ಜಪ್ತಿ ಮಾಡಿದರೆ ಬಿಡಿಸಿಕೊಡಲು ಹೋಗುತ್ತೇವೆ. ಕೇಸ್‌ ಹಾಕಿದರೆ, ಜೈಲ್‌ ಬರೋ ಚಳವಳಿ ಮಾಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌  ಹೇಳಿದ್ದಾರೆ

ಮೈಸೂರು (ಜ.26): ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ರೈತರು ಟ್ರ್ಯಾಕ್ಟರ್‌ ಸಮೇತ ಬರಲಿದ್ದಾರೆ. ಒಮ್ಮೆ ಟ್ರ್ಯಾಕ್ಟರ್‌ ಜಪ್ತಿ ಮಾಡಿದರೆ ಅದನ್ನು ನಾವೇ ಬಿಡಿಸಿಕೊಡಲು ಹೋಗ್ತೀವಿ. ಕೇಸ್‌ ಹಾಕಿದರೆ, ಜೈಲ್‌ ಬರೋ ಚಳವಳಿ ಮಾಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ನೋವು ಹೇಳಿಕೊಳ್ಳುವ ಹಕ್ಕಿದೆ. ರೈತರ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. ಕಾಂಗ್ರೆಸ್‌ ಪಕ್ಷದ ಪ್ರತಿಭಟನೆ ವೇಳೆಯೂ ತಡೆದಿದ್ದರು. ನಮ್ಮದು ಪಾರ್ಟಿ ಪ್ರತಿಭಟನೆ ಆಗಿತ್ತು. ಆದರೆ, ರೈತರ ಪ್ರತಿಭಟನೆ ಪರವಾಗಿ ಸರ್ಕಾರವೇ ನಿಂತುಕೊಳ್ಳಬೇಕು. ಅವರು ರೈತ ಧ್ವನಿಯಾಗಬೇಕು ಎಂದು ತಿಳಿಸಿದರು.

'ಈ ಸರ್ಕಾರ ಬಲಿಷ್ಠವಾಗಿದೆ, ಎಲ್ಲರೂ ಒಗ್ಗಟ್ಟಾಗಿದ್ದಾರೆ' ...

ಪೊಲೀಸರೇ ನೀವು ಸರ್ಕಾರದ ಕೈಗೊಂಬೆಯಾಬೇಡಿ, ನೀವು ಎಲ್ಲರಿಗೂ ಒಂದೇ ನ್ಯಾಯ ಕೊಡಿ. ಸುಪ್ರೀಂ ಕೋರ್ಟ್‌ ಸಹ ಪ್ರತಿಭಟನೆ ಮಾಡಬೇಡಿ ಎಂದು ಹೇಳಿಲ್ಲ. ಜ.26 ರಂದು ರಜಾ ಇದೆ, ಯಾವ ಟ್ರಾಫಿಕ್‌ ಸಮಸ್ಯೆ ಆಗುವುದಿಲ್ಲ. ಅನ್ನದಾತ ಅನ್ನ ಕೊಟ್ಟರೆ ಮಾತ್ರ ನಾವು ಇರೋದು. ಜಿಲ್ಲೆಗಳಲ್ಲಿ ರೈತರನ್ನು ತಡೆಯುತ್ತಿದ್ದಾರೆ. ಚಾಲಕರನ್ನು ಹೆದರಿಸುತ್ತಿದ್ದಾರೆ. ಕಾಂಗ್ರೆಸ್‌ ರೈತರ ಬೆಂಬಲವಾಗಿ ನಿಂತುಕೊಳ್ಳುತ್ತದೆ ಎಂದು ಹೇಳಿದರು.