ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಗ್ರಾಮ ಪಂಚಾಯಿತಿ ಅಧಿಕಾರಿಯನ್ನು (ಪಿಡಿಒ) ತಲೆದಂಡ ಮಾಡಲಾಗಿದೆ.

ಮಂಡ್ಯ (ಜ.29): ರಾಜ್ಯದ ಸಕ್ಕರೆನಾಡು ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಬ ನಿರ್ಮಿಸಿ ಹನುಮಾ ಧ್ವಜವನ್ನು ಹಾರಿಸಲು, ಧ್ವಜ ತೆರವಿನಿಂದಾದ ಗಲಾಟೆ ಮತ್ತು ಸಂಘರ್ಷಕ್ಕೆ ನೇರವಾಗಿ ಕೆರಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೇ ನೇರ ಕಾರಣವೆಂದು ಕಾಂಗ್ರೆಸ್‌ ಸರ್ಕಾರ ಪಿಡಿಒ ಜೀವನ್.ಎಂ.ಬಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಕೆರಗೋಡು ಗ್ರಾಮದಲ್ಲಿ ಕಳೆದ 35 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ಸೇವೆಯನ್ನು ಮಾಡುತ್ತಿರುವ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ಗೆ ಗ್ರಾಮದ ರಾಮಮಂದಿರ ಮುಂಭಾಗದ ಖಾಲಿ ಸ್ವತ್ತಿನಲ್ಲಿ 108 ಅಡಿ ಬೃಹತ್ ಧ್ವಜಸ್ತಂಬ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿ (ಪಿಡಿಒ) ಜೀವನ್ ಅವರು ನಿಯಮ ಬಾಹಿರವಾಗಿ ಅನುಮತಿ ನೀಡಿದ್ದಾರೆ. ಜೊತೆಗೆ, ರಾಷ್ಟ್ರಧ್ವಜದ ಬದಲಾಗಿ ಹನುಮ ಧ್ವಜವನ್ನು ಹಾರಿಸಿದರೂ ಅದನ್ನು ತೆರವುಗೊಳಿಸದೇ ನಿರ್ಲಕ್ಷ್ಯ ತೋರಲಾಗಿದೆ. ಜೊತೆಗೆ, ಹಿರಿಯ ಅಧಿಕಾರಿಗಳು ಸ್ಥಳ ಭೇಟಿಗೆ ಬಂದಾಗ ಉಂಟಾದ ಪ್ರತಿಭಟನೆ ಹಾಗೂ ಗೊಂದಲಕ್ಕೆ ನೀವೇ ಕಾರಣವೆಂದು ಹೇಳಿ ಪಿಡಿಒ ಅವರನ್ನು ತಲೆದಂಡವನ್ನಾಗಿ ಮಾಡಿ ಅಮಾನತು ಮಾಡಲಾಗಿದೆ.

ಹನುಮಂತನ‌ ಕೆಣಕ್ಕಿದ್ದಕ್ಕೆ ಲಂಕ ದಹನವಾಯ್ತು, ಈಗ ಹನುಮಧ್ವಜ ತೆಗೆದವರ ಅವನತಿಯೂ ಆಗುತ್ತೆ: ಹೆಚ್.ಡಿ. ಕುಮಾರಸ್ವಾಮಿ

ಕೆರಗೋಡು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜೀವನ್‌.ಬಿ.ಎಂ ಅಮಾನತು ಆಗಿರುವ ಅಧಿಕಾರಿಯಾಗಿದ್ದಾರೆ. ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ತನ್ವೀರ್ ಆಶೀಫ್ ಸೇಠ್ ಅವರು 5 ಕಾರಣ ನೀಡಿ ಪಿಡಿಓ‌ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ. 

ಪಿಡಿಒ ಅಮಾನತು ಆದೇಶಕ್ಕೆ 5 ಕಾರಣ ಕೊಟ್ಟ ಸರ್ಕಾರ

  • ಗ್ರಾಮ ಪಂಚಾಯಿತಿ ಸ್ವತ್ತನ್ನು ಖಾಸಗಿಯವರಿಗೆ ನೀಡುವುದಕ್ಕೆ ಸರ್ಕಾರದ (ಜಿಲ್ಲೆ ಅಥವಾ ತಾಲೂಕು ಪಂಚಾಯಿತಿ) ಅನುಮತಿ ಕಡ್ಡಾಯ.
  • ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಖಾಸಗಿಯವರಿಗೆ ಟ್ರಸ್ಟ್‌ಗೆ ಧ್ವಜ ನಿರ್ಮಾಣಕ್ಕೆ ನೀಡಿರುವುದು.
  • ಕೆರಗೋಡು ಗ್ರಾಮದಲ್ಲಿ ಧ್ವಜ ತೆರವು ಮಾಡಲು ಬಂದ ಅಧಿಕಾರಿಗಳ ವಿರುದ್ಧ ಉಂಟಾದ ಪ್ರತಿಭಟನೆ, ಸಂಘರ್ಷಕ್ಕೆ ಪಿಡಿಓ ನೇರ ಕಾರಣ.
  • ಖಾಸಗಿಯವರಿಗೆ ಅಧಿಕಾರ ವ್ಯಾಪ್ತಿ ಮೀರಿ ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿದ ನಂತರವೂ, ರಾಷ್ಟ್ರ ಧ್ವಜ ಬಿಟ್ಟು ಹನುಮ ಧ್ವಜ ನಿರ್ಮಿಸಿದ ನಂತರ ತೆರವುಗೊಳಿಸದೇ ಕರ್ತವ್ಯ ಲೋಪ ಎಸಗಿದ್ದೀರಿ.
  • ಕೆರಗೋಡು ಗ್ರಾಮದ ಸರ್ಕಾರಿ ಸ್ವತ್ತಿನಲ್ಲಿ ಧ್ವಜ ಸ್ತಂಭದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಅನುಮತಿ ನೀಡಿದಾಗ ಷರತ್ತು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳದೆ ನಿರ್ಲಕ್ಷ ಮಾಡಲಾಗಿದೆ.