ಕೋರ್ಟ್ ಕಟಕಟೆಗೆ ಬಂದು ಹೇಳಿಕೆ ನೀಡಿದ ಲೋಕಾಯುಕ್ತ!
ಕೋರ್ಟ್ ಕಟಕಟೆಗೆ ಬಂದು ಹೇಳಿಕೆ ನೀಡಿದ ಲೋಕಾಯುಕ್ತ!| ಚಾಕು ಇರಿದ ಕೇಸಿನ ಬಗ್ಗೆ ನ್ಯಾ| ವಿಶ್ವನಾಥ ಶೆಟ್ಟಿಹೇಳಿಕೆ
ಬೆಂಗಳೂರು[ಫೆ.16]: ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ನ್ಯಾಯಮೂರ್ತಿಗಳು ಕೆಳ ಹಂತದ ನ್ಯಾಯಾಲಯದಲ್ಲಿ ಪ್ರಕರಣವೊಂದರ ಸಂಬಂಧ ಕಟಕಟೆಗೆ ಬಂದು ಹೇಳಿಕೆ ನೀಡಿದ ಅಪರೂಪದ ಪ್ರಸಂಗಕ್ಕೆ ನಗರದ 56ನೇ ಸೆಷನ್ಸ್ ನ್ಯಾಯಾಲಯ ಸಾಕ್ಷಿಯಾಯಿತು.
2018ರಲ್ಲಿ ತಮಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಪ್ರಕರಣದ ಸಂಬಂಧ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿಅವರು ಶನಿವಾರ ನಗರದ 56ನೇ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ನಾರಾಯಣಪ್ರಸಾದ್ ಅವರ ಮುಂದೆ ಹೇಳಿಕೆ ನೀಡಿದ್ದಾರೆ.
ಲೋಕಾಯುಕ್ತ ಕೊಲೆಯತ್ನಕ್ಕೆ ಹೊಸ ಟ್ವಿಸ್ಟ್! ಹಲ್ಲೆ ಹಿಂದೆ ವ್ಯವಸ್ಥಿತ ಸಂಚು?
ಕೆಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಸುತ್ತಿದ್ದ ದೂರುಗಳು ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣದಿಂದ ವಜಾ ಆಗುತ್ತಿವೆ ಎಂದು ಸಿಟ್ಟಾಗಿ ತೇಜರಾಮ ಶರ್ಮಾ ಎಂಬಾತ ತಮ್ಮ ಕೊಲೆಗೆ ಯತ್ನಿಸಿದ್ದರು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥಶೆಟ್ಟಿವಿಚಾರಣಾ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಅಲ್ಲದೆ, ಆರೋಪಿ ತೇಜರಾಜ ಶರ್ಮಾ ತುಮಕೂರು ಮತ್ತು ಕೋಲಾರ ಜಿಲ್ಲೆಯಲ್ಲಿರುವ ಕೆಲ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿ ಅವರನ್ನು ಬೆದರಿಸುವ ಕೆಲಸ ಮಾಡುತ್ತಿದ್ದ. ಅದೇ ಕಾರಣದಿಂದ ಲೋಕಾಯುಕ್ತಕ್ಕೆ ಆರೋಪಿ ನೀಡಿದ ಐದು ಪ್ರಕರಣಗಳಲ್ಲಿ ಮೂರು ಪ್ರಕರಣ ವಜಾ ಆಗಿತ್ತು. ಮತ್ತೆ ಎರಡು ಪ್ರಕರಣ ಉಪ-ಲೋಕಾಯುಕ್ತರ ಬಳಿ ವಿಚಾರಣಾ ಹಂತದಲ್ಲಿತ್ತು ಎಂದು ವಿವರಿಸಿದ್ದಾರೆ.
ತಾನು ಸಲ್ಲಿಸಿದ್ದ ದೂರುಗಳನ್ನು ವಜಾ ಮಾಡಿದ ಕಾರಣ ಆರೋಪಿ ಅಸಮಾಧಾನಗೊಂಡಿದ್ದ. ಇದೇ ಕಾರಣದಿಂದ ಚೂರಿ ಇರಿದಿದ್ದಾನೆ. ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಆತನ ಉದ್ದೇಶವಾಗಿತ್ತು. ಅದಕ್ಕೆ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಕೃತ್ಯ ಎಸಗಿದ್ದಾನೆ ಎಂದು ನ್ಯಾಯಾಧೀಶರಿಗೆ ವಿವರಿಸಿದ್ದಾರೆ. ಜೊತೆಗೆ, ಗಾಯಗೊಂಡ ಬಳಿಕ ಆಸ್ಪತ್ರೆಗೆ ದಾಖಲಾಗಿರುವುದರ ಬಗ್ಗೆಯೂ ನ್ಯಾಯಾಲಯದಲ್ಲಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಪ್ರಕರಣದ ಆರೋಪಿ ತೇಜರಾಜ ಶರ್ಮಾನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು. ಲೋಕಾಯುಕ್ತ ನ್ಯಾಯಾಧೀಶರ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿದೆ.
ಲೋಕಾಯುಕ್ತರ ಹತ್ಯೆಗೆ ಯತ್ನಿಸಿದ ತೇಜ್ ರಾಜ್ ಶರ್ಮ ಕೊಟ್ಟ ಕಾರಣವೇನು..?