ಲಕ್ಷ್ಮೀಗೆ ಶಾಕ್ ಕೊಡಲು ಬರ್ತಿದ್ದಾರೆ ‘ಮೈ ನೇಮ್ ಇಸ್ ಲಖನ್’?
ಬೂದಿ ಮುಚ್ಚಿದ ಕೆಂಡದಂತಿರುವ ಬೆಳಗಾವಿ ರಾಜಕೀಯ! ಲಕ್ಷ್ಮೀ ಹೆಬ್ಬಾಳ್ಕರ್ ಗೆ ಶಾಕ್ ಕೊಡಲು ಜಾರಕಿಹೊಳಿ ಬ್ರದರ್ಸ್ ಪ್ಲ್ಯಾನ್! ಲಕ್ಷ್ಮೀ ವಿರುದ್ದ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಸ್ಪರ್ಧೆ?! ಲಕ್ಷ್ಮೀಗೆ ಟಾಂಗ್ ಕೊಡಲು ಸತೀಶ್ ಹಾಕಿದ್ದಾರೆ ಜಬರದಸ್ತ್ ಪ್ಲ್ಯಾನ್
ಬೆಳಗಾವಿ(ಸೆ.8): ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಶಕ್ತಿ ಕುಗ್ಗಿಸಲು ಜಾರಕಿಹೊಳಿ ಬ್ರದರ್ಸ್ ಪ್ಲ್ಯಾನ್ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಅವರನ್ನು ಇಡೀ ಕುಟುಂಬ ಒಂದಾಗಿ ಎದುರಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮುಂದಿನ ಚುನಾವಣೆಯಲ್ಲಿ ಲಖನ್ ಜಾರಕಿಹೋಳಿ ಅವರನ್ನು ಕಣಕ್ಕಿಳಿಸಲು ಜಾರಕಿಹೊಳಿ ಸಹೋದರರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಣಕ್ಕಿಳಿಸಲು ಸತೀಶ್ ಜಾರಕಿಹೊಳಿ ಯೋಜನೆ ಸಿದ್ದಪಡಿಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಲಖನ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದಿದ್ದರೂ, ಪಕ್ಷೇತರ ಅಭ್ಯರ್ಥಿಯಾಗಿ ಸಹೋದರನನ್ನು ಕಣಕ್ಕಿಳಿಸಲು ಸತೀಶ್ ಜಾರಕಿಹೊಳಿ ಪ್ಲ್ಯಾನ್ ಮಾಡಿದ್ದಾರೆ ಎಂಬುದು ಅವರ ಆಪ್ತರ ಅಂಬೋಣ.
ಬೆಳಗಾವಿ ಪಿಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಮೇಲುಗೈ ಸಾಧಿಸಿದ್ದು, ಇದು ಬೆಳಗಾವಿ ಕೈ ಪಾಳೆಯದಲ್ಲಿ ರಾಜಕೀಯ ಕದನಕ್ಕೆ ನಾಂದಿ ಹಾಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಏಟಿಗೆ ಎದುರೇಟು ನೀಡಲು ಸತೀಶ್ ಜಾರಕಿಹೊಳಿ ಮಾಸ್ಟರ್ ಪ್ಲಾನ್ ಮಾಡಿದ್ದು, ಲಖನ್ ಜಾರಕಿಹೊಳಿ ಮೂಲಕ ಲಕ್ಷ್ಮೀ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಯಮಕನಮರಡಿ ಕ್ಷೇತ್ರದ ಉಸ್ತುವಾರಿ ಜೊತೆಗೆ, ಬೆಳಗಾವಿ ಗ್ರಾಮಾಂತರ ಕ್ಷೇತ್ರಗಳಲ್ಲಿ ಈಗಿನಿಂದಲೇ ಕಾರ್ಯ ಆರಂಭಿಸಲು ಲಖನ್ ಅವರಿಗೆಗೆ ಸತೀಶ್ ಜಾರಕಿಹೊಳಿ ಸೂಚನೆ ನೀಡುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.