* ಸಿಂಧುತ್ವ ಸಿಗಲಿಲ್ಲವೆಂದು ಸಾರಿಗೆ ನೌಕರ ಆತ್ಮಹತ್ಯೆ* ಕಲಾಪದಲ್ಲಿ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ* ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ನೌಕರನ ಕುಟುಂಬಕ್ಕೆ ಸೂಕ್ತ ಪರಿಹಾರ ಎಂದ ಸಿಎಂ

ಬೆಂಗಳೂರು, (ಮಾ.14): ಬಾಲ್ಕಿ ಸಾರಿಗೆ ನಿಗಮದ ಡಿಪೋದಲ್ಲಿ ಚಾಲಕ/ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಓಂಕಾರ್ ರೇವಣ್ಣಪ್ಪ ಶೆರಿಕರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ ಚಾಲಕ/ನಿವಾರ್ಯಕರಾಗಿ ಕೆಲಸ ಮಾಡುತ್ತಿದ್ದ ಓಂಕಾರ್ ರೇವಣ್ಣಪ್ಪ ಸಿಂಧುತ್ವ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿದರು. 

ಹಿಜಾಬ್ ವಿವಾದ ಅಂತಿಮ ಘಟ್ಟಕ್ಕೆ, ಹೈಕೋರ್ಟ್​ನಿಂದ​ ನಾಳೆ (ಮಂಗಳವಾರ) ತೀರ್ಪು ಪ್ರಕಟ

ಇಂದು(ಸೋಮವಾರ) ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಿಎಂ, ಆತ್ಮಹತ್ಯೆ ಮಾಡಿಕೊಂಡಿರುವ ಓಂಕಾರ್ ಅವರ ಕುಟುಂಬದವರಿಗೆ ಮಾನವೀಯತೆ ನೆಲೆಯಲ್ಲಿ ಪರಿಹಾರ ಒದಗಿಸಲಾಗುವುದು ಹಾಗೂ ಅನುಕಂಪದ ಆಧಾರದ ಮೇಲೆ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಸಿಂಧುತ್ವ ಪ್ರಮಾಣ ಪತ್ರ ನೀಡಿಕೆಯಲ್ಲಾಗುತ್ತಿರುವ ತೊಂದರೆಯನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಚಾಲಕ/ನಿವಾರ್ಯಕರಾಗಿ ಓಂಕಾರ್ ರೇವಣ್ಣಪ್ಪ ಕೆಲಸ ಮಾಡುತ್ತಿದ್ದರು. ಸಿಂಧುತ್ವ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಎಸ್ಟಿಗೆ ಸೇರಿದ 12 ಜಾತಿಗಳಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಪರಿಶೀಲನೆ ಮಾಡಲು ಆದೇಶಿಸಲಾಗಿದೆ.ಮಹಾರಾಷ್ಟ್ರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಆದೇಶವಿದೆ.

ಗೋಂಡಾ ಸಮುದಾಯ ವಿಶೇಷ ಬುಡಕಟ್ಟು ಸಮುದಾಯವಾಗಿದೆ. ಸಿಂಧುತ್ವ ಪ್ರಮಾಣ ಪತ್ರದ ಸಮಸ್ಯೆ ಕುರಿತಂತೆ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮೊದಲಿನ ಪರಿಸ್ಥಿತಿ ಜಾರಿಗೆ ತರುವ ಬಗ್ಗೆ ತೀರ್ಮಾನಿಸಲಾಗುವುದು. ಸಿಂಧುತ್ವ ಪ್ರಮಾಣ ಪತ್ರದ ಬಗ್ಗೆ ದೂರುಗಳಿದ್ದರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಕಳುಹಿಸಲಾಗುತ್ತಿತ್ತು. ಈಗ ಎಲ್ಲ 12 ಜಾತಿಗಳ ವಿಚಾರ ಪರಿಶೀಲನೆಗೆ ಹೋಗುತ್ತಿದೆ. ಈ ವಿಚಾರದ ಬಗ್ಗೆ ಇಂದೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಬೊಮ್ಮಾಯಿ ಹೇಳಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಓಂಕಾರ್ ರೇವಣ್ಣಪ್ಪ ಹುಮ್ನಾಬಾದ್‍ನವರಾಗಿದ್ದು, ಚಾಲಕ ಕಂ ನಿರ್ವಾಹಕರಾಗಿದ್ದು, ಬಾಲ್ಕಿ ಡಿಪೋದಲ್ಲಿ 8 ವರ್ಷದಿಂದ ಕೆಲಸ ಮಾಡುತ್ತಿದ್ದರು. ಅವರು ಸಿಂಧುತ್ವ ಪ್ರಮಾಣ ಪತ್ರ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಳೆದ ಜ.16ರಂದು ಸರ್ಕಾರ ಆದೇಶ ಮಾಡಿ ಸಿಂಧುತ್ವ ಪ್ರಮಾಣ ಪತ್ರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಪಡೆಯಬೇಕು ಎಂದಿದೆ. ಇದು ತೊಂದರೆಯಾಗುತ್ತಿದೆ.

ಮೊದಲು ಜಿಲ್ಲಾಕಾರಿಗಳ ನೇತೃತ್ವದ ಸಮಿತಿಯೇ ಇತ್ಯರ್ಥ ಮಾಡಿ ಪ್ರಮಾಣಪತ್ರ ಕೊಡುತಿತ್ತು. ಈ ಆದೇಶವನ್ನು ವಾಪಸ್ ಪಡೆದು ಮೊದಲಿನ ರೀತಿಯಲ್ಲೇ ಕೊಡಬೇಕು. ಮೃತಪಟ್ಟ ಚಾಲಕನ ಕುಟುಂಬದವರಿಗೆ ಪರಿಹಾರ ಹಾಗೂ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.