ಪ್ರತಿಭಟನೆಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಿದ್ಧತೆ: ಸರ್ಕಾರಕ್ಕೆ ಮತ್ತೊಂದು ತಲೆ ನೋವು ಶುರು..!
ಬಿಎಂಟಿಸಿ ನೌಕರರಿಗೆ ಬೋನಸ್ ಕಾಯ್ದೆ 1965ರ ಪ್ರಕಾರ ನೀಡಬೇಕಾದ ಶೇ. 8.33ರಷ್ಟು ಬೋನಸ್ನ್ನು ಕೂಡಲೆ ಬಿಡುಗಡೆ ಮಾಡಬೇಕು, ಹಿರಿಯ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು, 2020ರ ಜನವರಿಯಿಂದ 2023ರ ಫೆಬ್ರವರಿ ಅವಧಿಯಲ್ಲಿ ವೇತನ ಹೆಚ್ಚಳದ ಬಾಕಿ ಮೊತ್ತ ಕೂಡಲೆ ಪಾವತಿಸುವಂತೆ ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದ್ದಾರೆ.

ಬೆಂಗಳೂರು(ಸೆ.06): ಶಕ್ತಿ ಯೋಜನೆಯಿಂದ ಬಸ್, ಆಟೋ, ಕ್ಯಾಬ್ ಸೇರಿದಂತೆ ಇನ್ನಿತರ ಖಾಸಗಿ ಸಾರಿಗೆ ಉದ್ಯಮಕ್ಕಾಗಿರುವ ಸಮಸ್ಯೆಗೆ ಪರಿಹಾರ ನೀಡುವಂತೆ ಖಾಸಗಿ ಸಾರಿಗೆ ಸಂಘಟನೆಗಳು ಸೆ. 11ರಂದು ಬೆಂಗಳೂರಿನಲ್ಲಿ ಸಾರಿಗೆ ಬಂದ್ ನಡೆಸುತ್ತಿವೆ. ಅದರ ಬೆನ್ನಲ್ಲೇ ಬಿಎಂಟಿಸಿ, ಕೆಎಸ್ಆರ್ಟಿಸಿ ನೌಕರರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದು, ಸಾರಿಗೆ ಸಚಿವರಿಗೆ ಮತ್ತೊಂದು ತಲೆ ನೋವು ಶುರುವಾಗುವ ಲಕ್ಷಣಗಳಿವೆ.
ಬಿಎಂಟಿಸಿ ನೌಕರರಿಗೆ ಬೋನಸ್ ಕಾಯ್ದೆ 1965ರ ಪ್ರಕಾರ ನೀಡಬೇಕಾದ ಶೇ. 8.33ರಷ್ಟು ಬೋನಸ್ನ್ನು ಕೂಡಲೆ ಬಿಡುಗಡೆ ಮಾಡಬೇಕು, ಹಿರಿಯ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು, 2020ರ ಜನವರಿಯಿಂದ 2023ರ ಫೆಬ್ರವರಿ ಅವಧಿಯಲ್ಲಿ ವೇತನ ಹೆಚ್ಚಳದ ಬಾಕಿ ಮೊತ್ತ ಕೂಡಲೆ ಪಾವತಿಸುವಂತೆ ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದ್ದಾರೆ.
ಶಕ್ತಿ ಯೋಜನೆಯ ಬಸ್ಗಳಿಗೆ ಕಲ್ಲೆಸೆದ ಕಾಲೇಜು ವಿದ್ಯಾರ್ಥಿಗಳು: ಗಾಜುಗಳು ಪುಡಿ, ಪುಡಿ
ಇನ್ನು ಕಾರ್ಮಿಕ ಮುಖಂಡ ಅನಂತಸುಬ್ಬರಾವ್ ನೇತೃತ್ವದ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಬಗ್ಗೆ ಚರ್ಚಿಸಲಾಗುತ್ತಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ಎಲ್ಲ ನಾಲ್ಕು ನಿಗಮಗಳಿಗೆ ಮನವಿಯನ್ನೂ ಸಲ್ಲಿಸಲಾಗಿದೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ ತಿಳಿಸಲಾಗಿದೆ. ಹೀಗಾಗಿ ಸಾರಿಗೆ ಸಚಿವರು ಖಾಸಗಿ ವಾಹನ ಸಂಘಗಳ ಪ್ರತಿಭಟನೆ ನಂತರ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ ಎದುರಿಸಬೇಕಿದೆ.