ಜಿಲ್ಲೆಯ ಜೀವನದಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 84 ಅಡಿಗೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದ ನೀರಿನ ಮಟ್ಟದಲ್ಲಿ 18 ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಾಗಿದೆ. 

ಮಂಡ್ಯ (ಮೇ.21): ಜಿಲ್ಲೆಯ ಜೀವನದಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 84 ಅಡಿಗೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯದ ನೀರಿನ ಮಟ್ಟದಲ್ಲಿ 18 ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ124.80 ಅಡಿ ಇದ್ದು, ಶನಿವಾರ ಜಲಾಶಯದಲ್ಲಿ 84.80 ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಆಣೆಕಟ್ಟೆಯಲ್ಲಿ 102.80 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಪ್ರಸ್ತುತ ಜಲಾಶಯಕ್ಕೆ 508 ಕ್ಯುಸೆಕ್‌ ನೀರು ಮಾತ್ರ ಹರಿದು ಬರುತ್ತಿದ್ದು ಅಣೆಕಟ್ಟೆಯಿಂದ 3726 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. 

ಕಳೆದ ವರ್ಷ ಇದೇ ದಿನ ಜಲಾಶಯದ ಒಳಹರಿವು 16814 ಕ್ಯುಸೆಕ್‌ ಇದ್ದರೆ, 6242 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿತ್ತು. ಮುಂಗಾರು ಪೂರ್ವ ಮಳೆ ಈ ಬಾರಿ ಕೈ ಕೊಟ್ಟಿದೆ. ಕಳೆದ ವರ್ಷ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿತ್ತು. ಇದರ ಪರಿಣಾಮ ಬೇಸಿಗೆ ಅವಧಿಯಲ್ಲೇ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿತ್ತು. ಈ ಬಾರಿ ಮಳೆಯ ಕೊರತೆಯಿಂದ ದಿನೇ ದಿನೇ ಜಲಾಶಯದ ನೀರಿನ ಮಟ್ಟಕುಸಿಯತೊಡಗಿದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್‌ಡಿಕೆ ಮುಂದಿದೆ ಸಾಕಷ್ಟು ಅಭಿವೃದ್ಧಿ ಸವಾಲುಗಳು

ಪ್ರಸ್ತುತ ಜಲಾಶಯದಲ್ಲಿ ಕುಡಿಯುವ ನೀರಿಗೆ ಅಗತ್ಯವಿರುವಷ್ಟುನೀರು ಮಾತ್ರ ಸಂಗ್ರಹವಾಗಿದೆ. ಬೇಸಿಗೆ ಮುಗಿಯುವವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಮನವಾದರೆ ರೈತರು ನಿರಾಳರಾಗಲಿದ್ದಾರೆ. ಕೃಷಿ ಚಟುವಟಿಕೆ ಆರಂಭಕ್ಕೆ ಸಿದ್ಧರಾಗಿರುವ ರೈತರು ಈಗ ಮುಂಗಾರು ಮಳೆಯತ್ತ ದೃಷ್ಟಿಹರಿಸಿದ್ದಾರೆ.

2018 ರಿಂದ ಇಲ್ಲಿಯವರೆಗೂ ನಿರೀಕ್ಷೆಯಂತೆ ಒಂದೆರಡು ವರ್ಷ ದಾಖಲೆಯ ಮಳೆಯಾಗಿದೆ. ನಾಲ್ಕು ವರ್ಷದಲ್ಲಿ ನೂರಾರು ಟಿಎಂಸಿ ಅಡಿಯಷ್ಟುನೀರು ಹರಿದು ಸಮುದ್ರ ಪಾಲಾಗಿದೆ. ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿರುವ ಕಾರಣ ಏಪ್ರಿಲ್‌ ತಿಂಗಳು ಮುಗಿಯಲಾರಂಭಿಸುತ್ತಿದ್ದಂತೆ ಕೆಆರ್‌ಎಸ್‌ ಜಲಾಶಯದಲ್ಲಿ ನೀರು ಎಷ್ಟಿದೆ ಎನ್ನುವುದರ ಮೇಲೆ ಎಲ್ಲರ ಗಮನ ಹರಿಯುತ್ತದೆ.

ಸಕ್ಕರೆ ನಾಡಲ್ಲಿ ಇಬ್ಬರ ಪಾಲಿಗೂ ಸಿಹಿಯೇ?: ನಿರೀಕ್ಷೆಯಲ್ಲಿ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ

ಉತ್ತಮ ಮಳೆ ಬಂದಾಗ ನೀರನ್ನು ಸಂರಕ್ಷಿಸಿಡಲು ಕೆರೆಗಳಿಗೆ ನಾಲಾ ಸಂಪರ್ಕ ಜಾಲ, ಹಲವೆಡೆ ಹೊಸ ಕೆರೆಗಳ ನಿರ್ಮಾಣ ಮಾಡುವ, ಕೆರೆಗಳಲ್ಲಿ ತುಂಬಿರುವ ಹೂಳೆತ್ತಿಸಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ , ಅಂತರ್ಜಲ ವೃದ್ಧಿಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿರುವುದರಿಂದ ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಲೇ ಇರುವಂತಾಗಿದೆ.