ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ನಾರಾಯಣಗೌಡ ಮಂಡ್ಯದಲ್ಲಿ ಪ್ರತ್ಯಕ್ಷ?
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೋವೊಂದನ್ನು ಹರಿಯಬಿಟ್ಟಿದ್ದ ಕೆ. ಆರ್. ಪೇಟೆ ಶಾಸಕ ಮಂಡ್ಯದಲ್ಲಿ ಕಾಣಿಸಿಕೊಂಡಿದ್ದಾರೆನ್ನಲಾಗಿದೆ.
ಮಂಡ್ಯ[ಫೆ.10]: ಫುಡ್ ಪಾಯಿಸನ್ ಆಗಿದೆ ಎಂದು ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೋವೊಂದನ್ನು ಹರಿಬಿಟ್ಟು, ಜೆಡಿಎಸ್ ನಾಯಕರನ್ನು ಹಾಗೂ ಜನರನ್ನು ನಂಬಿಸಿದ್ದ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಶನಿವಾರ ಮಂಡ್ಯದಲ್ಲಿ ದಿಢೀರನೇ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ?
ಬಜೆಟ್ ಮಂಡನೆ ಮಾಡುವ ದಿನ ನಾನು ಸದನದಲ್ಲಿ ಹಾಜರು ಇರುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರಿಗೆ ಭರವಸೆ ನೀಡಿದ್ದ ನಾರಾಯಣಗೌಡ ಶುಕ್ರವಾರ ಸದನಕ್ಕೆ ಗೈರಾಗಿದ್ದರು. ಇವರು ಕಳೆದ ನಾಲ್ಕು ದಿನಗಳಿಂದ ಯಾರ ಕೈಗೂ ಸಿಗದೇ ಇರುವುದರಿಂದ ಆಪರೇಷನ್ ಕಮಲದ ಹಿನ್ನೆಲೆಯಲ್ಲಿ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.
ಶನಿವಾರ ಮಂಡ್ಯದ ಹೊಸಹಳ್ಳಿ ಬಡಾವಣೆಯಲ್ಲಿರುವ ತಮ್ಮ ತಾಯಿ ಸಂಬಂಧಿಕರ ಮನೆಯ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಮಧ್ಯಾಹ್ನ 2.30 ವೇಳೆಗೆ ಆಗಮಿಸಿ ಪ್ರಸಾದ ಸ್ವೀಕರಿಸಿ ತಕ್ಷಣವೇ ಹೊರಟು ಹೋದರು. ಈ ಸಂದರ್ಭದಲ್ಲಿ ಯಾವುದೇ ಫೋಟೋ, ವಿಡಿಯೋ ಮಾಡದಂತೆ ಪತ್ರಕರ್ತರಿಗೆ ತಾಕೀತು ಮಾಡಿದರು. ಸದನಕ್ಕೆ ತಾವು ಗೈರಾಗಿರುವ ಬಗ್ಗೆ ನೋ ಕಾಮೆಂಟ್ಸ್ ಎಂದಷ್ಟೇ ಹೇಳಿ ಜಾಗ ಖಾಲಿ ಮಾಡಿದರು ಎನ್ನಲಾಗಿದೆ.