ಸಂಚಲನ ಸೃಷ್ಟಿಸಿದ ಶಾಮನೂರು ಶಿವಶಂಕರಪ್ಪ ಹೇಳಿಕೆ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆಯೊಂದು ಸಂಚಲನವನ್ನೇ ಸೃಷ್ಟಿ ಮಾಡಿದೆ.
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಎಚ್.ಎಂ.ರೇವಣ್ಣ ಅಲ್ಲ, ಯಾವ ಅಣ್ಣನನ್ನೇ ನಿಲ್ಲಿಸಿದರೂ ಗೆಲ್ಲಿಸುತ್ತೇವೆ. ಒಂದೊಮ್ಮೆ ನಾನೇ ದಾವಣಗೆರೆ ಅಭ್ಯರ್ಥಿಯಾಗಿ ನಿಂತರೂ ಅಚ್ಚರಿ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್ನ ಹಿರಿಯ ಮುಖಂಡ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೊಸ ಸಂಚಲನವನ್ನುಂಟು ಮಾಡಿದ್ದಾರೆ.
ತಾಲೂಕಿನ ಬೆಳವನೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಅವರಿಗೆ ನಮ್ಮ ಬೆಂಬಲವಿದೆ. ಅವರನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ.
ಅಧಿಕಾರದಲ್ಲಿ ಯಾರಿರುತ್ತಾರೋ ಅವರೇ ಮುಖ್ಯಮಂತ್ರಿ. ನಮ್ಮ ಪಕ್ಷದವರಿಗೆ ಒಬ್ಬ ಮುಖ್ಯಮಂತ್ರಿ, ಮತ್ತೊಂದು ಪಕ್ಷಕ್ಕೆ ಇನ್ನೊಬ್ಬ ಮುಖ್ಯಮಂತ್ರಿ ಅಂತಾ ಇರುವುದಿಲ್ಲ ಎಂದಿರುವ ಅವರು ಈ ಮೂಲಕ ಸಿದ್ದರಾಮಯ್ಯ ಬೆಂಬಲಿಗರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಆಪರೇಷನ್ ಕಮಲ ಯಶಸ್ವಿಯಾಗಲ್ಲ: ಬಿಜೆಪಿಯವರ ಬಳಿ ಸಾಕಷ್ಟುದುಡ್ಡಿದೆ. ಇದೇ ಕಾರಣಕ್ಕೆ ಆಪರೇಷನ್ ಕಮಲಕ್ಕೆ ಮುಂದಾಗುತ್ತಿದ್ದಾರೆ. ಕಳೆದ 6 ತಿಂಗಳಿನಿಂದಲೂ ಬಿಜೆಪಿಯವರು ಆಪರೇಷನ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಆಪರೇಷನ್ ಕಮಲ ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.