದುರಿನ ಸಾರ್ವಜನಿಕ ಜಾಗ ಕೇಳ್ತಾ ಇದೀವಿ. ಮಂಗಳೂರು ಪಾಲಿಕೆ ಮತ್ತು ಜಿಲ್ಲಾಡಳಿತ ಅದಕ್ಕೆ ಜವಾಬ್ದಾರಿ. ಮಂಗಳಾದೇವಿ ಜಾತ್ರೆಯಲ್ಲಿ ಎಲ್ಲಾ ಧರ್ಮದವರೂ ಬರ್ತಾರೆ. ಇಲ್ಲಿ ಮುಸಲ್ಮಾನರು ಬರಬಾರದು ಅಂತ ತಾಕೀತು ಮಾಡಿದ್ದಾರೆ. ಕೆಲವೊಂದು ಶಕ್ತಿಗಳು ಬರಲು ಬಿಡ್ತಿಲ್ಲ ಅಂತ ಆಡಳಿತ ಹೇಳ್ತಿದೆ. ಇದಕ್ಕೆ ಪಾಲಿಕೆ ಕಮಿಷನರ್ ಜವಾಬ್ದಾರಿ, ನಾವು ಇಲ್ಲಿ ಭಿಕ್ಷೆ ಬೇಡ್ತಾ ಇಲ್ಲ. ದೇವಸ್ಥಾನದವರು ಹೊರಗಿನವರಿಗೆ ಹರಾಜು ಪ್ರಕ್ರಿಯೆ ಕೊಟ್ಟಿದ್ದಾರೆ. ಪಾಲಿಕೆ ಜಾಗವನ್ನು ದೇವಸ್ಥಾನದವರು ಯಾರಿಗೂ ಹರಾಜು ಹಾಕೋದು ಯಾಕೆ? ಇವರು ಹಿಂದೂ ವ್ಯಾಪಾರಸ್ಥರಿಗೆ ಉಚಿತವಾಗಿ ಕೊಡ್ತಾರಾ. ಸನಾತನ ಸಂಸ್ಥೆಯವರು ಬಂದು ಆಡಳಿತಕ್ಕೆ ತಾಕೀತು ಮಾಡಿದ್ದಾರಂತೆ. ನಾವು ಜಾತ್ರಾ ವ್ಯಾಪಾರಸ್ಥರ ಸಮಿತಿ ಇದನ್ನ ಬಿಡಲ್ಲ. ನಾವು ಮಂಗಳಾದೇವಿ ಜಾತ್ರೆಯಲ್ಲಿ ಎಲ್ಲರಿಗೂ ಅವಕಾಶ ಕೊಡಬೇಕು ಅಂತೀವಿ. ಕೊಡದಿದ್ದರೆ ನಾವು ಅಲ್ಲಿ ಖಂಡಿತಾ ತಕರಾರು ತೆಗೆತೀವಿ. ಏನಾದ್ರೂ ಆದರೆ ಅದಕ್ಕೆ ಮಂಗಳೂರು ಪಾಲಿಕೆ ಮತ್ತು ಜಿಲ್ಲಾಡಳಿತ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಅನ್ಯ ಧರ್ಮದವರು ಹರಾಜಿನಲ್ಲಿ ಭಾಗವಹಿಸಲಿಲ್ಲ: ದೇವಸ್ಥಾನದ ಆಡಳಿತ ಮಂಡಳಿ
ಇನ್ನು ಈ ಆರೋಪಕ್ಕೆ ಮಂಗಳಾದೇವಿ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ದೇವಸ್ಥಾನದ ಆಡಳಿತ ಮಂಡಳಿ ಅನ್ಯಧರ್ಮೀಯರ ವ್ಯಾಪಾರ ನಿರ್ಬಂಧ ಮಾಡಿಲ್ಲ. ಕಾನೂನಿನ ಪ್ರಕಾರ ಯಾವುದೇ ನಿಬಂಧನೆಗಳಿಲ್ಲದೇ ಟೆಂಡರ್ ಕರೆಯಲಾಗಿತ್ತು. ಹರಾಜು ಕರೆದ ಬಗ್ಗೆ ಪತ್ರಿಕಾ ಪ್ರಕಟಣೆ ಕೂಡ ನೀಡಲಾಗಿತ್ತು. ಅದರಂತೆ ದೇವಸ್ಥಾನದ ಅಂಗಳದಲ್ಲಿ ಹರಾಜು ಪ್ರಕ್ರಿಯೆ ನಡೆದಿದೆ. 94 ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಆದರೆ ಯಾವುದೇ ಅನ್ಯ ಧರ್ಮದವರು ಹರಾಜಿನಲ್ಲಿ ಭಾಗವಹಿಸಲಿಲ್ಲ. ನಾವು ಯಾರಿಗೂ ಭಾಗವಹಿಸಬೇಡಿ ಎಂಬ ನಿರ್ಬಂಧ ಹಾಕಿರಲಿಲ್ಲ. ಜಿಲ್ಲಾಧಿಕಾರಿಗಳ ಸೂಚನೆ ಮತ್ತು ಮಾರ್ಗಸೂಚಿ ಅನ್ವಯ ಹಂಚಿಕೆ ಆಗಿದೆ. ಆದರೆ ಪ್ರಕ್ರಿಯೆ ಮುಗಿದ ನಂತರ ಅವರು ಬಂದು ಕೇಳಿದ್ದಾರೆ. ಆದರೆ ನಮ್ಮ ಹರಾಜು ಪ್ರಕ್ರಿಯೆ ಮುಗಿದು ಅಂಗಡಿಗಳ ಹಂಚಿಕೆ ಆಗಿದೆ. ಎಲ್ಲಾ ಸ್ಟಾಲ್ ಗಳು ಹರಾಜಾದ ಕಾರಣ ಮತ್ತೆ ಹರಾಜು ಮಾಡಲು ಆಗಲ್ಲ. ನಮಗೆ ಯಾವುದೇ ಸಂಘಟನೆಗಳು ಮುಸ್ಲಿಮರಿಗೆ ಕೊಡ ಬೇಡಿ ಅಂತ ಮನವಿ ಕೊಟ್ಟಿಲ್ಲ. ಆದರೆ ಸಮನ್ವಯ ಸಮಿತಿ ಹೆಸರಲ್ಲಿ ಅನ್ಯ ಧರ್ಮೀಯರಿಗೂ ಕೊಡಬೇಕು ಅಂತ ಮನವಿ ಕೊಟ್ಟಿದ್ದಾರೆ. ಇದು ರಥಬೀದಿಯಾದ ಕಾರಣ ದೇವಸ್ಥಾನದ ವತಿಯಿಂದಲೇ ಡಿಸಿ ಸೂಚನೆಯಂತೆ ಹರಾಜು ನಡೆದಿದೆ ಎಂದಿದ್ದಾರೆ.
ಬೀದರ್ ಮಸೀದಿ ಮೇಲೆ ಕೇಸರಿ ಬಾವುಟ ಹಾರಿಸಿದ ಹಿಂದೂ ಯುವಕರು: ಇವರ ಹಿನ್ನೆಲೆ ಏನು ಗೊತ್ತಾ?
ಪಾಲಿಕೆ ಆಗಿರೋದು ಸ್ವಾತಂತ್ರ್ಯ ಸಿಕ್ಕ ನಂತರ, ಅದಕ್ಕೂ ಮೊದಲೇ ದೇವಸ್ಥಾನ ಇದೆ: ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು
ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಮುಸ್ಲಿಮರ ವ್ಯಾಪಾರ ನಿರ್ಬಂಧ ಆರೋಪ ವಿಚಾರದಲ್ಲಿ ದೇವಸ್ಥಾನದ ರಥಬೀದಿ ರಸ್ತೆ ಪಾಲಿಕೆ ವ್ಯಾಪ್ತಿಗೆ ಸೇರುತ್ತೆ ಎಂಬ ಆರೋಪ ಹಿನ್ನೆಲೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿಗೆ ಹೆಸರು ಬಂದಿರೋದೇ ಮಂಗಳಾದೇವಿ ಕಾರಣಕ್ಕೆ. ಸಾವಿರಾರು ವರ್ಷಗಳಿಂದ ಅಲ್ಲಿ ನವರಾತ್ರಿ ಉತ್ಸವ ಆಗ್ತಾ ಇದೆ. ಪಾಲಿಕೆ ಆಗಿರೋದು ಸ್ವಾತಂತ್ರ್ಯ ಸಿಕ್ಕ ನಂತರ, ಅದಕ್ಕೂ ಮೊದಲೇ ದೇವಸ್ಥಾನ ಇದೆ. ಅದರ ಎದುರಿನ ರಸ್ತೆ ದೇವಸ್ಥಾನ ಮೂಲಕವೇ ಹರಾಜು ನಡೀತಿದೆ. ಈಗ ಮಂಗಳಾದೇವಿ ದೇವಸ್ಥಾನದ ಮುಜುರಾಯಿಗೆ ಸೇರುತ್ತದೆ. ಹಾಗಾಗಿ ಅದು ಕೂಡ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ದೇವಸ್ಥಾನದ ಮುಂಭಾಗದ ರಸ್ತೆ ಅವರೇ ಹರಾಜು ಮಾಡ್ತಾರೆ. ಮಹಾನಗರ ಪಾಲಿಕೆ ಅಲ್ಲಿ ಶುಚಿತ್ವ ಮಾಡೋ ಕೆಲಸ ಅಷ್ಟೇ ಮಾಡುತ್ತೆ. ಹಿಂದಿನ ಮೇಯರ್ ಗಳ ಅವಧಿಯಂತೆ ಈಗಲೂ ನಡೀತಾ ಇದೆ. ಹಾಗಾಗಿ ನಾವು ಯಾವುದೇ ಬದಲಾವಣೆ ಮಾಡಿಲ್ಲ ಎಂದಿದ್ದಾರೆ.