ಸಂಕ್ರಾಂತಿ ಬಂದರೂ KSRTC ಸಿಬ್ಬಂದಿಗಿಲ್ಲ ಸಂಬಳ..!
ಅಳಲು ತೋಡಿಕೊಂಡ ಕೆಎಸ್ಸಾರ್ಟಿಸಿ ನೌಕರರು| ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಸರ್ಕಾರದ ನೆರವು ಪಡೆದು ವೇತನ ಪಾವತಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ| ಜ.12ನೇ ತಾರೀಖು ಕಳೆದರೂ ವೇತನವಿಲ್ಲದೆ ನೌಕರರ ಪರದಾಟ|
ಬೆಂಗಳೂರು(ಜ.13): ರಾಜ್ಯದ ಸಾರಿಗೆ ಸಂಸ್ಥೆಗಳಾದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರಿಗೆ ಈ ತಿಂಗಳಿನ ವೇತನ ಈವರೆಗೆ ಪಾವತಿಯಾಗಿಲ್ಲ. ಪರಿಣಾಮ, ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ಹಣವಿಲ್ಲದೆ ನೌಕರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೌಕರರು ಕರ್ತವ್ಯ ಬಹಿಷ್ಕರಿಸಿ ಮುಷ್ಕರ ಮಾಡಿ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ನೌಕರರಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿ ಸಾಧ್ಯವಾಗಿಲ್ಲ. ಹೀಗಾಗಿ, ತೊಂದರೆ ಅನುಭವಿಸುವಂತಾಗಿದೆ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.
ಬಸ್ ನಿಲ್ಲಿಸದೆ ಎಸ್ಕೇಪ್ ಆಗಿದ್ದ ಚಾಲಕನಿಗೆ ಸುರೇಶ್ ಕುಮಾರ್ ಕ್ಲಾಸ್
ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸರ್ಕಾರದ ನೆರವು ಪಡೆದು ವೇತನ ಪಾವತಿಸುತ್ತಿದೆ. ಸರ್ಕಾರದ ನೆರವು ನವೆಂಬರ್ಗೆ ಅಂತ್ಯವಾಗಿದ್ದು, ಡಿಸೆಂಬರ್ನಿಂದ ನಾಲ್ಕು ನಿಗಮಗಳು ತಮ್ಮ ಆದಾಯದಿಂದ ವೇತನ ಪಾವತಿಸಬೇಕಿತ್ತು. ಆದರೆ, ಡಿಸೆಂಬರ್ನಲ್ಲಿ ಸಕಾಲಕ್ಕೆ ವೇತನ ಪಾವತಿಸಿದ್ದ ನಿಗಮಗಳು, ಜನವರಿ ತಿಂಗಳ ವೇತನ ಈವರೆಗೆ ಪಾವತಿಸಿಲ್ಲ. ಜ. 12ನೇ ತಾರೀಖು ಕಳೆದರೂ ನೌಕರರಿಗೆ ವೇತನವಿಲ್ಲದೆ ಪರದಾಡುವಂತಾಗಿದೆ. ಹೀಗಾಗಿ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಿಸಲಾಗದೆ ನೌಕರರು ಮತ್ತು ಕುಟುಂಬದವರು ಸಮಸ್ಯೆ ಪಡುವಂತಾಗಿದೆ ಎಂದು ತಿಳಿಸಿದ್ದಾರೆ.